Mahabharata: ನೂರೈದು ಸಹೋದರರಿದ್ದರೂ ಅನಾಥೆಯಾದ ರಾಜಕುಮಾರಿ!

Published : Oct 18, 2025, 09:25 PM IST
dushala mahabharata

ಸಾರಾಂಶ

Mahabharata ನೂರು ಕೌರವರು ಮತ್ತು ಐದು ಪಾಂಡವರ ಏಕೈಕ ಸಹೋದರಿ ದುಶ್ಶಲೆಯು ಬಾಲ್ಯದಲ್ಲಿ ಎಲ್ಲರಿಂದ ಪ್ರೀತಿಸಲ್ಪಟ್ಟಳು. ಆದರೆ, ನಂತರ ಆಕೆಯ ಜೀವನವು ದುರಂತಮಯವಾಯಿತು. ನೂರೈದು ಸಹೋದರರಿದ್ದರೂ ಆಕೆಯ ಬದುಕು ದುಃಖದಲ್ಲಿಯೇ ಕಳೆಯಿತು.

ಮಹಾಭಾರತದ (Mahabharata) ಕೌರವರು- ಪಾಡವರ ವೈರ, ಅದರಿಂದ ನಡೆದ ಕುರುಕ್ಷೇತ್ರ ಯುದ್ಧದ ಕಥೆ ನಿಮಗೆ ಗೊತ್ತಿರುವುದೇ ತಾನೆ. ಕೌರವರು ನೂರು ಮಂದಿ, ಪಾಂಡವರು ಐದು ಮಂದಿ ಎಂಬುದೂ ನಿಮಗೆ ಗೊತ್ತು. ಹಾಗೇ ನೂರು ಮಂದಿ ಕೌರವರ ಜೊತೆಗೆ ಜನಿಸಿದ ಒಬ್ಬಳೇ ಒಬ್ಬಳು ತಂಗಿಯ ಬಗ್ಗೆ ನಿಮಗೆ ಹೆಚ್ಚು ಗೊತ್ತಿರಲಾರದು. ಆಕೆಯ ಹೆಸರು ದುಶ್ಶಲೆ. ಯುದ್ಧದ ನಂತರ ಬಹುಕಾಲ ಉಳಿದವಳು ಇವಳು. ಮಹಾಭಾರತದ ಕವಿ ವೇದವ್ಯಾಸರು ಇವಳ ಬಗ್ಗೆ ಹೆಚ್ಚೇನೂ ಬರೆದಿಲ್ಲ. ಆದರೆ ಬರೆದ ಸ್ವಲ್ಪ ಕತೆಯಿಂದಲೇ ನಾವು ಆಕೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬಹುದಾಗಿದೆ.

ರಾಜ ಧೃತರಾಷ್ಟ್ರ ಮತ್ತು ರಾಣಿ ಗಾಂಧಾರಿಗೆ ಏಕೈಕ ಪುತ್ರಿಯಾಗಿ, ನೂರು ಮಂದಿ ಕೌರವ ಸಹೋದರರ ಮುದ್ದಿನ ತಂಗಿಯಾಗಿ ಜನಿಸಿದ ಈಕೆಯನ್ನು ಎಲ್ಲರೂ ಪ್ರೀತಿಯಿಂದಲೇ ಕಾಣುತ್ತಿದ್ದರು. ಪಾಂಡವರು ಸಹ ಆಕೆಯನ್ನು ಅಕ್ಕರೆಯಿಂದ ಕಾಣುತ್ತಿದ್ದರು. ದ್ರೋಣಾಚಾರ್ಯ ಹಾಗೂ ಕೃಪಾಚಾರ್ಯರ ಗುರುಕುಲದಲ್ಲಿ ಎಲ್ಲರೂ ಒಟ್ಟಾಗಿ ಕಲಿಯುತ್ತಿರುವಾಗ ಪಾಂಡವರು- ಕೌರವರ ನಡುವೆ ದ್ವೇಷ ಹುಟ್ಟಿಕೊಂಡಿತು. ಯಾವಾಗಲೂ ಜಗಳ ಉಂಟಾಗುತ್ತಿತ್ತು. ಭೀಮನೊಬ್ಬನೇ ಎಲ್ಲ ಕೌರವರನ್ನೂ ಬಡಿದುಹಾಕುತ್ತಿದ್ದ. ಆದರೆ ಪಾಂಡವರೆಲ್ಲ ದುಶ್ಶಲೆಯನ್ನು ಪ್ರೀತಿಯಿಂದ, ತಮ್ಮ ಸ್ವಂತ ಸಹೋದರಿಯಂತೆಯೇ ನೋಡಿಕೊಳ್ಳುತ್ತಿದ್ದರು. ದುಶ್ಶಲೆಯು ಸಹ ಯಾವಾಗಲೂ ಪಾಂಡವರನ್ನು ತನ್ನ ಸ್ವಂತ ಸಹೋದರರಂತೆ ಕಾಣುತ್ತಿದ್ದಳು.

ಸುಂದರಿ ದುಶ್ಶಲೆಯ ಬಾಲ್ಯ ಹೇಗಿತ್ತು?

ಸುಂದರಿ ದುಶ್ಶಲೆಯ ಬಾಲ್ಯ ಪ್ರೀತಿಯಿಂದ ತುಂಬಿದ್ದರೂ, ಆಕೆಯ ಮುಂದಿನ ಜೀವನವು ದುಃಖದಿಂದ ತುಂಬಿತ್ತು. ಸಿಂಧು ದೇಶದ ರಾಜ ವೃದ್ಧಕ್ಷತ್ರ ಎಂಬಾತನ ಮಗ ಜಯದ್ರಥನೊಂದಿಗೆ ಆಕೆಯ ಮದುವೆ ಮಾಡಲಾಯಿತು. ಆತನನ್ನು ಮದುವೆಯಾದ ದಿನದಿಂದಲೇ ಅವಳ ಸಂಕಷ್ಟ ಪ್ರಾರಂಭವಾಯಿತು. ಆತನನ್ನು ಸೈಂಧವ ಎಂದೂ ಕರೆಯುತ್ತಾರೆ. ಅವನು ಸ್ವಭಾವತಃ ಲಂಪಟ, ದುಷ್ಟನಾಗಿದ್ದ. ಇವರಿಗೆ ಸುರಥ ಎಂಬ ಮಗ ಜನಿಸಿದ. ಜಯದ್ರಥನು ಶಕ್ತಿಶಾಲಿಯೂ ಆಗಿದ್ದ. ಒಮ್ಮೆ, ಪಾಂಡವರು ವನವಾಸದಲ್ಲಿದ್ದಾಗ, ಅವರಿಲ್ಲದ ಸಮಯದಲ್ಲಿ ಕುಟೀರದಲ್ಲಿ ಒಂಟಿಯಾಗಿದ್ದ ದ್ರೌಪದಿಯನ್ನು ಅಪಹರಿಸಿದ. ಭೀಮಾರ್ಜುನರು ಅವನನ್ನು ಬೆನ್ನಟ್ಟಿ, ಕೊಲ್ಲಲು ಮುಂದಾದರು. ಆದರೆ ತಂಗಿಯ ಗಂಡ, ಆಕೆ ವಿಧವೆಯಾದಿರಲಿ ಎಂಬ ಕಾರಣದಿಂದ ಆತನನ್ನು ಕೊಲ್ಲದೆ ತಲೆ ಬೋಳಿಸಿ ಅವಮಾನ ಮಾಡಿ ಬಿಟ್ಟುಬಿಟ್ಟರು.

ಕೋಪದಿಂದ ಜಯದ್ರಥ ಶಿವನನ್ನು ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡ. ಅರ್ಜುನನನ್ನು ಹೊರತುಪಡಿಸಿ ಎಲ್ಲಾ ಪಾಂಡವರನ್ನು ಯುದ್ಧದಲ್ಲಿ ಒಂದು ದಿನದ ಮಟ್ಟಿಗೆ ಸೋಲಿಸುವ ವರಬಲ ಪಡೆದ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅಭಿಮನ್ಯುವನ್ನು ಕೊಲ್ಲು ಸಹಾಯ ಮಾಡಿದ ಜಯದ್ರಥನನ್ನು ಅರ್ಜುನ ಶಿರಚ್ಛೇದ ಮಾಡಿ ಕೊಂದುಹಾಕಿದ. ದುಶ್ಶಲೆ ವಿಧವೆಯಾದಳು. ಮುಂದೆ ಮಗ ಸುರಥನನ್ನು ರಾಜನನ್ನಾಗಿಸಿ ಸಿಂಧು ದೇಶದಲ್ಲಿ ಬದುಕಿದ್ದಳು.

ಮಗನನ್ನೂ ಕಳೆದುಕೊಂಡ ದುಶ್ಯಲೆ

ಮುಂದೆ ಹಲವು ವರ್ಷಗಳ ಬಳಿಕ ಪಾಂಡವರು ಅಶ್ವಮೇಧ ಯಾಗ ಮಾಡಿದರು. ಯಾಗದ ಕುದುರೆ ಸಿಂಧು ದೇಶಕ್ಕೆ ಬಂದಿತು. ಅದರ ಜೊತೆಗೆ ಅರ್ಜುನನ ನೇತೃತ್ವದಲ್ಲಿ ದೊಡ್ಡ ಸೈನ್ಯ. ಇದನ್ನು ಕಂಡು, ತನ್ನ ತಂದೆಯಂತೆಯೇ ತನ್ನನ್ನೂ ಪಾರ್ಥ ಕೊಲ್ಲುವನೆಂದು ಹೆದರಿ ಸುರಥ ಸತ್ತೇ ಹೋದ. ದುಶ್ಶಲೆ ಈಗ ಮಗನನ್ನೂ ಕಳೆದುಕೊಂಡಳು. ಅಷ್ಟು ಹೊತ್ತಿಗಾಗಲೇ ಸುರಥನಿಗೆ ಮದುವೆಯಾಗಿ ಒಬ್ಬ ಮಗನೂ ಹುಟ್ಟಿದ್ದ. ಮೊಮ್ಮಗನನ್ನು ಕರೆದುಕೊಂಡು ದುಶ್ಶಲೆ ಅರ್ಜುನನ ಬಳಿಗೆ ಬಂದು ಗೋಳಾಡಿದಳು.

ಅರ್ಜುನ ದುಶ್ಶಲೆಗೆ ಅಭಯ ನೀಡಿದ. ಆಕೆಯ ಮೊಮ್ಮಗನನ್ನು ಸಿಂಧು ದೇಶದ ರಾಜನನ್ನಾಗಿ ಮಾಡಿದ. ನೂರೈದು ಬಲಿಷ್ಠ ಸಹೋದರರು ಇದ್ದರೂ ದುಶ್ಶಲೆ ಜೀವನಪೂರ್ತಿ ಕಷ್ಟ- ದುಃಖಗಳನ್ನು ಅನುಭವಿಸಿದ್ದಳು ಎಂದು ಇದರಿಂದ ತೀರ್ಮಾನಕ್ಕೆ ಬರಬಹುದು. ಬಾಲ್ಯ ಹೊರತುಪಡಿಸಿದ ನಂತರದ ಕಾಲದಲ್ಲಿ ಆನಂದವನ್ನು ವಿಧಿ ಅವಳ ಹಣೆಯಲ್ಲಿ ಬರೆದಿರಲಿಲ್ಲ.

 

PREV
Read more Articles on
click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ನಾಳೆ ಡಿಸೆಂಬರ್ 17 ರಂದು ಲಕ್ಷ್ಮಿ ನಾರಾಯಣ ಯೋಗ, ಐದು ರಾಶಿಗೆ ಬಂಪರ್‌ ಲಾಭ