
ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ವಿಶೇಷತೆಗಳಿವೆ. ಅದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟಿರೋ ವಿಚಾರವಾದರೂ, ಭಾರತದ ಅತ್ಯಂತ ಪ್ರಾಚೀನ ಶಾಸ್ತ್ರಗಳಲ್ಲಿ ಇದೂ ಒಂದಾಗಿದೆ. ಇದರ ವಿಶೇಷತೆಗಳನ್ನು ಅರಿತೇ ಇನ್ನು ಜಾತಿ, ಧರ್ಮ, ದೇಶ, ಭಾಷೆ ಯಾವುದೇ ಇದ್ದರೂ ಇದೇ ರೀತಿಯಲ್ಲಿ ಮನೆ ನಿರ್ಮಾಣ ಮಾಡುವುದು, ಕಚೇರಿ ನಿರ್ಮಿಸುವುದು ಇತ್ಯಾದಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಾಸ್ತುವಿನ ಪ್ರಕಾರ ಮನೆಯಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲಿ ಅನುಭವಿಸುವ ಹಿಂಸೆ, ಮಾನಸಿಕ ನೋವು, ದೈಹಿಕ ಕಾಯಿಲೆ ಇತ್ಯಾದಿಗಳಿಂದಾಗಿ ವಾಸ್ತುವಿಗೆ ಇಂದು ಬಹಳ ಮಹತ್ವ ಸಿಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಬಾಯಿಗೆ ಬಂದಂತೆ ವಾಸ್ತುವನ್ನು ಹೇಳುತ್ತಿರುವ ಕಾರಣದಿಂದ ಇದರ ಮೂಲ ಅರ್ಥವೇ ಕಳೆದು ಹೋಗುತ್ತಿದೆ.
ಹಾಗೆ ನೋಡಿದರೆ, ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಂತಹ ಕಟ್ಟಡಗಳ ವಿನ್ಯಾಸ, ಸ್ಥಳ ಮತ್ತು ವ್ಯವಸ್ಥೆಗೆ ಸಂಬಂಧಿಸಿದ ತತ್ವಗಳನ್ನು ವಾಸ್ತುಶಾಸ್ತ್ರ ಒಳಗೊಂಡಿದೆ. ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ತಡೆಯಲು ಈ ನಿಯಮಗಳನ್ನು ಬಳಸಲಾಗುತ್ತದೆ. ಇದು ನಿವೇಶನದ ಆಯ್ಕೆ, ದಿಕ್ಕು, ಎತ್ತರ, ಮತ್ತು ವಿನ್ಯಾಸದಂತಹ ಅಂಶಗಳನ್ನು ಒಳಗೊಂಡಿರುತ್ತದೆ. ಆದರೆ ಮನೆಯಲ್ಲಿ ಮಾಡುವ ಚಿಕ್ಕಪುಟ್ಟ ತಪ್ಪುಗಳಿಂದ ತೊಂದರೆ ಅನುಭವಿಸುವ ಸ್ಥಿತಿಯೂ ಬರಬಹುದು ಎನ್ನುವುದು ವಾಸ್ತುತಜ್ಞರ ಅಭಿಮತ.
ಅದರಲ್ಲಿ ಒಂದು ಮಾಸ್ಟರ್ ಬೆಡ್ರೂಂನಲ್ಲಿ ಇರುವ ಬೀರುವಿನ ಬಗ್ಗೆ. ಮಾಸ್ಟರ್ಬೆಡ್ ರೂಮ್ ಎಂದರೆ ಸಾಮಾನ್ಯವಾಗಿ ಮನೆಯ ಯಜಮಾನ, ಯಜಮಾನಿ ಮಲಗುವ ಕೋಣೆ. ವಾಸ್ತುವಿನ ಪ್ರಕಾರ ಮನೆ ನಿರ್ಮಿಸಿದ್ದರೆ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ನೈರುತ್ಯ (South West) ದಿಕ್ಕಿನಲ್ಲಿ ಈ ಕೋಣೆ ಇರುತ್ತದೆ. ಅಲ್ಲಿ ಇರುವ ಬೀರು ಅರ್ಥಾತ್ ಕಪಾಟಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ತಮ್ಮ ಬಟ್ಟೆಗಳನ್ನು, ಹಣವನ್ನು ಇಡುವುದು ಮಾತ್ರವಲ್ಲದೇ, ಅಗತ್ಯವಾಗಿ ಬೇಕಾದಂಥ ದಾಖಲೆಗಳನ್ನೂ ಇಡುತ್ತಾರೆ. ಇದರ ಜೊತೆಗೆ, ವೈದ್ಯರು ಕೊಟ್ಟಿರುವ ಮಾತ್ರೆಗಳು, ಆಸ್ಪತ್ರೆಗಳಿಂದ ಬಂದಿರುವ ಬಿಲ್ಗಳು, ಮೆಡಿಸಿನ್ ಪ್ರಿಸ್ಕ್ರಿಪ್ಷನ್ ಎಲ್ಲವೂ ಇದರಲ್ಲಿಯೇ ಇಡುವುದು ಮಾಮೂಲು. ದಿಢೀರ್ ಎಂದು ಸುಲಭದಲ್ಲಿ ಸಿಗಲಿ ಎನ್ನುವ ಕಾರಣಕ್ಕೆ ಬೀರುವಿನಲ್ಲಿ ಇವೆಲ್ಲವನ್ನೂ ಇಡಲಾಗುತ್ತದೆ.
ಆದರೆ ಖ್ಯಾತ ವಾಸ್ತುಶಾಸ್ತ್ರ ತಜ್ಞರಾಗಿರುವ ಡಾ.ಸರಸ್ವತಿ ಹರೀಶ್ ಅವರು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ನೈರುತ್ಯ ದಿಕ್ಕು ಎಂದರೆ ಅದು ಅಭಿವೃದ್ಧಿಯ ಸಂಕೇತ. ಅಲ್ಲಿ ಬಟ್ಟೆ, ಹಣ ಇಟ್ಟರೆ ಅದರ ಅಭಿವೃದ್ಧಿ ಆಗುತ್ತದೆ. ಅದೇ ನೀವು ಆಸ್ಪತ್ರೆಗಳ ಬಿಲ್, ಚೀಟಿ, ಔಷಧ ಎಲ್ಲವೂ ಇಟ್ಟರೆ ಅದೇ ವೃದ್ಧಿಯಾಗುತ್ತದೆ. ನೀವು ಅಲ್ಲಿ ಇಡುವ ಹಣವೂ ಆಸ್ಪತ್ರೆಗೆ ಖರ್ಚಾಗುವಂತೆ ಮಾಡುತ್ತದೆ. ಅದಕ್ಕೇ ಆ ಬಿಲ್ಗಳು ಅಟ್ರಾಕ್ಟ್ ಆಗುತ್ತವೆ ಎಂದಿರುವ ಅವರು, ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಈ ಬೀರುವಿನಲ್ಲಿ ಇಡಬೇಡಿ ಎಂದಿದ್ದಾರೆ.
ಬಟ್ಟೆ-ಬರೆಗಳ ಜೊತೆ ದುಡ್ಡು ಇಡಬಹುದು. ಬೇಕಿದ್ದರೆ ಒಳ್ಳೊಳ್ಳೆಯ ಪುಸ್ತಕಗಳನ್ನು ಇಟ್ಟುಕೊಳ್ಳಬಹುದು. ಇವೆಲ್ಲವು ಅದನ್ನೇ ಅಟ್ರಾಕ್ಟ್ ಮಾಡುವ ಕಾರಣ ಪಾಸಿಟಿವ್ ರಿಸಲ್ಟ್ ಸಿಗುತ್ತದೆ. ಅದನ್ನು ಬಿಟ್ಟು ನಕಾರಾತ್ಮಕವಾಗಿರುವ ವಸ್ತುಗಳನ್ನು ಇಟ್ಟರೆ ಅದೇ ನಿಮ್ಮ ಜೀವನದಲ್ಲಿ ಅಟ್ರಾಕ್ಟ್ ಆಗುತ್ತದೆ ಎಂದಿದ್ದಾರೆ. ಅವರು ಹೇಳಿರುವ ಮಾತಿನ ವಿಡಿಯೋ ಲಿಂಕ್ ಈ ಕೆಳಗೆ ಇದೆ ನೋಡಿ.