Asianet Suvarna News Asianet Suvarna News

ತುಮಕೂರು : ಕೊಳವೆಬಾವಿಗಳನ್ನು ತ್ವರಿತ ವಿದ್ಯುದ್ದೀಕರಣಗೊಳಿಸಲು ಡಿಸಿ ಸೂಚನೆ

ಸಾರ್ವಜನಿಕ ಉದ್ದೇಶದ ಕುಡಿಯುವ ನೀರಿನ ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಸಲ್ಲಿಸಿದ ಮೂರು ದಿನದೊಳಗಾಗಿ ಕೊಳವೆಬಾವಿಗಳನ್ನು ವಿದ್ಯುದ್ದೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

Tumkur : DC notification for quick electrification of bore wells snr
Author
First Published Apr 20, 2024, 4:17 PM IST

 ತುಮಕೂರು :  ಸಾರ್ವಜನಿಕ ಉದ್ದೇಶದ ಕುಡಿಯುವ ನೀರಿನ ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಸಲ್ಲಿಸಿದ ಮೂರು ದಿನದೊಳಗಾಗಿ ಕೊಳವೆಬಾವಿಗಳನ್ನು ವಿದ್ಯುದ್ದೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಬರ ನಿರ್ವಹಣೆ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಅಡಿ ಕೊಳವೆಬಾವಿಗಳನ್ನು ಕೊರೆಯಲಾಗಿರುವುದು ಸರಿಯಷ್ಟೆ. ಆದರೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ನೀಡಿರುವುದಿಲ್ಲ. ಆದುದರಿಂದ ಸಾರ್ವಜ ನಿಕ ಉದ್ದೇಶಗಳಿಗೆ ಕುಡಿವ ನೀರಿಗೆ ಸಂಬಂಧಿಸಿದಂತೆ ಅರ್ಜಿ ಬಂದ ೩ ದಿನಗಳೊಳಗಾಗಿ ಕೆಲಸ ಆಗಬೇಕು ಎಂದರು.

ಬೋರ್‌ವೆಲ್ ಕೊರೆಯುವ ಮಾಲೀಕರುಗಳು ಸಾರ್ವಜನಿಕ ಉದ್ದೇಶದ ಕೊಳವೆಬಾವಿಗಳನ್ನು ಕೊರೆಯಲು ಪ್ರಥಮಾಧ್ಯತೆ ನೀಡಬೇಕು. ತದನಂತರ ಖಾಸಗಿ ಬೋರ್‌ವೆಲ್‌ಗಳನ್ನು ಕೊರೆಯಬಹುದಾಗಿದೆ. ಉಪವಿಭಾಗಾಧಿಕಾರಿಗಳು ಟಾಸ್ಕ್ಫೋರ್ಸ್ ಸಭೆಯನ್ನು ನಡೆಸಿ ಸಮರ್ಪಕ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಬೂಬು ನೀಡಬಾರದು. ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿರುವ ಬಗ್ಗೆ ವ್ಯಾಪಕವಾಗಿ ಪತ್ರಿಕಾ ಪ್ರಕಟಣೆಗಳನ್ನು ನೀಡುವಂತೆ ಹಾಗೂ ಪೈಪ್‌ಲೈನ್ ಹೊಂದಿರುವಂತಹ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಕುಡಿಯುವ ನೀರನ್ನು ಪೂರೈಸುವಂತೆ ಸೂಚಿಸಿದರು.

ಕುಡಿಯುವ ನೀರಿನ ಉದ್ದೇಶಗಳಿಗಾಗಿ ಪ್ರತಿ ತಾಲ್ಲೂಕಿಗೆ 85 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಕಂಟಿಂಜೆನ್ಸಿ ಆಕ್ಷನ್ ಪ್ಲಾನ್ ಪ್ರಕಾರ ಟಾಸ್ಕ್ಫೋರ್ಸ್ನಲ್ಲಿಟ್ಟು ಚರ್ಚಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಅವರು ಮಾತನಾಡಿ, ಜೆಜೆಎಂ ಪ್ರಗತಿ ಬಗ್ಗೆ ಎಸಿ, ತಹಸೀಲ್ದಾರ್ ಮತ್ತು ಇಗಳು ಗಮನಹರಿಸಬೇಕು. ಆಕ್ಷನ್ ಪ್ಲಾನ್ ಪ್ರಕಾರ ಅನುಮೋದನೆಯಾಗಿರುವ ಕೆಲಸವನ್ನು ಪೂರ್ಣಗೊಳಿಸಬೇಕು. ಇದಕ್ಕೆ ಉಪವಿಭಾಗಾಧಿಕಾರಿಗಳೇ ಸಂಪೂರ್ಣ ಹೊಣೆಯಾಗಿರುತ್ತಾರೆ ಎಂದು ಸೂಚಿಸಿದರು.

ಸಮಗ್ರ ಸ್ವಚ್ಛತೆ ಕಾರ್ಯಕ್ರಮದಡಿ ಏಪ್ರಿಲ್ 21 ಮತಗಟ್ಟೆ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಬೇಕು. ಒಟ್ಟು 250 ಮತಗಟ್ಟೆಗಳನ್ನು ಆಕರ್ಷಕ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಮತಗಟ್ಟೆಗಳು ಆಕರ್ಷಣೀಯವಾಗಿರುವ ಹಾಗೆ ನೋಡಿಕೊಳ್ಳಬೇಕು. ಮತದಾನದ ದಿನದಂದು ಜನರು ಬಿಸಿಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ಬಗ್ಗೆ ಯಾವುದೇ ಛಾಯಾಚಿತ್ರ ಹಾಗೂ ದೂರು ಬರಬಾರದು. ಮತಗಟ್ಟೆ ಆವರಣದೊಳಗಿನ ನಿರೀಕ್ಷಣಾ ಕೊಠಡಿಗಳನ್ನು ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನನ್ನ ನಡೆ–ಮತಗಟ್ಟೆ ಕಡೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯಬೇಕು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳನ್ನು ಆಯಾ ಮತಗಟ್ಟೆಗಳಲ್ಲಿ ಅಳವಡಿಸಬೇಕು. ಮತ್ತು ವೋಟರ್ ಸ್ಲಿಪ್‌ಗಳನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios