ನವರಾತ್ರಿ, ದೇವಿ ಪೂಜೆ, ಉಪವಾಸ, ವ್ಯಕ್ತಿತ್ವ ವಿಕಸನ

By Web DeskFirst Published Oct 13, 2018, 4:33 PM IST
Highlights

ಮೊದಲ ಮೂರು ದಿನಗಳು ಮಹಾಕಾಳಿಯನ್ನು ಪೂಜಿಸಿದ ನಂತರ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೊನೆಯ ಮೂರು ದಿನಗಳು ಮಹಾ ಸರಸ್ವತಿಗೆ ಮೀಸಲಿಡಲಾಗಿದೆ.  ಮತ್ತಿನ್ನೇನು ನವರಾತ್ರಿ ವಿಶೇಷ?

ದೇವಿಯನ್ನು ವಿಧವಿಧವಾಗಿ ಅಲಂಕರಿಸಿ, ವಿಭಿನ್ನ ನೇವೈಧ್ಯವನ್ನಿಟ್ಟು ಪೂಜಿಸುವ ನವರಾತ್ರಿ ಉಪವಾಸವೂ ಅಷ್ಟೇ ಶ್ರೇಷ್ಠ.  ದಿನದಲ್ಲಿ ಒಮ್ಮೆ ಕೇವಲ ಸಾತ್ವಿಕ ಆಹಾರ ಸೇವಿಸಿ, ಉಪವಾಸ ಮಾಡೋ ಹಿಂದೆಯೂ ಇದೆ ವಿಶೇಷ ಅರ್ಥ. ಆತ್ಮ ಶುದ್ಧೀಕರಿಸುವ ಕಾರ್ಯಕ್ಕೆ ಈ ಕಾಲ ಮೀಸಲು.ಒಂಬತ್ತು ದಿನಗಳ ಈ ಉಪವಾಸಕ್ಕೂ ಒಂದೊಂದು ಅರ್ಥವಿದೆ. ಆ ಮೂಲಕ ನಮ್ಮ ವ್ಯಕ್ತಿತ್ವ ಶುದ್ಧಿಗೂ ಸಮಯ ಮೀಸಲು. ಊಟ ಬಿಡುವುದರೊಂದಿಗೆ, ಜೀವನದಲ್ಲಿ ಯಾವ ಋಣಾತ್ಮಕ ಶಕ್ತಿಯನ್ನು ನಾವು ಬಿಡಬೇಕು? ಈ ಆಧುನಿಕ ಜೀವನ ಒತ್ತಡದ ಬದುಕಲ್ಲಿ ಏನು ಬಿಟ್ಟರೊಳಿತು?

ಕಾಮ, ಮೋಕ್ಷ, ಕ್ರೋಧ, ಮದ, ಮತ್ಸರ...ಎಂಬ ಅರಿಷಡ್ವರ್ಗಗಳನ್ನು ತ್ಯಜಿಸುವ ಜತೆ ಕೆಲವು ಸರಳವಾದ, ಸಣ್ಣ ಪುಟ್ಟ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕೆನ್ನುವುದು ಈ ಉಪವಾಸ ಮಾಡುವ ಉದ್ದೇಶ...

Latest Videos

ದಿನ 1: ಸಿಟ್ಟನ್ನು ತ್ಯಜಿಸಬೇಕು.

ದಿನ 2: ಜನರ ಬಗ್ಗೆ ತೀರ್ಮಾನಕ್ಕೆ ಬರೋದನ್ನು ನಿಲ್ಲಿಸಬೇಕು.

ದಿನ 3: ದ್ವೇಷವನ್ನು ಬಿಟ್ಟು ಬಿಡಬೇಕು.

ದಿನ 4: ನನ್ನನ್ನು ಕ್ಷಮಿಸಿಕೊಳ್ಳುವುದರೊಂದಿಗೆ, ಎಲ್ಲರನ್ನೂ ಕ್ಷಮಿಸುವ ಗುಣ ಬೆಳೆಯಿಸಿಕೊಳ್ಳುವೆ.

ದಿನ 5: ಯಾರು ಹೇಗಿರುತ್ತಾರೋ, ಹಾಗೆಯೇ ಸ್ವೀಕರಿಸುತ್ತೇನೆ.

ದಿನ 6: ನನ್ನನ್ನು ನಾನು ಪ್ರೀತಿಸುವುದರೊಂದಿಗೆ, ಎಲ್ಲರನ್ನೂ ಯಾವುದೇ ಷರತ್ತುಗಳಿಲ್ಲದೇ ಪ್ರೀತಿಸುವೆ.

ದಿನ 7: ತಪ್ಪಿತಸ್ಥ ಭಾವ ಹಾಗೂ ಹೊಟ್ಟೆಕಿಚ್ಚಿನಂಥ ಬುದ್ಧಿಯನ್ನು ತ್ಯಜಿಸುವೆ.

ದಿನ 8: ಭಯದೊಂದಿಗಿನ ಬದುಕನ್ನು ದೂರ ಮಾಡುತ್ತೇನೆ.

ದಿನ 9: ನನ್ನಲ್ಲಿ ಏನಿದೆಯೋ ಅದನ್ನು ಅನುಭವಿಸುತ್ತೇನೆ. ಏನು ಸಿಗುತ್ತೋ ಅದಕ್ಕೆ ದೇವರನ್ನು ವಂದಿಸುತ್ತೇನೆ.

ದಿನ 10: ವಿಶ್ವದಲ್ಲಿ ಪ್ರೀತಿ, ಪ್ರೇಮಗಳು ತುಂಬಿ ತುಳುಕುತ್ತಿದ್ದು, ನಾನೇನು ಬಯಸುತ್ತೇನೋ, ಅದನ್ನು ಇನ್ನೊಬ್ಬರಿಗೆ ನೀಡುತ್ತೇನೆ. ಸಾಧನೆ, ನಿಷ್ಕಲ್ಮಷ ಸೇವೆಯಲ್ಲಿ ನಂಬಿಕೆ ಇಡುತ್ತೇನೆ.

ಯಾವ ಆಹಾರ ಸೇವಿಸಬಹುದು?

  • - ಬೇಯಿಸಿರುವ ಆಲೂಗಡ್ಡೆ
  • ಕುಟ್ಟು ಹಿಟ್ಟು ಮತ್ತು ಪಾಯಸ
  • ಆಲೂ ಟಿಕ್ಕಾ
  • ಬಾಳೆ ಚಿಪ್ಸ್ 
  • ಹಣ್ಣು ಮತ್ತು ಹಣ್ಣಿನ ಜೂಸ್
  • ಸಾಬುದಾನ ವಡೆ
  • ಮೊಸರು
  • ಲಸ್ಸಿ

ದೇವಿ ಶಕ್ತಿಯ ಪ್ರತೀಕ:

ನವರಾತ್ರಿ ತಾಯಿ ದುರ್ಗಾದೇವಿಯನ್ನು ಪೂಜಿಸುವ ಕಾಲ. ಈ ದಿನಗಳಲ್ಲಿ ಎಲ್ಲಾ ದೇವತೆಗಳಿಗೂ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ.  ತಾಯಿ ದುರ್ಗೆಯು ಮಹಿಷಾಸುರ ಸಂಹಾರ ಮಾಡಿದಂದು ದಸರಾ ಮುಕ್ತಾಯವಾಗುತ್ತದೆ. ಪ್ರತಿ ದಿನವೂ ಒಂದೊಂದು ಬಣ್ಣದ ಬಟ್ಟೆ ಧರಿಸಿ, ದೇವಿಗೆ ಪ್ರಿಯವಾದ ನೇವೈಧ್ಯವಿಟ್ಟು ಪೂಜಿಸುವುದು ನವರಾತ್ರಿ ವಿಶೇಷ. ಯಾವ ದೇವಿಗೆ, ಹೇಗೆ ಪೂಜಿಸಲಾಗುತ್ತದೆ?

ದಿನ 1 - ಶೈಲು ಪುತ್ರಿ 

ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸ್ವರೂಪಕ್ಕೆ ಮೊದಲ ದಿನದ ಪೂಜೆ. ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸುತ್ತಾರೆ.

ದಿನ 2 - ಬ್ರಾಹ್ಮಚಾರಿಣಿ

ಮಹಾಮಾತೆಯ ಶಕ್ತಿ, ಶಾಂತಿ ಮತ್ತು ಸಮೃದ್ಧಿ ತೋರುವ ದಿನ. ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸುವರು. 

ದಿನ 3 - ಚಂದ್ರಾಘಂಚಾ

ಸೌಂದರ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವಿಗೆ ಹಳದಿ ವರ್ಣ ಮೀಸಲು.

ದಿನ 4 - ಕುಷ್ಮುಂಡಾ 

ಸೃಷ್ಟಿಕರ್ತೆ ಬ್ರಾಹ್ಮ ರೂಪಿಯನ್ನು ತರಕಾರಿಯಿಂದ ಅಲಂಕರಿಸುವುದು ಈ ದಿನದ ವಿಶೇಷ. ಅದಕ್ಕೆ ಸಮೃದ್ಧಿಯ ಪ್ರತೀಕವಾದ ಹಸಿರು ವಸ್ತ್ರ ಧರಿಸಬೇಕು.

ದಿನ 5 - ಸ್ಕಂದಾ ಮಾತಾ

ಸ್ಕಂದಾ/ ಕಾರ್ತಿಕೇಯನ ತಾಯಿ ಶಾಂತ ಸ್ವರೂಪಿಯಿಂದ ರೌದ್ರ ರೂಪಕ್ಕೆ ಬರುತ್ತಾಳೆ. ಈ ದಿನ ಬೂದು ಬಣ್ಣ ಧರಿಸಬೇಕು. 

ದಿನ 6 - ಕಾತ್ಯಾಯನಿ 

ಋಷಿ ಮಗಳಾಗಿ ಹುಟ್ಟಿದ ಕಾತ್ಯಾಯನಿ ದುರ್ಗಿಯಾಗಿ ಅವತರಿಸುತ್ತಾಳೆ. ಈ ಉಗ್ರ ಸ್ವರೂಪಿ ತಾಯಿಗೆ ಕೇಸರಿ ಇಷ್ಟ.

ದಿನ 7 - ಕಾಳರಾತ್ರಿ

ಕಪ್ಪಾಗಿರುವ ಕಾಳಿಗೆ ಕೆದರಿದ ಕೂದಲು, ಮೂರು ಕಣ್ಣು ಹಾಗೂ ಗಾಳಿ ಬೀಸಿದರೆ ಎಂಥ ಅನುಭವವಾಗುತ್ತೋ, ಹಾಗೆ ಉಸಿರಾಡುತ್ತಾಳೆ. ಈ ಉಗ್ರ ಮಾತೆಯನ್ನು ಶಾಂತವಾಗಿಸಲು ಶ್ವೇತ ವಸ್ತ್ರಕ್ಕೆ ಆದ್ಯತೆ ನೀಡಬೇಕು. 

ದಿನ 8 - ಮಹಾ ಗೌರಿ 

ಬುದ್ಧಿವಂತೆ ಹಾಗೂ ಶಾಂತ ಸ್ವರೂಪಿ ಗೌರಿಯನ್ನು ಪೂಜಿಸುವ ದಿನ. ಈ ದಿನ ಗುಲಾಬಿ ಬಣ್ಣದ ಬಟ್ಟೆಗೆ ಆದ್ಯತೆ.

ದಿನ 9 - ಸಿದ್ಧಿದಾತ್ರಿ

ನಾಲ್ಕು ಕೈ ಹೊಂದಿರುವ ಸಿದ್ಧಿ ಶಕ್ತಿಶಾಲಿ ದೇವತೆ. ಎಲ್ಲ ನೋವನ್ನೂ ಗುಣ ಪಡಿಸೋ ಶಕ್ತಿ ಇರೋ ಈಕೆಗೆ ಆಕಾಶ ನೀಲಿ ಬಣ್ಣದ ವಸ್ತ್ರ ಅಚ್ಚುಮೆಚ್ಚು. 

click me!