ಕಾಂಗ್ರೆಸ್ ಸರ್ಕಾರ ಪೊಲೀಸರಿಗೆ ಕೆಲಸ ಮಾಡೋಕೆ ಬಿಡಲ್ಲ; ರಾಜ್ಯಕ್ಕೆ ಸಿಂಘಂ ಅಣ್ಣಾಮಲೈ ಎಂಟ್ರಿಯಾಗುತ್ತಲೇ ಗಂಭೀರ ಆರೋಪ
ಬೆಂಗಳೂರು (ಏ.22): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಲ್ಲಿ ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಇವರು ಆರೋಪಿಗಳ ಪರ ಇದ್ದಾರೆ. ಅಂದರೆ, ಕಾಂಗ್ರೆಸ್ ತುಷ್ಟಿಕರಣ ಮಾಡ್ತಾ ಇದೆ ಎಂದು ರಾಜ್ಯದ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆಗಿಳಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಪೊಲೀಸ್ ಗೆ ಕೆಲಸ ಮಾಡೋಕೆ ಬಿಡಲ್ಲ. ನಾನು ರಾಜಕಾರಣಿ ಆಗಿ ಈಗ ನನ್ನ ಪೊಲೀಸ್ ಅವಧಿ ಬಗ್ಗೆ ಮಾತಾಡೋಕೆ ಹೋಗಲ್ಲ. ತಪ್ಪಾಗುತ್ತದೆ. ಆದರೆ ಕಾಂಗ್ರೆಸ್ ತುಷ್ಟಿಕರಣ ಮಾಡ್ತಾ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಹುಬ್ಬಳ್ಳಿಯ ಕಾಲೇಜು ಯುವತಿ ನೇಹಾ ಕೊಲೆ ಆಗಿದೆ. ಇದು ಆಗಬಾರದಿತ್ತು. ಸರ್ಕಾರ ಏನು ಕ್ರಮ ಕೈಗೊಂಡಿದೆ? ಈ ಬಗ್ಗೆ ಸ್ವತಃ ನೇಹಾ ತಂದೆ ನಿರಂಜನ್ ಹಿರೇಮಠ್ ಅವರೇ ಹೇಳಿದ್ದಾರೆ ಏನೆಲ್ಲಾ ಆಗಿದೆ ಎಂದು. ಕಾಂಗ್ರೆಸ್ ಸರ್ಕಾರದವರು ವಿಕ್ಟಿಮ್ ಪರ ಇದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದರು.
ರಾಜ್ಯದ ಜನತೆಗೆ ತಲಾ 10 ಕೆ.ಜಿ. ಅಕ್ಕಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.ಈವರೆಗೆ ಒಂದು ಕಾಳು ಅಕ್ಕಿ ಕೊಟ್ರಾ? ಕಾಂಗ್ರೆಸ್ ಒಂದೊಂದು ಚುನಾವಣೆ ಒಂದೊಂದು ಡ್ರಾಮಾ ಮಾಡತ್ತದೆ. ಈಗ ಚೊಂಬಿನ ಡ್ರಾಮಾ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕರು ಕರ್ನಾಟಕ ಜನರಿಗೆ ಚೊಂಬು ಕೊಟ್ಟು ಡ್ರಾಮಾ ಮಾಡುತ್ತಿದ್ದಾರೆ.
ಕರ್ನಾಟಕ ನಂಗೆ ಹೊಸತಲ್ಲ. ನಾನು ಈ ಹಿಂದೆ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೂ ಬಂದಿದ್ದೆ. ಈಗಲೂ ಬಂದಿದ್ದೇನೆ. 2014 ಹಾಗೂ 2019ರ ಚುನಾವಣೆಯಿಂದ ಈಬಾರಿಯ ಲೋಕಸಭಾ ಚುನಾವಣೆವರೆಗೂ ಮೋದಿ ಅವರ ಅಲೆಯಿದೆ. ಬಿಜೆಪಿ ರಾಜ್ಯದ ಎಲ್ಲ ಸೀಟು ಗೆಲ್ಲಲಿದೆ.
ಕಾಂಗ್ರೆಸ್ನವರಿಗೆ ಮೋದಿಜಿಗೆ ಬೈಯೋದು ಬಿಟ್ಟು ಏನು ಇಲ್ಲ. ಸುಮ್ನೆ ಆರೋಪ ಮಾಡಿ ಜಾಹೀರಾತು ನೀಡಿದ್ದಾರೆ. 1,500 ಕೋಟಿ ರೂ. ಬರ ಹರಿಹಾರ ನೀಡಿತ್ತು ಎಂದರು.
2004ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ ಶೇ.8 ಅನುದಾನ ನೀಡುತ್ತಿದ್ದರು. ಆದರೆ, ಮೋದಿ ಅಧಿಕಾರದಲ್ಲಿ ರಾಜ್ಯಕ್ಕೆ ನೀಡುವ ಅನುದಾನವನ್ನು ಶೇ.38% ಜಾಸ್ತಿ ಮಾಡಿದ್ದಾರೆ.
ಇನ್ನು ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಹೋಗಿದ್ದು ಟ್ರೆಂಡ್ ಸೃಷ್ಟಿಸಿಕೊಳ್ಳಲು. ಕೋರ್ಟ್ ಎಲ್ಲಾ ನೋಡುತ್ತದೆ. ನಿಯಮ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಸುಪ್ರೀಂ ಕೋರ್ಟ್ನಿಂದಲೂ ಸರ್ಕಾರದ ನಿಯಮಾವಳಿಯಂತೆಯೇ ಬರ ಪರಿಹಾರ ಕೊಡಲು ಆದೇಶ ಆಗುತ್ತದೆ ಎಂದು ಅಣ್ಣಾಮಲೈ ತಿಳಿಸಿದರು.