ಲೋಕಸಭೆಗೆ ತಯಾರಿ : ಚಿತ್ರದುರ್ಗ ಕ್ಷೇತ್ರದಲ್ಲಿ ತಿಮ್ಮರಾಯಪ್ಪ ರೌಂಡ್ಸ್
ಹಲವು ತಾಲೂಕುಗಳಲ್ಲಿ ಪ್ರವಾಸ ನಡೆಸಿ ಚುನಾವಣೆಯ ಸಿದ್ಧತೆ ಬಗ್ಗೆ ಅಲ್ಲಿನ ಸ್ಥಳೀಯ ಮುಖಂಡ ಮತ್ತು ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಚುನಾವಣೆಯ ಉಸ್ತುವಾರಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹೇಳಿದರು.
ಪಾವಗಡ : ಹಲವು ತಾಲೂಕುಗಳಲ್ಲಿ ಪ್ರವಾಸ ನಡೆಸಿ ಚುನಾವಣೆಯ ಸಿದ್ಧತೆ ಬಗ್ಗೆ ಅಲ್ಲಿನ ಸ್ಥಳೀಯ ಮುಖಂಡ ಮತ್ತು ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಚುನಾವಣೆಯ ಉಸ್ತುವಾರಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹೇಳಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ರಾಷ್ಟ್ರ ಸಜ್ಜಾಗಿದ್ದು, ಗಡುವು ನಿಗದಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ಹಾಗೂ ಮಾಜಿ ಪ್ರಧಾನಿಯಾದ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇತರೆ ರಾಜ್ಯ ಜೆಡಿಎಸ್ ವರಿಷ್ಠರ ಆದೇಶದ ಮೇರೆಗೆ ಪ್ರಸಕ್ತ ಸಾಲಿನ ಚಿತ್ರದುರ್ಗ ಲೋಕಸಭೆ ಚುನಾವಣೆಯ ಜೆಡಿಎಸ್ ಉಸ್ತುವಾರಿ ವಹಿಸಿಕೊಳ್ಳಲಾಗಿದೆ. ರಾಷ್ಟ ಹಾಗೂ ರಾಜ್ಯ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ ಪ್ರವಾಸ ಕೈಗೊಂಡಿದ್ದು ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ಹಾಗೂ ಮೊಳಕಾಲ್ಮೂರು ತಾಲೂಕು ಕೇಂದ್ರಗಳಲ್ಲಿ ಮುಖಂಡ ಮತ್ತು ಕಾರ್ಯಕರ್ತರ ಸಭೆ ನಡೆಸಿ ಸಂಘಟನೆ ಹಾಗೂ ಇತರೆ ಆನೇಕ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದರು.
ಪಕ್ಷದ ತೀರ್ಮಾನದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಸಲಹೆ ಪಡೆದಿರುವುದಾಗಿ ತಿಳಿಸಿದ್ದು, ಅತಿ ಶೀಘ್ರ ಪಾವಗಡದಲ್ಲಿ ಜೆಡಿಎಸ್ ಮುಖಂಡ ಸಭೆ ನಡೆಸಿ ಲೋಕಸಭಾ ಚುನಾವಣೆಯ ರೂಪುರೇಷೆಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಎ. ಈರಣ್ಣ ಮಾತನಾಡಿ, ಇದುವರೆಗೂ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಪಕ್ಷ ಸಂಘಟನೆ ಹಾಗೂ ಪಕ್ಷದ ಅನುಸಾರವಾಗಿ ನಡೆಯುವ ತೀರ್ಮಾನಕ್ಕೆ ಬದ್ಧರಾಗಿದ್ದು, ಸ್ಥಳೀಯ ಮುಖಂಡ ಮತ್ತು ಕಾರ್ಯಕರ್ತರ ಸಂಘಟನೆ ಸದೃಢವಾಗಿದೆ, ಇನ್ನೂ ಪಕ್ಷದ ಪ್ರಬಲ ಸಂಘಟನೆಗೆ ಸಜ್ಜಾಗುವುದಾಗಿ ಹೇಳಿದರು.