Asianet Suvarna News Asianet Suvarna News

ಬಜೆಟ್‌ನಲ್ಲಿ ಕೃಷಿ ಸಾಲ ನೀತಿಯಲ್ಲಿ ಬದಲಾವಣೆ- ಸಿಎಂ ಬೊಮ್ಮಾಯಿ

ಫೆ. 17ರಂದು ಮಂಡಿಸಲಿರುವ ರಾಜ್ಯ ಬಜೆಟ್‌ ವಿಶೇಷವಾಗಿ ರೈತಪರವಾಗಿರಲಿದೆ. ಕೃಷಿ ಸಾಲದ ನೀತಿ ಬದಲಾವಣೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೈತರಿಗೆ ನೀಡುವ ಚಿಂತನೆ ನಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಶುಭ ಸುದ್ದಿ ನೀಡಿದ್ದಾರೆ.

Change in Agriculture Credit Policy in Budget says CM Bommai at hubballi rav
Author
First Published Feb 1, 2023, 7:32 AM IST

ಧಾರವಾಡ (ಫೆ.1) : ಫೆ. 17ರಂದು ಮಂಡಿಸಲಿರುವ ರಾಜ್ಯ ಬಜೆಟ್‌ ವಿಶೇಷವಾಗಿ ರೈತಪರವಾಗಿರಲಿದೆ. ಕೃಷಿ ಸಾಲದ ನೀತಿ ಬದಲಾವಣೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೈತರಿಗೆ ನೀಡುವ ಚಿಂತನೆ ನಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಶುಭ ಸುದ್ದಿ ನೀಡಿದ್ದಾರೆ.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ನೂತನ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಪಂಡಿತ್‌, ಕೃಷಿ ಪ್ರಶಸ್ತಿ ಪ್ರದಾನ ಮಾಡಿದರು.

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಕೃಷಿಯ ಮೂಲ ಸಮಸ್ಯೆಗೆ ಪರಿಹಾರ ಒದಗಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದ್ದು, ಈ ಮೂಲಕ ಕೃಷಿಗೆ ಶಕ್ತಿ ತುಂಬಲಿದ್ದೇವೆ. ರೈತರು ಬೆಳೆದ ಬೆಳೆಗೆ ಬೆಲೆಯ ಅನಿಶ್ಚಿತತೆ ಹೋಗಲಾಡಿಸಿ ನಿಶ್ಚಿತತೆ ತರುವುದು ತಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೈತಪರ ಯೋಜನೆಗಳನ್ನು ಘೋಷಿಸುವ ಮುನ್ಸೂಚನೆ ನೀಡಿದರು.

ಇಂಧನ ವೆಚ್ಚದ ಭಾರ:

ಸ್ವಾಂತ್ರಂತ್ರ್ಯ ನಂತರ ಕೃಷಿ ಬೆಳೆದಿದೆ. ಹಸಿರು ಕ್ರಾಂತಿಯಾಗಿದೆ. ಇಷ್ಟಾಗಿಯೂ ರೈತರು ಮಾತ್ರ ಆರ್ಥಿಕವಾಗಿ ಸದೃಢರಾಗುತ್ತಿಲ್ಲ. ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದ ಎಲ್ಲ ವರ್ಗದ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹದ ದೃಷ್ಟಿಯಿಂದ ಇಂಧನ ವೆಚ್ಚದ ಭಾರವನ್ನು ರಾಜ್ಯ ಸರ್ಕಾರ ಕಡಿತಗೊಳಿಸಲು ರೈತ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಎಕರೆಗೆ . 250ರಂತೆ ಗರಿಷ್ಠ ಐದು ಎಕೆರೆಗೆ . 1250 ನೀಡುತ್ತಿದೆ. ಇದಕ್ಕಾಗಿ . 500 ಕೋಟಿ ಅನುದಾನ ತೆಗೆದಿರಿಸಿದ್ದು ಈ ಪೈಕಿ ಸದ್ಯ . 51.80 ಲಕ್ಷ ರೈತರಿಗೆ . 383.15 ಕೋಟಿ ರೈತರ ಅಕೌಂಟ್‌ಗೆ ಜಮೆಯಾಗಿದೆ. ಭೂರಹಿತ ಕೃಷಿ ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 11 ಲಕ್ಷ ಮಕ್ಕಳಿಗೆ . 488 ಕೋಟಿ ಅನುದಾನ ಒದಗಿಸಿದೆ ಎಂದು ಅಂಕಿ ಸಮೇತ ಬಿಜೆಪಿ ಸರ್ಕಾರದ ಸಾಧನೆ ಹೇಳಿಕೊಂಡರು.

ವಿರೋಧ ಪಕ್ಷಗಳು ಬೆಳಗಾವಿ ಅಧಿವೇಶನದಲ್ಲಿ ಬೆಳೆಹಾನಿ ಬಗ್ಗೆ ಬೊಬ್ಬೆ ಹೊಡೆದವು. ಆದರೆ, ತಮ್ಮ ಆಡಳಿತಾವಧಿಯಲ್ಲಿ ತಾವು ಏನು ಮಾಡಿದ್ದಾರೆಂದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಮಳೆಯಿಂದ ಬೆಳೆಹಾನಿಯಾಗಿ ಎರಡೇ ತಿಂಗಳಲ್ಲಿ ರಾಜ್ಯದ 14 ಲಕ್ಷ ರೈತರಿಗೆ . 1900 ಕೋಟಿ ಪರಿಹಾರ ಒದಗಿಸಲಾಗಿದೆ. ಪ್ರಚಾರಗೋಸ್ಕರ ಕಾರ‍್ಯಕ್ರಮ ಮಾಡದೇ ರೈತರ, ಕೂಲಿಕಾರ್ಮಿಕರ ಜೀವನ ಸುಧಾರಣೆಗೋಸ್ಕರ ಈ ಕಾರ‍್ಯ ಮಾಡುತ್ತಿದ್ದು, ರೈತರಿಗೆ ಸ್ಪಂದಿಸಿದ ಸಮಾಧಾನ ನನಗಿದೆ. ಈ ಕಾರ‍್ಯಕ್ರಮದಲ್ಲಿ ರೈತರ ಮಂದಹಾಸ ನೋಡಿ ಹಂಡೆ ಹಾಲು ಕುಡಿದಷ್ಟುಸಂತೋಷ ಆಗುತ್ತಿದೆ ಎಂದರು.

21 ದುಡಿಮೆಗಾರರ ಶತಮಾನ:

ಶ್ರೀಮಂತರಿಂದ ರಾಜ್ಯ ಕಟ್ಟಲಾಗುವುದಿಲ್ಲ. ರೈತರು, ಕೂಲಿ ಕಾರ್ಮಿಕರಿಂದಲೇ ರಾಜ್ಯವನ್ನು ಕಟ್ಟಲು ಸಾಧ್ಯ. 21ನೇ ಶತಮಾನ ದುಡ್ಡಿದ್ದವರದ್ದಲ್ಲ, ದುಡಿಮೆ ಇದ್ದವರದು. ಈಗ ದುಡಿಮೆ ಇದ್ದವರೇ ದೊಡ್ಡಪ್ಪ. ಕೆಳ ಹಂತದ ಜನರಿಗೆ ಧ್ವನಿಯಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದ್ದು ಕೆಳ ಹಂತದಿಂದಲೇ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಭಾವನಾತ್ಮಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಪ್ರಮುಖ ಎನಿಸಿರುವ ಮಣ್ಣ ಮತ್ತು ನೀರಿನ ಪರೀಕ್ಷೆ, ಕೀಟ ಮತ್ತು ರೋಗಗಳನ್ನು ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣಾ ಕ್ರಮಗಳ ಕುರಿತು ಮಾಹಿತಿಯನ್ನು ರೈತರ ಕ್ಷೇತ್ರ ಭೇಟಿಯ ಮೂಲಕ ನೀಡುವುದಕ್ಕೆ . 11.52 ಕೋಟಿ ಅನುದಾನದಲ್ಲಿ 64 ಸಂಚಾರಿ ಸಸ್ಯ ಆರೋಗ್ಯದ ಕೃಷಿ ಸಂಜೀವಿನಿ ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. ಕೃಷಿ ಸಚಿವ ಬಿ.ಸಿ. ಪಾಟೀಲ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ ಮತ್ತಿತರರು ಇದ್ದರು.

ರಾಜ್ಯದ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿದ ರೈತರಿಗೆ 9 ಕೃಷಿ ಪಂಡಿತ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು 23 ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮುಖ್ಯಮಂತ್ರಿ ಗೌರವಿಸಿದರು.

ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆಗೆ ಚಿಂತನೆ

ರೈತರು, ಕೃಷಿ ಕೂಲಿಕಾರ್ಮಿಕರು ಸೇರಿದಂತೆ ತಳಮಟ್ಟದ ಜನರನ್ನು ಗಟ್ಟಿಗೊಳಿಸಿದರೆ ಮಾತ್ರ ನಾಡು ಕಟ್ಟಡಬಹುದು. ಇದಕ್ಕಾಗಿ ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆಯಾಗಬೇಕಿದÜು್ದ, ಕೃಷಿ ಪರಿಣಿತರ ಜತೆಗೆ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ನೂತನ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಪಂಡಿತ್‌, ಕೃಷಿ ಪ್ರಶಸ್ತಿ ಪ್ರದಾನ ಮಾಡಿದ ಅವರು, ಕೃಷಿ ಆರ್ಥಿಕತೆ ಬೆಳೆಯಲು ರಾಜ್ಯ ಸರ್ಕಾರ ವಿಶೇಷ ನೆರವು ನೀಡಲು ಮುಂದಾಗಿದ್ದು ರೈತರು, ಕೂಲಿಕಾರರು ಸಹ ಆರ್ಥಿಕವಾಗಿ ಸಬಲರಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ರೈತ ಶಕ್ತಿ, ವಿದ್ಯಾನಿಧಿ ಅಂತಹ ಯೋಜನೆಗಳ ಉದಾಹರಣೆ ನೀಡಿದರು.

ಕೃಷಿ ಸಾಲ ನೀತಿ ಬದಲು:

ಯಾವುದೇ ಒಂದು ಬೆಳೆಯ ಆದಾಯದ ನಿರೀಕ್ಷೆ ಹಾಗೂ ಲೆಕ್ಕಾಚಾರ ಹಾಕದೇ ರೈತರು ಬೆಳೆ ಬಿತ್ತಿ ಬೀಜ, ಗೊಬ್ಬರ, ಯಂತ್ರೋಪಕರಣ ಹಾಗೂ ಔಷಧಿ ಅಂತಹವುಗಳಿಗೆ ಅತ್ಯಧಿಕ ವೆಚ್ಚ ಮಾಡುತ್ತಿದ್ದಾರೆ. ಬೆಳೆಯ ಖರ್ಚು-ವೆಚ್ಚ ತೆಗೆದು ಉಳಿತಾಯ ಆಗುವ ರೀತಿಯಲ್ಲಿ ನಿಶ್ಚಿತ ಬೆಲೆ ಬರುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದರೊಂದಿಗೆ ಪ್ರಸಕ್ತ ವರ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ .33 ಲಕ್ಷ ಕೋಟಿ ನೀಡಲಾಗಿದ್ದು, ರೈತರಿಗೆ ನೀಡುತ್ತಿರುವ ಈ ಸಾಲದ ನೀತಿಯಲ್ಲೂ ಬದಲಾವಣೆ ಮಾಡುವ ನಿಟ್ಟಿನಲ್ಲಿ ತಾವು ಚಿಂತನೆ ನಡೆಸಿದ್ದಾಗಿ ತಿಳಿಸಿದರು.

ಪ್ರತಿ ಗ್ರಾಮದಲ್ಲಿ ಎರಡು ಯುವಕ ಸಂಘಗಳಿದ್ದು ಅವುಗಳಿಗೆ .1 ಲಕ್ಷ ಸರ್ಕಾರದ ಅನುದಾನ, .4 ಲಕ್ಷ ಬ್ಯಾಂಕ್‌ ಸಾಲ ನೀಡುವ ಮೂಲಕ ಗ್ರಾಮದಲ್ಲೇ ಮಾರುಕಟ್ಟೆಸೇರಿದಂತೆ ಆರ್ಥಿಕ ಪುನಶ್ಚೇತನ ಮಾಡಲಾಗುವುದು. ಇದರೊಂದಿಗೆ ಪ್ರತಿ ಗ್ರಾಮದಲ್ಲಿ ಮಹಿಳಾ ಮಂಡಳಗಳಿಗೂ ಆರ್ಥಿಕ ಬಲ ನೀಡಲಾಗುತ್ತಿದೆ ಎಂದು ಹೇಳಿದರು.

ಕೃಷಿ ನವೋದ್ಯಮ:

ಪ್ರಾಸ್ತಾವಿಕ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ಕೃಷಿ ಇಲಾಖೆಯಲ್ಲಿ ರೈತರಿಗೆ ನೂರಾರು ಯೋಜನೆಗಳಿದ್ದು ಅವುಗಳನ್ನು ಬಳಸಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಕೃಷಿ ಮೂಲಭೂತ ಸೌಕರ್ಯ ಪಡೆದುಕೊಳ್ಳಲು ಪ್ರಧಾನ ಮಂತ್ರಿ ಹೆಸರಿನ ಯೋಜನೆ ಯುವಕರಿಗೆ ಅನುಕೂಲವಾಗಿದೆ. ಅದಕ್ಕಾಗಿ .1 ಲಕ್ಷ ಕೋಟಿ ಅನುದಾನವಿದ್ದು ರೈತರು .2 ಕೋಟಿ ವೆರೆಗೂ ಶೇ. 3ರಷ್ಟುಬಡ್ಡಿದರದಲ್ಲಿ ಸಾಲ ಪಡೆಯಬಹುದು. ಶೀಥಲೀಕರಣ ಘಟಕ, ಆಹಾರ ಸಂಸ್ಕರಣ ಘಟಕ, ತಮ್ಮ ಬೆಳೆಗೆ ಮೌಲ್ಯವರ್ಧನೆ, ಮಾರಾಟ ವ್ಯವಸ್ಥೆ ಸೇರಿದಂತೆ ಹಲವು ಅವಕಾಶಗಳಿವೆ ಎಂದ ಅವರು, ಕೃಷಿ ಉದ್ಯಮ ಈಗ ನವೋದ್ಯಮವಾಗಿದ್ದು ಯುವಕರು ಸಮಗ್ರ ಕೃಷಿ ಮೂಲಕ ಆರ್ಥಿಕವಾಗಿ ಸಬಲಾಗಬೇಕೆಂದರು. ಕಳಪೆ ಬೀಜ, ಗೊಬ್ಬರ ಮಾರಾಟ ತಡೆಯಲು ಜಾಗೃತಿ ವಹಿಸಿದ್ದು ಅಂತಹ 248 ಮಾರಾಟಗಾರರ ಪರವಾನಗಿ ರದ್ದುಗೊಳಿಸಿ ಅವರಿಂದ .19.40 ಲಕ್ಷ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂದು ಬಿ.ಸಿ. ಪಾಟೀಲ ಮಾಹಿತಿ ನೀಡಿದರು.

ಕೃಷಿ ವಿವಿಯಲ್ಲಿ ನೂತನವಾಗಿ ಸ್ಥಾಪಿಸಿದ ಡಾ.ಎಸ್‌.ವಿ. ಪಾಟೀಲ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠವನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು. ಜತೆಗೆ ಕೃಷಿವಿವಿ ಅಮೃತ್‌ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ಲದೇ, ಮುಖ್ಯಮಂತ್ರಿ ನೈಸರ್ಗಿಕ ಕೃಷಿ ಯೋಜನೆಯಡಿ ಆಯ್ಕೆಯಾದ ರೈತರಿಗೆ ಸಹಾಯಧನ ಚೆಕ್‌ ಹಾಗೂ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಮಾಡಿದರು.

ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕ ಅರವಿಂದ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ರಾಜೇಶ ಕೋಟೆನ್ನವರ, ಡಾ. ಅಶೋಕ ದಳವಾಯಿ, ಶಿವಯೋಗಿ ಕಳಸದ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ, ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಇದ್ದರು.

ಅಭಿವೃದ್ಧಿಗೆ ಸರ್ಕಾರ ಬದ್ಧ, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೈತರಿಗೆ ವಿಶೇಷ ಆದ್ಯತೆ: ಸಿಎಂ ಬೊಮ್ಮಾಯಿ

ರೈತರ ಆಕ್ರೋಶ...

ಕೃಷಿ ಸಚಿವ ಬಿ.ಸಿ. ಪಾಟೀಲ ಭಾಷಣದ ವೇಳೆ ಕೆಲವು ರೈತರು ಬೆಳೆವಿಮೆ ವಿಷಯವಾಗಿ ಗಟ್ಟಿಧ್ವÜನಿಯಲ್ಲಿ ಕೂಗಿ ಪ್ರತಿಭಟಿಸಿದರು. ಬೆಳಹಾನಿ ಪರಿಹಾರ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವ ಬಿ.ಸಿ. ಪಾಟೀಲ ಅಂಕಿ ಸಮೇತ ಸ್ಪಷ್ಟನೆ ನೀಡಿದರೂ ರೈತರ ಧ್ವನಿ ಮಾತ್ರ ಏರುತ್ತಿತ್ತು. ನಂತರ ಮುಖ್ಯಮಂತ್ರಿ ಬೊಮ್ಮಾಯಿ ಭಾಷಣದ ವೇಳೆಯೂ ಕೆಲವು ರೈತರು ಕೂಗಾಟ ನಡೆಸಿದರು. ಕೊನೆಗೆ ಪ್ರತಿಭಟಿತ ರೈತರ ಬೇಡಿಕೆ ಆಲಿಸುತ್ತೇನೆ. ವೇದಿಕೆಯ ಬದಿಗೆ ಬರುವಂತೆ ಮುಖ್ಯಮಂತ್ರಿಗಳು ಕೇಳಿಕೊಂಡಾಗ ರೈತರು ಸುಮ್ಮನಾದರು. ಆದರೆ, ನಿಗದಿತ ಸಮಯಕ್ಕಿಂತ ಎರಡು ಗಂಟೆ ಕಾಲ ತಡವಾದ ಕಾರಣ ಮುಖ್ಯಮಂತ್ರಿ ರೈತರಿಗೆ ಭೇಟಿಯಾಗದೇ ತೆರಳಿದ್ದು ರೈತರಲ್ಲಿ ಬೇಸರ ಮೂಡಿಸಿತು.

Follow Us:
Download App:
  • android
  • ios