ಚಿಕ್ಕಮಗಳೂರು: ದತ್ತಜಯಂತಿ ಉತ್ಸವಕ್ಕೆ ಇಂದು ಚಾಲನೆ; ಬಿಗಿ ಪೊಲೀಸ್ ಬಂದೋಬಸ್ತ್

By Kannadaprabha NewsFirst Published Dec 6, 2022, 9:04 AM IST
Highlights

 ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿರುವ ಮೂರು ದಿನಗಳ ದತ್ತಜಯಂತಿ ಉತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ. ಶಾಸಕ ಸಿ.ಟಿ.ರವಿ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಸೇರಿ ರಾಜ್ಯಾದ್ಯಂತ ಸಂಘಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ದತ್ತಮಾಲೆ ಧರಿಸಿದ್ದಾರೆ.

ಚಿಕ್ಕಮಗಳೂರು (ಡಿ.6) : ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿರುವ ಮೂರು ದಿನಗಳ ದತ್ತಜಯಂತಿ ಉತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ. ಶಾಸಕ ಸಿ.ಟಿ.ರವಿ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಸೇರಿ ರಾಜ್ಯಾದ್ಯಂತ ಸಂಘಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ದತ್ತಮಾಲೆ ಧರಿಸಿದ್ದಾರೆ.

ಈ ಬಾರಿ ದತ್ತ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಬಂದೋಬಸ್ತಿಗಾಗಿ 3500 ಪೊಲೀಸರ ನಿಯೋಜನೆ ಮಾಡಿ, 46 ಚೆಕ್‌ ಪೋಸ್ಟ್‌ ತೆರೆಯಲಾಗಿದೆ.

ಮೊದಲ ಸಲ ಅರ್ಚಕರಿಂದ ಪೂಜೆ

ಇದೇ ಮೊದಲ ಬಾರಿಗೆ ದತ್ತಪೀಠದಲ್ಲಿ ಅರ್ಚಕರಿಂದ ಪೂಜೆ ನಡೆಸಲು ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ದತ ್ತಜಯಂತಿ ವೇಳೆ ಪೂಜೆ ಸಲ್ಲಿಸಲು ತಾತ್ಕಾಲಿಕವಾಗಿ ನೇಮಕಗೊಂಡಿರುವ ಬಾಗೇಪಲ್ಲಿಯ ಅರ್ಚಕರಾದ ಪಿ.ಎಂ.ಸಂದೀಪ್‌ ಹಾಗೂ ಶೃಂಗೇರಿ ತಾಲೂಕಿನ ಬೊಮ್ಮನಕುಡಿಗೆಯ ಕೆ.ಶ್ರೀಧರ್‌ ಅವರು ದತ್ತಪೀಠದ ವ್ಯವಸ್ಥಾಪನಾ ಸಮಿತಿ ಸದಸ್ಯರೊಂದಿಗೆ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿದ್ದರು.

Chikkamagaluru: ದತ್ತಜಯಂತಿ ಅಂಗವಾಗಿ ಕೇಸರಿಮಯವಾದ ಚಿಕ್ಕಮಗಳೂರು ನಗರ

ಅನಸೂಯಾ ಜಯಂತಿ: ದತ್ತ ಜಯಂತಿ ಉತ್ಸವದ ಮೂರು ದಿನಗಳ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರದಂದು ದತ್ತಪೀಠದಲ್ಲಿ ಅನಸೂಯ ಮಾತೆ ಪೂಜೆಯನ್ನು ಆಯೋಜಿಸಲಾಗಿದೆ. ಇದರ ಅಂಗವಾಗಿ ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿನ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಮಾತೆಯರು ಮೆರವಣಿಗೆ ಹೊರಟು ಐ.ಜಿ.ರಸ್ತೆಯ ಮೂಲಕ ಆರ್‌.ಜಿ.ರಸ್ತೆಯಲ್ಲಿರುವ ಶ್ರೀ ಕಾಮಧೇನು ಗಣಪತಿ ದೇವಾಲಯ ತಲುಪಿ ಅಲ್ಲಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ಊರುಗಳಿಗೆ ವಾಪಸ್‌ ತೆರಳಿದ್ದಾರೆ.

ಮಂಗಳವಾರ ನಡೆಯಲಿರುವ ಅನಸೂಯ ಮಾತೆ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ ಸುಮಾರು 5 ಸಾವಿರ ಮಾತೆಯರು ಭಾಗವಹಿಸಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ತಿಳಿಸಿದ್ದಾರೆ.

click me!