Asianet Suvarna News Asianet Suvarna News

ಜಂಟಿ ಎಂಡಿ ರಾಜೀನಾಮೆ ಬೆನ್ನಲ್ಲೇ ಕುಸಿದ ಕೋಟಕ್ ಮಹೀಂದ್ರ ಬ್ಯಾಂಕ್ ಷೇರು ಮೌಲ್ಯ; ಹೂಡಿಕೆದಾರರು ಈಗೇನು ಮಾಡ್ಬೇಕು?

ಕೋಟಕ್ ಮಹೀಂದ್ರ ಬ್ಯಾಂಕ್ ಜಂಟಿ ಎಂಡಿ ಕೆವಿಎಸ್ ಮಣಿಯನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಇಂಥ ಸಮಯದಲ್ಲಿ ಹೂಡಿಕೆದಾರರು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ. 
 

Kotak Mahindra Bank Shares Fall As Joint MD KVS Manian Resigns What Should Investors Do anu
Author
First Published May 2, 2024, 4:02 PM IST

ನವದೆಹಲಿ (ಮೇ 2): ಕೋಟಕ್ ಮಹೀಂದ್ರ ಬ್ಯಾಂಕ್ ಜಂಟಿ ಎಂಡಿ ಕೆವಿಎಸ್ ಮಣಿಯನ್ ಮಂಗಳವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು (ಮೇ 2) ಈ ಬ್ಯಾಂಕಿನ ಷೇರುಗಳು ಕುಸಿತ ಕಂಡಿವೆ. ಬುಧವಾರ ಷೇರು ಮಾರುಕಟ್ಟೆಯಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಶೇ.2.1ರಷ್ಟು ಕೆಳ ಮಟ್ಟದಲ್ಲಿ ದಿನದ ಆರಂಭ ಮಾಡಿವೆ. ಮಣಿಯನ್ ರಾಜೀನಾಮೆಯನ್ನು ಕೋಟಕ್ ಮಹೀಂದ್ರ ಬ್ಯಾಂಕಿನ ಆಡಳಿತ ಮಂಡಳಿ ಸ್ವೀಕರಿಸಿದೆ. ಈ ಬಗ್ಗೆ ಸ್ಟಾಕ್ ಎಕ್ಸ್ ಚೇಂಜ್ ಗೆ ಸಲ್ಲಿಕೆ ಮಾಡಿದ ಫೈಲ್ಲಿಂಗ್ ನಲ್ಲಿ ಬ್ಯಾಂಕ್ ಮಾಹಿತಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಆನ್ ಲೈನ್ ನಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸದಂತೆ ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿತ್ತು. ಕಳೆದ ಐದು ದಿನಗಳಿಂದ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳು ಶೇ.11ರಷ್ಟು ಕೆಳ ಮಟ್ಟದಲ್ಲಿ ಟ್ರೇಡ್ ಆಗುತ್ತಿವೆ. ಪ್ರೀ -ಒಪನ್ ಟ್ರೇಡ್ ನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳು ಬಿಎಸ್ ಇಯಲ್ಲಿ ಶೇ.0.79ರಷ್ಟು ಕಡಿಮೆ ಅಂದ್ರೆ 1,611ರೂ. ನಲ್ಲಿ ಟ್ರೇಡ್ ಆಗುತ್ತಿವೆ.

ಆನ್ ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಾನೆಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆ ಸ್ಥಗಿತಗೊಳಿಸುವಂತೆ ಆರ್ ಬಿಐ ಕೋಟಕ್ ಮಹೀಂದ್ರ ಬ್ಯಾಂಕಿಗೆ ಏ.24ರಂದು ನಿರ್ದೇಶನ ನೀಡಿತ್ತು. ಅಲ್ಲದೆ, ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡದಂತೆಯೂ ನಿರ್ಬಂಧ ವಿಧಿಸಿತ್ತು. ಆದರೆ, ಈಗಾಗಲೇ ಇರುವ ಗ್ರಾಹಕರಿಗೆ ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಸೇವೆ ಮುಂದುವರಿಸುವಂತೆ ನಿರ್ದೇಶನ ನೀಡಿತ್ತು.2022 ಹಾಗೂ 2023ರಲ್ಲಿ ಕೇಂದ್ರ ಬ್ಯಾಂಕ್ ನಡೆಸಿದ ಐಟಿ ಪರಿಶೀಲನೆ ಸಂದರ್ಭದಲ್ಲಿ ಬ್ಯಾಂಕ್ ವಿರುದ್ಧ ಒಂದಿಷ್ಟು ಕಳವಳಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. 

ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ

ಹೂಡಿಕೆದಾರರು ಈಗ ಏನ್ ಮಾಡ್ಬೇಕು?
ಬ್ರೋಕರೇಜ್ ಸಂಸ್ಥೆ ಜಫ್ಪೆರೀಸ್ ಷೇರಿನ ಮೇಲಿನ ತನ್ನ ಹಿಡಿತವನ್ನು ಹಾಗೆಯೇ ಹಿಡಿದಿಟ್ಟುಕೊಂಡಿದ್ದು, ಪ್ರತಿ ಷೇರಿಗೆ 1,970ರೂ. ಬೆಲೆ ಗುರಿ ನಿಗದಿಪಡಿಸಿದೆ. ಕೋಟಕ್ ಮಹೀಂದ್ರ ಬ್ಯಾಂಕಿನಿಂದ ಇನ್ನಷ್ಟು ಮಂದಿ ಉನ್ನತ ಮಟ್ಟದ ಅಧಿಕಾರಿಗಳು ಹೊರಹೋಗುವ ನಿರೀಕ್ಷೆಯಿದೆ ಎಂದು ಜಫ್ಫೆರೀಸ್ ತಿಳಿಸಿದೆ. ಅಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳ ನಿರ್ಗಮನ ಬ್ಯಾಂಕಿನ ಬೆಳವಣಿಗೆ ಹಾಗೂ ಮೌಲ್ಯದ ನಿರ್ಧರಣೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಆರ್ ಬಿಐ ಕ್ರಮದಿಂದ ಕೋಟಕ್ ಮಹೀಂದ್ರ ಬ್ಯಾಂಕಿನ ಜನಪ್ರಿಯತೆ ಮೇಲೆ ಕೂಡ ಪರಿಣಾಮ ಬೀರಲಿದೆ. ಆರ್ ಬಿಐ ಪತ್ರಿಕಾ ಪ್ರಕಟಣೆಯ ಬಳಿಕ ಈ ಪ್ರಕರಣಕ್ಕೆ ಪರಿಹಾರ ಸಿಗುವ ನಿರೀಕ್ಷೆಯನ್ನು ಬ್ಯಾಂಕ್ ಹೊಂದಿದ್ದು, ಆ ನಿಟ್ಟಿನಲ್ಲಿ ಕಾಯುತ್ತಿದೆ ಎಂದು ನೋಮೌರ ಇಂಡಿಯಾ ಎಂಬ ಬ್ರೋಕರೇಜ್ ಸಂಸ್ಥೆ ತಿಳಿಸಿದೆ. 

ಹಣಕಾಸು ವಲಯದಲ್ಲಿ ಇತರ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿರೋದಾಗಿ ಮಣಿಯನ್ ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 
'ನನ್ನ ವೃತ್ತಿಜೀವನದಲ್ಲಿ ಕಂಪನಿಯಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ.  ಅತ್ಯಂತ ಜಾಣತನದ ಮನಸ್ಥಿತಿಗಳನ್ನು ಹಾಗೂ ಸಾಮಾನ್ಯ ಸಂಗತಿಗಳಿಗಿಂತ ಭಿನ್ನವಾಗಿರೋದನ್ನು ಸಾಧಿಸುವ ಕೌಶಲ್ಯ ಹೊಂದಿರುವ ಸಹೋದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ' ಎಂದು ಮಣಿಯನ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಎಫ್ ಡಿ ಬಡ್ಡಿದರದಲ್ಲಿ ಬದಲಾವಣೆ;ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳಲ್ಲಿ ಎಷ್ಟಿದೆ?

ನೌವಮ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರು ಮೌಲ್ಯವನ್ನು ತಗ್ಗಿಸಿದೆ. ಈ ಹಿಂದಿನ 2,095 ರೂ.ನಿಂದ 1,530ರೂ.ಗೆ ತಗ್ಗಿಸಿದೆ. ಇತ್ತೀಚಿನ ಈ ಬೆಳವಣಿಗೆ ಮುಂದಿನ 12-18 ತಿಂಗಳ ಅವಧಿಯಲ್ಲಿ ಬ್ಯಾಂಕಿನ ಬೆಳವಣಿಗೆ ಹಾಗೂ ಲಾಭಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. 


Kotak Mahindra Bank Joint MD KVS Manian Resigns 

Follow Us:
Download App:
  • android
  • ios