Asianet Suvarna News Asianet Suvarna News

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ವೇ’: ಇಡಿ ದಾಳಿ ಕುರಿತು ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ

ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ವೇ ಎಂದು ಶಾಸಕ ನಂಜೇಗೌಡರ ಮನೆ ಮೇಲೆ ಇಡಿ ದಾಳಿ ನಡೆದ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಪ್ರತಿಕ್ರಿಯಿಸಿದರು. 
 

MP S Muniswamy Reaction ED attack At Kolar gvd
Author
First Published Jan 10, 2024, 11:30 PM IST

ಮಾಲೂರು (ಜ.10): ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ವೇ ಎಂದು ಶಾಸಕ ನಂಜೇಗೌಡರ ಮನೆ ಮೇಲೆ ಇಡಿ ದಾಳಿ ನಡೆದ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಪ್ರತಿಕ್ರಿಯಿಸಿದರು. ಅವರು ಪಟ್ಟಣದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಿದ ನಂತರ ಕನ್ನಡ ಪ್ರಭದೊಂದಿಗೆ ಮಾತನಾಡಿ, ಇಡಿ ಕೇಂದ್ರ ಸರ್ಕಾರದ ಸ್ವತಂತ್ರ ಸಂಸ್ಥೆ. ಅದರ ಕೆಲಸ ಅದು ಮಾಡುತ್ತಿದೆ. ಇಡಿ ಸಂಸ್ಥೆಯು ಸುಖಸುಮ್ಮನೆ ದಾಳಿ ನಡೆಸುವುದಿಲ್ಲ. ಅವರಿಗೆ ಮನಿ ಲಾಂಡ್ರಿಂಗ್ ವಾಸನೆ ಬಂದಿರಬೇಕು. ಅದಕ್ಕಾಗಿ ಈ ದಾಳಿ ನಡೆದಿರಬಹುದು ಎಂದರು.

ಮುಂಬರಲಿರುವ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯೇ ತಮಗೆ ಶ್ರೀ ರಕ್ಷೆಯಾಗಿರುವಾಗ ಇಡಿಯನ್ನು ಛೂಬಿಡುವ ಇರಾದೆ ತಮಗಿಲ್ಲ. ಕೇವಲ ದೂರುಗಳನ್ನು ನಂಬಿ ಇಡಿ ದಾಳಿ ನಡೆಸುವುದಿಲ್ಲ ಎಂದರು. ನರೇಂದ್ರ ಮೋದಿ ತಮ್ಮ ಆಡಳಿತದಲ್ಲಿ ಅನುಷ್ಠಾನಗೊಳಿಸಿರುವ ಜನಪರ ಯೋಜನೆಗಳು ಸಾಗರದಷ್ಟು ಇದ್ದು,ಬಿಜೆಪಿ ಜನತೆ ವಿಶ್ವಾಸ ಗಳಿಸಿರುವಾಗ ಒಬ್ಬ ಶಾಸಕನ ಮೇಲೆ ಇಡಿ ಧಾಳಿ ಬಗ್ಗೆ ಯೋಚಿಸಲು ಸಾಧ್ಯವೇ. ನನ್ನ ಕ್ಷೇತ್ರದಲ್ಲಿ ನ.೨೪ ರಿಂದ ವಿಕಸ ಭಾರತದ ಮೂರು ರಥಗಳು ಸಂಚಾರ ಮಾಡುತ್ತಿದ್ದು, ಈಗಾಗಲೇ ೨೦೨ ಪಂಚಾಯ್ತಿಗಳಲ್ಲಿ ಸಭೆ ನಡೆಸಲಾಗಿದೆ ಎಂದರು.

ಡೈರಿ ಮಿಲ್ಕ್ ಚಾಕಲೇಟ್ ನೀಡಿಕೆ: ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ, ದೂರು ಪ್ರತಿ ದೂರು ದಾಖಲು

ಸಿಎಂ ಕೆಡಿಪಿ ಸಭೆ ಮ್ಯಾಚ್ ಫಿಕ್ಸಿಂಗ್: ಕೋಲಾರ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನವು, ಸಾರ್ವಜನಿಕರಲ್ಲಿ ಜಿಲ್ಲೆಗೆ ಏನಾದರೂ ವಿಶೇಷ ಕೊಡುಗೆ, ಅನುದಾನ ಬಿಡುಗಡೆಯ ನಿರೀಕ್ಷೆ ಮೂಡಿಸಿತ್ತು. ಅದರೆ ಕೆ.ಡಿ.ಪಿ. ಸಭೆಯು ಮ್ಯಾಚ್ ಫಿಕ್ಷಿಂಗ್ ಮಾದರಿಯಲ್ಲಿ ನಡೆಯಿತು, ನಮಗೆ ಮಾತನಾಡುವ ಅವಕಾಶವಿರದೇ ಅವರ ಪಕ್ಷದವರೇ ಪ್ರಶ್ನೆ ಮಾಡುವುದು, ಉತ್ತರಿಸುವುದು ಎಲ್ಲವೂ ಮೊದಲೇ ಮಾತನಾಡಿಕೊಂಡಂತೆ ರೆಡಿಮೇಡ್ ಆಗಿತ್ತು ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗವಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಕೆ.ಡಿ.ಪಿ. ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಲ್ಲಿ ನೇಮಕಾತಿ ಹಗರಣಗಳು, ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿದ ಪ್ರಕರಣಗಳಿಗೆ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳ ಪಿತೂರಿಯಾಗಿದೆ ಎಂದು ಆರೋಪಿಸಿದಾಗ, ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಸಲು ಸೂಚನೆ ನೀಡಿದ್ದಾರೆ. ಈಗಾಗಲೇ ಶೇ.೫೦ರಷ್ಟು ಮಾತ್ರ ಜಂಟಿ ಸರ್ವೇಯಾಗಿದೆ ಎಂಬ ಸಿಎಂ ಉತ್ತರದ ಬಗ್ಗೆ ತಿಳಿಸಿದರು.

ಕೋಲಾರದಲ್ಲಿ ಈ ಹಿಂದೆ ಜಮೀರ್ ಪಾಷ ಎಂಬ ಜಿಲ್ಲಾಧಿಕಾರಿ ಇದ್ದಾಗ ರಹಸ್ಯವಾಗಿ ಸರ್ಕಾರಿ ಜಾಗಗಳನ್ನು ವಕ್ಪ್ ಸಮಿತಿಗೆ ಪರಬಾರೆ ಮಾಡಿದ್ದು, ಎಷ್ಟೋ ವರ್ಷಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದಿತು, ಈಗ ಅದೇ ಕೆಲಸವನ್ನು ಈಗಿನ ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಹ ನೀಡಲಾಗಿದೆ. ಈ ಕುರಿತು ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಲ್ಲಿ ಸಾವಿರಾರು ಅರ್ಜಿಗಳು ಬಂದಿದ್ದರೂ ಒಂದೇ ಸಮುದಾಯದ ೩೯೫ ಜನರನ್ನು ಆಯ್ಕೆ ಮಾಡಿ ಕೆ.ಜಿ.ಎಫ್ ನಲ್ಲಿ ಟೈಲರಿಂಗ್ ಗೆ ಕಳುಹಿಸುತ್ತಿದ್ದಾರೆ. ಈ ಸಂಬಂಧ ಅವರಿಗೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಮಾಡಲು ಬನ್ನಿ ಎಂದು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು,

ಡಿಸಿ ಕಛೇರಿಯ ಮಹಾತ್ಮ ಗಾಂಧಿ ಪ್ರತಿಮೆಗೆ ಮನವಿ ಕೊಟ್ಟ ರೈತ ಮುಖಂಡ!

ಮುಖ್ಯಮಂತ್ರಿಯು ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ, ಇದೊಂದು ಮ್ಯಾಚ್ ಫೀಕ್ಸಿಂಗ್, ಹೇಳಿಕೊಳ್ಳಲು ಕೋಲಾರದಲ್ಲಿ ಕೆ.ಡಿ.ಪಿ. ಸಭೆ ಅಷ್ಟೇ, ಆದ್ದರಿಂದ ಜನರ ನಿರೀಕ್ಷೆಗಳು ಹುಸಿಯಾಗಿವೆ, ರೈತರಿಗೆ ಕನಿಷ್ಟ ೨ ಸಾವಿರ ರು. ನೀಡಲು ಸಹ ಸರ್ಕಾರದಲ್ಲಿ ಹಣವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಸಮರ್ಪಕ ಕಾಸಿಲ್ಲದೆ ಪೂರ್ಣಗೊಳಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇವರೇ ಬೇರೆ ಕಡೆ ಸಾಲ ಮಾಡುತ್ತಿದ್ದಾರೆ, ಇನ್ನು ಅಭಿವೃದ್ದಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios