ಜಾತಕದಲ್ಲಿರುವ ಮನೆಗಳ ಅರ್ಥವೇನು?

By Web DeskFirst Published Oct 22, 2018, 1:29 PM IST
Highlights

ಭವಿಷ್ಯ ಹೇಳುವುದು ಈಗೀಗ ಒಂದು ಒಳ್ಳೆ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ಈ ಶಾಸ್ತ್ರ ಅಷ್ಟು ಸುಲಭವೇ? ಶಾಸ್ತ್ರೋಕ್ತವಾಗಿ ಕಲಿತರೆ ಭವಿಷ್ಯ ಹೇಳುವುದು ಸುಲಭ. ಸುವರ್ಣನ್ಯೂಸ್.ಕಾಮ್ ನಿಮಗೆ ಜಾತಕ ನೋಡುವುದ ಹೇಳಿ ಕೊಡುತ್ತೆ.

ರಹಸ್ಯ ತಿಳಿದುಕೊಳ್ಳಿ, ಜಾತಕ ನೋಡುವುದ ಕಲಿತು ಕೊಳ್ಳಿ

ಭಾಗ-2

ಜ್ಯೋತಿಷ ಶಾಸ್ತ್ರದ ಮಹಾ ಜ್ಞಾನಿ,  ಋಷಿ ಸದೃಷ ವ್ಯಕ್ತಿ ವರಾಹ ಮಿಹಿರರು. ಅವರು ಬೃಹಜ್ಜಾತಕವನ್ನು ಬರೆಯುವಾಗ ಒಂದು ಮಾತನ್ನ ಹೇಳ್ತಾರೆ : ‘ಭೂಯೋಭಿ: ಪಟುಬುದ್ಧಿ: ಪಟುಧಿಯಾಂ ಹೋರಾ ಫಲಜ್ಞಪ್ತಯೇ ಶಬ್ದ ನ್ಯಾಯ ಸಮನ್ವಿತೇಷು ಬಹುಶ:ಶಾಸ್ತ್ರೇಷು ದೃಷ್ಟೇಶ್ವಪಿ, ಹೋರಾತಂತ್ರ ಮಹಾರ್ಣವ ಪ್ರತರಣೇ ಭಗ್ನೋದ್ಯಮಾನಾಮಹಂ ಸ್ವಲ್ಪಂ ವೃತ್ತ ವಿಚಿತ್ರಂ ಅರ್ಥ ಬಹುಲಂ ಶಾಸ್ತ್ರಂ ಪ್ಲವಂ ಪ್ರಾರಭೇ’ ಅಂತ. ಏನು ಇದರ ಅರ್ಥ? 

ನೋಡಿ ನಮ್ಮಲ್ಲಿ ಆರು ಶಾಸ್ತ್ರಗಳಿವೆ 1. ಶಿಕ್ಷಾ 2 ವ್ಯಾಕರಣ 3 ಛಂದಸ್ಸು 4 ನಿರುಕ್ತ 5 ಜ್ಯೋತಿಷ್ಯ 6 ಕಲ್ಪ ಅಂತ ಇವುಗಳನ್ನ ವೇದಗಳ ಅಂಗಗಳು ಅಂತ ಕರೀತಾರೆ. ಇವುಗಳ ಸಹಾಯ ಇಲ್ಲದೆ ವೇದವನ್ನ  ಅರ್ಥ ಮಾಡಿಕೊಳ್ಳುವುದು ಕಷ್ಟ. 

ಈ ಆರು ಶಾಸ್ತ್ರಗಳಲ್ಲಿ ಮೊದಲನೆಯದಾದ ಶಿಕ್ಷಾ. ಇದು ವೇದಗಳ ವರ್ಣ, ಸ್ವರ, ಉದಾತ್ತ ಅನುದಾತ್ತ ಸ್ವರಿತ ಇವುಗಳ ಸ್ಪಷ್ಟತೆಯನ್ನ ಹಾಗೂ ಇವುಗಳ ಮಹತ್ವವನ್ನ ತಿಳಿಹೇಳತ್ತೆ. ಅಂದ್ರೆ ವೇದವನ್ನ ಹೇಗೆ ಹೇಳಬೇಕೆ ಎಷ್ಟು ಪ್ರಮಾಣದಲ್ಲಿ ಧ್ವನಿಸಬೇಕು ಇತ್ಯಾದಿ ಮಾಹಿತಿ ತಿಳಿಸುತ್ತೆ. 

ಇನ್ನು ಎರಡನೆಯದ್ದು ವ್ಯಾಕರಣ. ಈ ಶಬ್ದವೇ ಹೇಳತ್ತೆ ವೇದದೊಳಗಿನ ಗ್ರಾಮರ್ ಹೇಳುವ ಶಾಸ್ತ್ರ. ಮೂರನೆಯದ್ದು ಛಂದಶ್ಶಾಸ್ತ್ರ ಅಕ್ಷರ ಸಮೂಹವನ್ನ ವಿವರಿಸುತ್ತೆ. ಮಂತ್ರಕ್ಕೆ ಎಷ್ಟು ಅಕ್ಷರಗಳ ಜೋಡಣೆ ಇರಬೇಕು. ಆ ಜೋಡಣೆಯ ಕ್ರಮ ಹಾಗೂ ಅದರ ಮಹತ್ವವನ್ನ ವಿವರಿಸುವ ಶಾಸ್ತ್ರ. ಗಾಯತ್ರೀ ಛಂದಸ್ಸಲ್ಲಿ ಎಂಟು ಅಕ್ಷರಗಳ ಮೂರು ಸಾಲಿನದ್ದು ಒಟ್ಟು 24 ಅಕ್ಷರಗಳ ಮಾಲೆ ಅದು.  ಬೃಹತೀ ಛಂದಸ್ಸು, ಅನುಷ್ಟುಪ್, ತ್ರಷ್ಟುಪ್ ಹೀಗೆ ಸಾಕಷ್ಟು ಛಂದಸ್ಸುಗಳಿವೆ. 

ನಿರುಕ್ತ ಶಾಸ್ತ್ರವು ಒಂದು ರೀತಿಯ ನಿಘಂಟು ಇದ್ದಹಾಗೆ. ಡಿಕ್ಷನರಿ ಅಂತೀರಲ್ಲ ಅದು. ವೇದಗಳಲ್ಲಿರುವ  ಕ್ಲಿಷ್ಟಪದಗಳಿಗೆ ಇದು ಅರ್ಥವನ್ನ ಹೇಳತ್ತೆ. ಮುಂದಿನದ್ದೇ ಜ್ಯೋತಿಷ್ಯ ಅದನ್ನ ಕೊನೆಯಲ್ಲಿ  ವಿಸ್ತಾರವಾಗಿ ವಿವರಿಸ್ತೇನೆ. ಈಗ ಆರನೇ ಶಾಸ್ತ್ರ ಕಲ್ಪ. ಈ ಕಲ್ಪ ನಮ್ಮ ಎಲ್ಲ ಆಚರಣೆಗಳ ವಿವರಣೆ ಕೊಡತ್ತೆ.

 ನಾಮಕರಣ, ಮದುವೆ, ಗೃಹಪ್ರವೇಶ, ಇಂಥ ಆಚರಣೆಗಳ ಸ್ಪಷ್ಟ ಮಾಹಿತಿ ಕೊಡುವ ಶಾಸ್ತ್ರ ಅದು. ಈಗ ನಾವು ಗಮನಿಸ ಬೇಕಾದ್ದು ಜ್ಯೋತಿಷ್ಯ.

ನೋಡಿ ಬೇರೆಲ್ಲ ಶಾಸ್ತ್ರಗಳ ಗುರಿ ಒಂದೇ. ಒಂದು ವಸ್ತುವನ್ನ ಸವಿವರವಾಗಿ ವಿವರಿಸೋದು. 

ಆದರೆ ಈ ಜ್ಯೋತಿಷ್ಯ ಇದೆಯಲ್ಲ. ಇದು ಮಹತ್ವತವಾದ ಶಾಸ್ತ್ರ.  ಯಾಕೆ ಗೊತ್ತಾ..? ಈ ಜ್ಯೋತಿಷ್ಯದಲ್ಲಿ ಒಂದು ವಿಷ್ಯ ಅಲ್ಲ ಜೀವನಕ್ಕೆ ಬೇಕಾದ ಸಮಸ್ತವನ್ನೂ ತೆರೆದಿಡುವ ಶಾಸ್ತ್ರವಾಗಿದೆ. ಹೇಗೆ..? 

ಗಮನಿಸಿ : ಇದು ಜಾತಕ ಕುಂಡಲಿ. 

ಇಲ್ಲಿ ಹನ್ನೆರಡು ಮನೆಗಳಿವೆ. ಒಂದೊಂದು ಮನೆಯೂ ನಮ್ಮ ಬದುಕಿನ ಸ್ವಾರಸ್ಯವನ್ನ ತೆರೆದಿಡುವ ಮನೆಯಾಗಿದೆ. 
- ಒಂದನೇ ಮನೆಯನ್ನು ಲಗ್ನ ಅಂತಾರೆ. ಒಂದು ಮಗು ಹುಟ್ಟಿದ ಸಮಯಕ್ಕೆ ಸರಿಯಾಗಿ ಉದಯಕ್ಕೆ ಬರುವ ರಾಶಿಯೇ ಲಗ್ನವಾಗತ್ತೆ.  ಆ ಲಗ್ನದಿಂದ ದೇಹವನ್ನು, ಆತ್ಮವನ್ನು, ರೂಪ, ಗುಣ, ತಲೆ, ವರ್ತಮಾನ, ಇತ್ಯಾದಿ ವಿಚಾರವನ್ನ ತಿಳಿಸುತ್ತೆ, 
- ಎರಡನೇ ಮನೆಯಿಂದ - ಕುಟುಂಬ, ಹಣ, ಮಾತು, ಅನ್ನ, ನೀರು, ಬಲಗಣ್ಣು, ಪತ್ರಿಕೆ ಇತ್ಯಾದಿ ವಿಷಯಗಳನ್ನ ವಿವರಿಸುತ್ತೆ.
- ಮೂರನೇ ಮನೆ - ಕಷ್ಟ, ಎದೆ ಭಾಗ, ಬಲಕಿವಿ, ಧೈರ್ಯ, ಸಾಹಸ, ಪರಾಕ್ರಮ, ಇತ್ಯಾದಿಗಳನ್ನ ವಿವರಿಸುತ್ತೆ. 
- ನಾಲ್ಕನೇ ಮನೆ - ಮನೆ, ಸುಖ, ನಿವೇಶನ, ಕಟ್ಟಡ, ಮಾವ, ಸೋದರಿಕೆ, ಬಂಧು, ವಾಹನ, ತಾಯಿ, ರಾಜ್ಯ, ಪಶು ಸಂಪತ್ತು, ಪರಿಮಳ ದ್ರವ್ಯ, ನೀರು, ಸೇತುವೆ, ಇತ್ಯಾದಿಗಳನ್ನ ವಿವರಿಸುತ್ತೆ.
- ಐದನೇ ಮನೆ - ರಾಜಚಿಹ್ನೆ, ಹಸ್ತ, ಆತ್ಮ, ಬುದ್ಧಿ, ಧೀ ಶಕ್ತಿ, ಸಂತಾನ, ಭವಿಷ್ಯ ಜ್ಞಾನ, ಶೃತಿ, ಇತ್ಯದಿ ವಿಷಯಗಳನ್ನ ವಿವರಿಸುತ್ತೆ.
- ಆರನೇ ಮನೆ - ಸಾಲ, ಅಸ್ತ್ರ, ಕಳ್ಳತನದ ವಿಷಯ, ರೋಗ, ಶತ್ರು, ಗೋತ್ರಜರು, ವಾದ-ವಿವಾದ, ಪಾಪ ಕರ್ಮ ಇದ್ಯಾದಿಗಳನ್ನು ವಿವರಿಸುತ್ತೆ.
-ಏಳನೇ ಮನೆ - ಹೆಂಡತಿ, ಬಯಕೆ, ಕಾಮ, ಆನಂದ, ವ್ಯಾಪಾರ, ಇತ್ಯಾದಿಗಳನ್ನ ವಿವರಿಸುತ್ತೆ. 
- ಎಂಟನೇ ಮನೆ - ಮಾಂಗಲ್ಯ ಸೌಭಾಗ್ಯ, ಮಲಿನತೆ, ಆಯುಷ್ಯ, ಕ್ಲೇಶ, ಅಪವಾದ, ಅಶುಚಿ, ದಾಸ್ಯ, ವಿಘ್ನಗಳ ವಿವರ ನೀಡತ್ತೆ. 
- ಒಂಭತ್ತನೇ ಮನೆ - ಗುರು, ದೇವತೆ, ಅದೃಷ್ಟ, ತಂದೆ, ಸುಕೃತ, ಮೊಮ್ಮಗ, ಜಪ, ಶ್ರೇಷ್ಠತೆ ಕುಲದೇವರ ಚಿಂತನೆಗಳ ವಿವರವನ್ನ ನೀಡುತ್ತೆ. 
- ಹತ್ತನೇ ಮನೆ - ಪದವಿ, ವೃತ್ತಿ, ಸ್ಥಾನ-ಮಾನ, ಆಕಾಶ, ಗಮನ ಇತ್ಯಾದಿ ವಿಚಾರ ತಿಳಿಸುತ್ತದೆ. 
- ಹನ್ನೊಂದನೆ ಮನೆ - ಪ್ರಾಪ್ತಿ, ಲಾಭ,  ಸಿದ್ಧಿ, ಹಿರಿಯಣ್ಣ, ಅಕ್ಕ, ಶುಭವಾರ್ತೆ ಇತ್ಯಾದಿಗಳ ವಿವರ ನೀಡುತ್ತೆ. 
- ಹನ್ನೆರಡನೇ ಮನೆ ದು:ಖ, ಎಡಗಣ್ಣು, ವ್ಯಯ, ಶಯನ, ಅಂತ್ಯ, ದಾರಿದ್ರ್ಯ ಇತ್ಯಾದಿಗಳ ವಿವರ ನೀಡತ್ತೆ.

ಹೀಗೆ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲ ಭಾವಗಳನ್ನು ಅನುಭವಿಸುತ್ತಾನೋ ಆ ಸರ್ವ ಭಾವವನ್ನೂ ಈ ಜ್ಯೋತಿಷ್ಯ ವಿವರವಾಗಿ ತೆರೆದಿಡತ್ತೆ. ಇದೇ ಇತರೆ ಶಾಸ್ತ್ರಗಳಿಗೂ ಜ್ಯೋತಿಷ್ಯಕ್ಕೂ ಇರುವ ವ್ಯತ್ಯಾಸ. ನಮ್ಮ ಬದುಕಿಗೆ ಬೇಕಾದ ಸರ್ವ ವಿಷಯವೂ ಈ ಶಾಸ್ತ್ರದಲ್ಲಿದೆ. 

ಇದನ್ನೇ ಮೇಲಿನ ಶ್ಲೋಕದಲ್ಲಿ ವರಾಹ ಮಿಹಿರರು ಹೇಳಿದ್ದು. ಮನುಷ್ಯ ತನ್ನ ಕರ್ಮ ಫಲಗಳಿಗೆ ಅನುಸಾರವಾಗಿ ಜೀವನದಲ್ಲಿ ಏರು ಪೇರುಗಳನ್ನ ಹೊಂದುತ್ತಾರೆ. ಇಂಥ ಏರು ಪೇರುಗಳನ್ನ ವಿವರಿಸಲಿಕ್ಕೆ  ಗರ್ಗಾ, ಪರಾಶರಾದಿ ಅನೇಕ ಋಷಿಗಳು ಅನೇಕ ಗ್ರಂಥಗಳನ್ನ ರಚಿಸಿದ್ದಾರೆ,  ಆದರೆ ಆ ಗ್ರಂಥಗಳನ್ನ ಓದಿ ಅರ್ಥೈಸುವಲ್ಲಿ ವಿಫುಲರಾದ ಕೆಲ ಮಂದಿಗೆ ನಾನು ಬೃಹಜ್ಜಾತಕ ಎಂಬ ಪುಟ್ಟ ಗ್ರಂಥವನ್ನ ರಚಿಸಿದ್ದೇನೆ. ಆ ಗ್ರಂಥ ದೋಣಿಯ ಸಹಾಯದಿಂದ ಈ ಕರ್ಮ ಸಾಗರವನ್ನ ದಾಟಲಿ ಅಂತ ವಿವರಿಸಿದ್ದಾರೆ. ಅವರ ಬೃಹಜ್ಜಾತಕವೊಂದನ್ನ ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲಿರತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. 

ಆದರೆ ಅದನ್ನ ಸೂಕ್ಷ್ಮವಾಗಿ ಗಮನಿಸುವ ಅನುಷ್ಠಾನ ಶಕ್ತಿ ನಮ್ಮಲ್ಲಿ ವೃದ್ಧಿಯಾಗಬೇಕು. ಈ ರಹಸ್ಯ ಬಗೆಯಲಿಕ್ಕೆ ನಿಮ್ಮಲ್ಲಿ ನಿತ್ಯ ಅನುಷ್ಠಾನ ಇರಲೇ ಬೇಕು. ಆ ದೈವ ಬಲವಿಲ್ಲದೆ ಹೋದರೆ ಯಾವ ವಿಚಾರವೂ ಹೊಳೆಯುವುದಿಲ್ಲ. ಹೇಗೆ ಅರ್ಥೈಸಬೇಕು ತೋಚುವುದಿಲ್ಲ. ಇರಲಿ. ಈಗ ಗ್ರಹಗಳ ಸ್ವರೂಪ ಅವುಗಳ ಬಲ, ಪ್ರಭಾವಾದಿಗಳ ಬಗ್ಗೆ ತಿಳಿಯೋಣ. 

ಜ್ಯೋತಿಷ್ಯದಲ್ಲಿ ಮೊತ್ತಮೊದಲ ಗ್ರಹ. ಈ ಸೂರ್ಯನನ್ನ ಗ್ರಹರಾಜ ಅಂತ ಕರೀತಾರೆ. ಜೊತೆಗೆ ಆತನನ್ನ ಆತ್ಮ ಕಾರಕ ಅಂತಲೂ ಕರೀತಾರೆ. ಅಷ್ಟೇ ಅಲ್ಲ ನೀವೇನಾದ್ರೂ ಜ್ಯೋತಿಷ್ಯ ಕಲೀಬೇಕು, ಜ್ಯೋತಿಷ್ಯವನ್ನು ಕರಗತ ಮಾಡ್ಕೋಬೇಕು, ಈ ಶಾಸ್ತ್ರದ ತಳಸ್ಪರ್ಶವಾಗಬೇಕು ಅಂದ್ರೆ ರ್ಸೂನ ಅನುಗ್ರಹ ಬೇಕೇ ಬೇಕು. ಸೂರ್ಯನಿಲ್ಲದೇ ಜಗತ್ತೇ ಕತ್ತಲು. ಯಾರು ಸೂರ್ಯೋಪಾಸಕರೋ ಅವರಿಗಷ್ಟೇ ಜ್ಯೋತಿಷ್ಯ ಒಲಿಯೋದು. 

ಹಾಗಾಗಿ ಈ ಸೂರ್ಯನ ಹಿನ್ನೆಲೆ, ಸೂರ್ಯ ಶಕ್ತಿ, ಸೂರ್ಯನ ಅಂತ:ಶಕ್ತಿ  ಅರ್ಥವಾದರೆ ಆತ ಕೊಡುವ ಫಲಗಳ ಎಂಥವು ಅನ್ನೋದು ಗೊತ್ತಾಗಿಬಿಡುತ್ತೆ. ಏನು ಈ ಸೂರ್ಯ ಶಕ್ತಿ..? ಸೂರ್ಯನ ಅವತಾರ ಆಗಿದ್ದು ಹೇಗೆ..? ಏಕಾಗಿ ಆತ್ಮ ಕಾರಕ ಅಂತಾರೆ..? ಇವುಗಳು ಅರ್ಥ ಆಗ್ಬೇಕು. 
ಅದೆಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ವಿಸ್ತಾರವಾಗಿ ತಿಳಿಸುವ ಪ್ರಯತ್ನ ಮಡ್ತೀನಿ. ಕಾಯ್ತಾ ಇರಿ. 

(ಮುಂದುವರೆಯುವುದು..)

- ಗೀತಾಸುತ
ಸಂಪರ್ಕ ಸಂಖ್ಯೆ : 9164408090/9741743565

click me!
Last Updated Oct 22, 2018, 2:09 PM IST
click me!