Asianet Suvarna News Asianet Suvarna News

ಕರ್ನಾಟಕ ದ್ರೋಹಿ ಮೋದಿಗೆ ತಕ್ಕಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ ಕರೆ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರ ದ್ರೋಹ ಮಾಡಿಕೊಂಡು ಬರುತ್ತಿದ್ದು ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ತಕ್ಕ ಪಾಠ ಕಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

Lok Sabha Election 2024 CM Siddaramaiah Slams On PM Narendra Modi gvd
Author
First Published Apr 5, 2024, 12:05 PM IST

ಚಿತ್ರದುರ್ಗ (ಏ.05): ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರ ದ್ರೋಹ ಮಾಡಿಕೊಂಡು ಬರುತ್ತಿದ್ದು ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ತಕ್ಕ ಪಾಠ ಕಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ಪ್ರವಾಹ, ಬರಗಾಲ ಬಂದಾಗ ರಾಜ್ಯದ ಕಡೆ ತಿರುಗಿ ಕೂಡ ನೋಡಲಿಲ್ಲ. ರಾಜ್ಯದ ಪಾಲಿನ ಬರಗಾಲದ ಅನುದಾನವನ್ನು ಒಂದು ರುಪಾಯಿ ನೀಡಲಿಲ್ಲ. ನಿರಂತರ ದ್ರೋಹವಾಗುತ್ತಿದ್ದರೂ ಬಿಜೆಪಿ ಸಂಸದರು ನೆಪಕ್ಕೂ ಪ್ರಶ್ನಿಸಲಿಲ್ಲ. 

ಭದ್ರಾ ಮೇಲ್ದಂಡೆಗೆಗಾಗಿ 5,300 ಕೋಟಿ ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದರೂ ಒಂದು ಪೈಸೆ ಬಿಡುಗಡೆ ಮಾಡಲಿಲ್ಲವೆಂದು ಹೇಳಿದರು. ಆರ್‌ಎಸ್ಎಸ್ ನಲ್ಲಿ ಬಿಜೆಪಿಯವರಿಗೆ ಸುಳ್ಳು ಹೇಳುವ ತರಬೇತಿ ಕೊಡ್ತಾರೆ. ಕೇಂದ್ರ ಸಚಿವ ಅಮಿತ್ ಶಾ ಭಯಾನಕ ಸುಳ್ಳುಗಾರ. ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ತಿರುಗ್ತಾ ಇದಾರೆ. ರಾಜ್ಯದ ಜನರ ಪಾಲಿನ ಬರಗಾಲದ ಹಣ ಏಕೆ ವಾಪಸ್ ಕೊಡಲಿಲ್ಲ ಎಂದು ನಾಡಿನ ಜನತೆ ಪ್ರಶ್ನೆ ಕೇಳಿದ್ರೆ ರಾಜ್ಯ ಸರ್ಕಾರ 3 ತಿಂಗಳು ವಿಳಂಬವಾಗಿ ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಆರು ತಿಂಗಳ ಮೊದಲೇ ಕೇಂದ್ರಕ್ಕೆ ಪತ್ರ ಹೋಗಿದೆ. ಇಂತಹ ಸುಳ್ಳು ಹೇಳಲು ನಾಚಿಕೆಯಾಗಲ್ವ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಭ್ರಮೆಯಲ್ಲಿ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ

ಮುಂದುವರಿದ ಮಿಸ್ಟರ್ ಮೋದಿ ವಾಗ್ದಾಳಿ: ಮಿಸ್ಟರ್ ಮೋದಿ ಎಂದು ಸಂಬೋಧಿಸುತ್ತಲ್ಲೇ ಚಿತ್ರದುರ್ಗದಲ್ಲಿ ತಮ್ಮ ವಾಗ್ದಾಳಿ ಮುಂದುರಿಸಿದ ಸಿಎಂ ಸಿದ್ದರಾಮಯ್ಯ , ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಎಂದರು. ನಿಮ್ಮಿಂದಾಗಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ನೆರವಾಗುವ ಕಾರಣಕ್ಕೆ ಐದು ಗ್ಯಾರಂಟಿ ಜಾರಿ ಮಾಡಿದೆವು. ಪ್ರತೀ ಕುಟುಂಬಕ್ಕೆ 4 ರಿಂದ 6 ಸಾವಿರ ರುಪಾಯಿ ಉಳಿತಾಯವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಇದು ಸಾಧ್ಯವಾಗಿದೆ ಮಿಸ್ಟರ್ ಮೋದಿಯವರೇ ಎಂದರು.

ಅಧಿಕಾರದಲ್ಲಿದ್ದಾಗ ಹಣ ಲೂಟಿ ಮಾಡೋದು, ಆಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ಬಿಜೆಪಿಯವರ ಜಾಯಮಾನ. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರುಪಾಯಿ ಜಮೆ ಮಾಡ್ತೀನಿ ಅಂದ್ರಿ ಮಾಡಿದ್ರಾ ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರುಪಾಯಿ ಕೂಡ ಹೆಚ್ಚಾಗಲಿಲ್ಲ. ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ತರಲು ನಡೆದ ಆಪರೇಷನ್ ಗೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ ? ಅದು ಕಪ್ಪು ಹಣ ಅಲ್ಲವೇ ,ದೇಶದ ಜನಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಿ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಲೋಕಸಭಾ ಅಭ್ಯರ್ಥಿ ಚಂದ್ರಪ್ಪ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ, ವೀರೇಂದ್ರ ಪಪ್ಪಿ, ಪಾವಗಡ ವೆಂಕಟೇಶ್, ಗೋವಿಂದಪ್ಪ, ಬಸವಂತಪ್ಪ, ಮಾಜಿ ಸಚಿವ ಆಂಜನೇಯ, ಜಿ.ಎಸ್.ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios