Hanuma Jayanthi: ನಗರದಲ್ಲಿ ಭಕ್ತಿಭಾವದಿಂದ ಹನುಮ ಜಯಂತಿ

By Kannadaprabha NewsFirst Published Dec 6, 2022, 7:37 AM IST
Highlights

ರಾಜಧಾನಿಯಲ್ಲಿ ಹನುಮ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ಆಂಜನೇಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯ ಒಕ್ಕಲಿಗರ ಮಹಾಸಭಾ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹನುಮ ಜಯಂತಿ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ನಡೆಯಿತು. ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ಡಾ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಬೆಂಗಳೂರು (ಡಿ.6) : ರಾಜಧಾನಿಯಲ್ಲಿ ಹನುಮ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ಆಂಜನೇಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಗಾಳಿ ಆಂಜನೇಯ ಸ್ವಾಮಿ, ಉತ್ತರ ಹಳ್ಳಿಯ ಗುಂಡಾಂಜನೇಯ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ಸ್ವಾಮಿ, ನೆಲಮಂಗಲದ ರಾಮಾಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ಸೇರಿ ನಾಗರಬಾವಿ, ಸಂಜೀವಿನಿ ನಗರ, ರಾಜಾಜಿ ನಗರ 6ನೇ ಬ್ಲಾಕ್‌ನಲ್ಲಿರುವ ಆಂಜನೇಯ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಬಳೆಪೇಟೆಯ ಪಿಳ್ಳಾಂಜನೇಯಸ್ವಾಮಿ, ಚಿಕ್ಕಪೇಟೆಯ ತುಪ್ಪದ ಆಂಜನೇಯಸ್ವಾಮಿ, ರಾಜಾಜಿನಗರ 6ನೇ ಬ್ಲಾಕ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆಗಳು ನೆರವೇರಿದವು.

ಹನುಮ ಮತ್ತು ರಾಮ ಮಂದಿರಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪವಮಾನ ಸೂಕ್ತ, ಲಕ್ಷ ಬಿಲ್ವಾರ್ಚನೆ ಪೂಜೆ ನಡೆಯಿತು. ವಿಲ್ಸನ್‌ ಗಾರ್ಡನ್‌ ಆಂಜನೇಯ ದೇಗುಲದಲ್ಲಿ ಹಣ್ಣುಗಳಿಂದ ದೇವರ ಅಲಂಕಾರ ಮಾಡಲಾಗಿತ್ತು. ಹರಕೆ ಹೊತ್ತವರು ತುಳಸಿ, ವಡೆ, ವೀಳ್ಯದೆಲೆ ಹಾರಗಳನ್ನು ಅರ್ಪಿಸಿದರು.

Hanumadvratha 2022: ಇಷ್ಟಾರ್ಥ ಸಿದ್ಧಿಗೆ ಆಂಜನೇಯನ ಜನ್ಮದಿನ ಈ ಕೆಲಸಗಳನ್ನು ಮಾಡಿ..

ನಗರದ ಗಾಳಿ ಆಂಜನೇಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಪುಷ್ಪಾಲಂಕಾರ ಮಾಡಲಾಗಿತ್ತು. ದೇವಾಲಯದ ಎದುರಿನ 21 ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹಕ್ಕೂ ಪಂಚಾಮೃತ ಅಭಿಷೇಕ ಸಲ್ಲಿಸಲಾಯಿತು. ಗಿರಿ ನಗರದ ಪ್ರಸನ್ನ ಆಂಜನೇಯಸ್ವಾಮಿಗೆ ಬೆಳ್ಳಿ ಕವಚ ತೊಡಿಸಲಾಗಿತ್ತು. ರಾಗಿಗುಡ್ಡದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜಯಂತಿ ಅದ್ಧೂರಿಯಾಗಿ ನಡೆಯಿತು.

ಪಲ್ಲಕ್ಕಿ ಉತ್ಸವ:

ಉತ್ತರಹಳ್ಳಿ ರಾವುಗೋಡ್ಲುವಿನ ಶ್ರೀ ರಾಮರ ಬಂಡೆಯ ಮೇಲೆ ಉದ್ಭವವಾದ ಗುಂಡಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಭಕ್ತಿಭಾವದಿಂದ ಜರುಗಿತು. ದೇವಸ್ಥಾನದ ಪುಷ್ಕರಣಿ ತಟದಲ್ಲಿ ಪ್ರಾಕಾರೋತ್ಸವ ಜರುಗಿತು. ರಾತ್ರಿ ರಾಮಸೀತಾ ಲಕ್ಷ್ಮಣ ಸಮೇತ ಗುಂಡಾಂಜನೇಯ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಿತು.

ರಾಜ್ಯ ಒಕ್ಕಲಿಗರ ಮಹಾಸಭಾ:

ರಾಜ್ಯ ಒಕ್ಕಲಿಗರ ಮಹಾಸಭಾ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹನುಮ ಜಯಂತಿ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ನಡೆಯಿತು. ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ಡಾ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಪಾದಯಾತ್ರೆ:

ನೆಲಮಂಗಲದ ರಾಮಾಂಜನೇಯ ದೇವಸ್ಥಾನದಿಂದ 500ಕ್ಕೂ ಹೆಚ್ಚು ಮಾಲಾಧಾರಿಗಳು ಪಾದಯಾತ್ರೆ ನಡೆಸಿದರು. 9 ದಿನದಿಂದ ವೃತ ಆಚರಣೆ ಮಾಡಿದ್ದ ಭಕ್ತರು ಸೋಮವಾರ ಬೆಳ್ಳಿರಥದಲ್ಲಿ ಹನುಮನ ಚಿತ್ರವಿಟ್ಟು ಮೆರವಣಿಗೆ ಮಾಡಿದರು.

Hanuman Chalisa ಪಠಿಸುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಪೊಲೀಸರ ವಶಕ್ಕೆ

ಜೆಜೆ ನಗರದಲ್ಲಿ ಹನುಮನ ಜಯಂತಿ ಪ್ರಯುಕ್ತ ಶೋಭಾಯಾತ್ರೆ ಮೂಲಕ ಪಾದರಾಯನಪುರಕ್ಕೆ ತೆರಳಲು ಮುಂದಾಗಿದ್ದವರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದರು. ಪಾದರಾಯನಪುರಕ್ಕೆ ಶೋಭಾಯಾತ್ರೆ ತೆರಳಲು ಎರಡು ದಿನದ ಹಿಂದೆ ಅನುಮತಿ ಕೋರಿದ್ದರೂ ನೀಡಿರಲಿಲ್ಲ. ಆದರೂ ಯಾತ್ರೆಗೆ ಮುಂದಾದ ಹಲವರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದರು.

click me!