Asianet Suvarna News Asianet Suvarna News

ಗುಡ್ ಬೈ 2019: ದೇಶದ ವ್ಯಾಪಾರ ಕ್ಷೇತ್ರ, ಹಣದಾಟದ ಕುರುಕ್ಷೇತ್ರ!

2019 ಮುಗಿದು 2020ರ ಕಾಲಘಟಕ್ಕೆ ಕಾಲಿಡುತ್ತಿರುವ ಭಾರತ| ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆ| 2020ನ್ನು ಸ್ವಾಗತಿಸಲು ಸಜ್ಜಾದ ಯುವ ಭಾರತ| ದೇಶಾದ್ಯಂತ ಕಂಡುಬರುತ್ತಿರುವ ಹೊಸ ವರುಷದ ಹುರುಪು| 2019ರ ಘಟನಾವಳಿಗಳ ಹಿನ್ನೋಟದತ್ತ ದೃಷ್ಟಿ ಹರಿಸುವುದು ಅನಿವಾರ್ಯ|2019ರಲ್ಲಿ ಅರ್ಥ ವ್ಯವಸ್ಥೆಯ ಕುರಿತು ದೇಶದಲ್ಲಿ ಸಾಕಷ್ಟು ಚರ್ಚೆ| ಡೋಲಾಯಮಾನದಲ್ಲಿ ದೇಶದ ಆರ್ಥಿಕ ನೀತಿ| ಆಭರಣ ಪ್ರಿಯರಿಗೆ ಸಿಹಿಯಾಗದ ಚಿನ್ನ ಬೆಳ್ಳಿ ಬೆಲೆ| ಪೆಟ್ರೋಲ್, ಡೀಸೆಲ್ ಬೆಲೆಗಳ ಹಾವು-ಏಣಿ ಆಟ| ವ್ಯಾಪಾರ ಕ್ಷೇತ್ರದ ಉತ್ತುಂಗದಲ್ಲಿ ಮುಖೇಶ್ ಅಂಬಾನಿ| ದಿವಾಳಿಯಾದ ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ| ಅಮೆರಿಕ-ಚೀನಾ ನಡುವಿನ ವಾಣಜ್ಯ ಯುದ್ಧ ಅಂತ್ಯ| 2019ರಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ|

Good Bye 2019 Important Happenings In India Commerce Sector
Author
Bengaluru, First Published Dec 31, 2019, 12:51 PM IST

ಬೆಂಗಳೂರು(ಡಿ.31): 2019 ಮುಗಿದು 2020ರ ಕಾಲಘಟಕ್ಕೆ ಭಾರತ ಕಾಲಿಡುತ್ತಿದೆ. ಈ ಮೂಲಕ ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಗೊಂಡಿದೆ.

2020ನ್ನು ಸ್ವಾಗತಿಸಲು ಯುವ ಭಾರತ ಸಜ್ಜಾಗಿದ್ದು, ಹೊಸ ವರ್ಷದ ಹುರುಪು ದೇಶಾದ್ಯಂತ ಕಂಡುಬರುತ್ತಿದೆ. ಹೊಸ ವರ್ಷ ಹೊಸ ಹುಮ್ಮಸ್ಸಿನಿಂದಿಗೆ ನಮ್ಮೆಲ್ಲರ ಮನೆಯ ಕದ ತಟ್ಟುತ್ತಿದೆ.

ಅದರಂತೆ 2019ರ ಘಟನಾವಳಿಗಳ ಹಿನ್ನೋಟ ಕೂಡ ಅಷ್ಟೇ ಪ್ರಮುಖವಾಗಿದ್ದು, ಅಂತ್ಯ ಕಂಡ 2019ರಲ್ಲಿ ನಡೆದ ಸಿಹಿ-ಕಹಿ ಘಟನೆಗಳತ್ತ ಭಾರತ ದೃಷ್ಟಿ ಹರಿಸುವುದು ಅವಶ್ಯ.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ 2019ರಲ್ಲಿ ಅನೇಕ ಸಿಹಿ-ಕಹಿ ಘಟನೆಗಳು ಸಂಭವಿಸಿವೆ. ಅದರಲ್ಲೂ ಅರ್ಥ ವ್ಯವಸ್ಥೆಯ ಕುರಿತು ದೇಶದಲ್ಲಿ ಸಾಕಷ್ಟು ಚರ್ಚೆಯಾಗಿದೆ.

ಅರ್ಥ ವ್ಯವ್ಯಸ್ಥೆ ಸದ್ಯ ಹಿಮ್ಮುಖವಾಗಿ ಚಲಿಸುತ್ತಿದ್ದು, ಇದರ ಸುಧಾರಣೆ ಹಾಗೂ ಸುಭದ್ರ ಆರ್ಥಿಕ ವ್ಯವಸ್ಥೆಯತ್ತ ಹೆಜ್ಜೆ ಇಡಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ.

ಇನ್ನು ದೇಶದ ವ್ಯಾಪಾರ ಕ್ಷೇತ್ರದಲ್ಲಿ ಅನೇಕ ಮಹತ್ತರವಾದ ಬದಲಾವಣೆಗಳಾಗಿದ್ದು, ದೇಶದ ಪ್ರಮುಖ ಉದ್ಯಮಿಗಳಲ್ಲಿ ಹಲವರಿಗೆ 2019 ಸಿಹಿಯಾಗಿದ್ದರೆ ಮತ್ತೆ ಕೆಲವರಿಗೆ ಕಹಿಯಾಗಿ ಪರಿಣಮಿಸಿದ್ದು ನಮ್ಮೆಲ್ಲರ ಎದುರಿಗಿದೆ.

ಹೀಗೆ 2019ರಲ್ಲಿ ದೇಶದ ಆರ್ಥಿಕ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಕುರಿತು ದೃಷ್ಟಿ ಹರಿಸಿದರೆ...

ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

ಡೋಲಾಯಮಾನದಲ್ಲಿ ಅರ್ಥ ವ್ಯವಸ್ಥೆ:

5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಗಮನಹರಿಸಿರುವ ಮೋದಿ ಸರ್ಕಾರ, ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದೇಶದ ಅರ್ಥ ವ್ಯವಸ್ಥೆ ಕೂಡ ಕೊಂಚ ಹಳಿ ತಪ್ಪಿದ್ದು ಸುಳ್ಳಲ್ಲ.

ಪ್ರಮುಖವಾಗಿ ದೇಶದ ಉತ್ಪಾದನಾ ಕ್ಷೇತ್ರಗಳು ಹಿನ್ನಡೆ ಅನುಭವಿಸಿದ್ದು, ಉತ್ಪಾದನೆ ಕುಠಿತದ ಜೊತೆಗೆ ಉದ್ಯೋಗ ಕಡಿತದ ಕಹಿಯನ್ನೂ ಅನುಭವಿಸುವಂತಾಗಿದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಕಾಣದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಉತ್ಪಾದನಾ ವಲಯದ ಅಭಿವೃದ್ಧಿ ದರ ಕೂಡ 15 ತಿಂಗಳ ಹಿಂದಿನ ದರಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಆದಾಯ ಸಂಗ್ರಹದಲ್ಲಿ ಕಂಡುಬಂದಿರುವ ನಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ಕಾರ್ಯಾಲಯ ಆತಂಕ ವ್ಯಕ್ತಪಡಿಸಿರುವುದು ಇದೀಗ ಇತಿಹಾಸ.

ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಜಿಎಸ್'ಟಿ ಸಂಗ್ರಹ ಗುರಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, 7.6 ಲಕ್ಷ ಕೋಟಿ ರೂ.ದಿಂದ 6.63 ಲಕ್ಷ ಕೋಟಿ ರೂ.ಗೆ ಇಳಿಕೆ ಮಾಡಿದೆ.

ಜಾಗತಿಕ ಆರ್ಥಿಕ ಹಿಂಜರಿಕೆ, ಅಮೆರಿಕ-ಚೀನಾ ವಾಣಿಜ್ಯ ಯುದ್ಧ ಹೀಗೆ ಅರ್ಥ ವ್ಯವಸ್ಥೆಯ ಮೇಲೆ ಕವಿದಿದ್ದ ಎಲ್ಲಾ ಕಾರ್ಮೋಡಗಳೂ ಒಂದೊಂದಾಗಿ ಸರಿಯತೊಡಗಿದ್ದು, ಜಾಗತಿಕ ಸಂವೇದನೆ ಹಾಗೂ ಜಾಗತಿಕ ಸಹಕಾರ ಆರ್ಥಿಕ ಕುಸಿತದಿಂದ ಹೊರಬರುವ ಮಾರ್ಗ ಎಂದು ಭಾರತ ವಿಶ್ವ ವೇದಿಕೆಗಳಲ್ಲಿ ಪ್ರತಿಪಾದಿಸಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಆಭರಣ ಪ್ರಿಯರಿಗೆ ಸಿಹಿಯಾಗದ ಚಿನ್ನ ಬೆಳ್ಳಿ ಬೆಲೆ:

ಹೇಳಿ ಕೇಳಿ ಭಾರತ ಆಭರಣ ಪ್ರಿಯರ ನಾಡು. ಲಿಂಗಬೇಧವಿಲ್ಲದೇ ಆಭರಣಗಳನ್ನು ತೊಟ್ಟು ಸಂಭ್ರಮಿಸುವವರ ನಾಡು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ನಕಾರಾತ್ಮಕ ಬೆಳವಣಿಗೆಗಳ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಯ ಬೆಲೆ ಗಗನಕ್ಕೇರಿವೆ.

2019ರ ಮಧ್ಯದಲ್ಲಿ ಚಿನ್ನದ ದರ 10 ಗ್ರಾಂಗೆ 40 ಸಾವಿರ ರೂ, ಗಡಿ ದಾಟಿ ಆಭರಣ ಪ್ರಿಯರ ನಗುವನ್ನೇ ಕಸಿದಿತ್ತು. ಅಲ್ಲದೇ ಬೆಳ್ಳಿ ಬೆಲೆ ಕೂಡ 45 ಸಾವಿರ ಗಡಿ ಮೀರಿ ಮಾರಾಟವಾಗಿದ್ದು ಇದೀಗ ಇತಿಹಾಸ.

ಆದರೆ 2019ರ ಅಂತ್ಯದ ವೇಳೆಗೆ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಭರವಸೆ ಕಾಣುತ್ತಿದೆ.

ಕಚ್ಚಾ ತೈಲ ದರ ಇಳಿಕೆ: ಪೆಟ್ರೋಲ್‌, ಡೀಸೆಲ್‌ ದರವೂ ಶೀಘ್ರ ಇಳಿಕೆ!

ಪೆಟ್ರೋಲ್, ಡೀಸೆಲ್ ಬೆಲೆಗಳ ಹಾವು-ಏಣಿ ಆಟ:

ಲೀಟರ್‌ಗೆ 90 ರೂ. ಗಡಿ ದಾಟಿದ್ದ ಪೆಟ್ರೋಲ್ ಹಾಗೂ ಲೀಟರ್‌ಗೆ 80 ರೂ. ಆಸುಪಾಸಿನಲ್ಲಿದ್ದ ಡೀಸೆಲ್ ಬೆಲೆಗಳನ್ನು ಕಂಡು ದೇಶದ ನಾಗರಿಕ ದಂಗಾಗಿ ಹೋಗಿದ್ದ. ನಿತ್ಯವೂ ಬೆಲೆಗಳಲ್ಲಿ ಆಗುತ್ತಿದ್ದ ವ್ಯತ್ಯಾಸ ಕಂಡು ವಾಃನ ಸವಾರರು ರೋಸಿ ಹೋಗಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿನ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇವೆಲ್ಲವೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಏರುವಂತೆ ಮಾಡಿದ್ದವು.

ಸದ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ನಿಯಂತ್ರಣಕ್ಕೆ ಬಂದಿರುವುದು ನಿಜವಾದರೂ, ದೇಶದ ವಾಹನ ಸವಾರರು ಮತ್ತಷ್ಟು ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ.

ಎಲ್ಲ ಮುಗಿದ ಮೇಲೆ: ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ಅಂಬಾನಿ ರಾಜೀನಾಮೆ!

ಮುಳಗಿದ ಅನಿಲ್ ಅಂಬಾನಿ:

ಇನ್ನು ದೇಶದ ಪ್ರಮುಖ ವ್ಯಾಪಾರಿ ಕುಟುಂಬ ಅಂಬಾನಿ ಮನೆಯ ಸದಸ್ಯರೊಬ್ಬರಿಗೆ 2019 ಕಹಿಯಾಗಿತ್ತು. ತಮ್ಮ ಇಡೀ ವ್ಯಾಪಾರವನ್ನೇ ಅನಿಲ್ ಅಂಬಾನನಿ ಕಳೆದುಕೊಂಡಿದ್ದಾರೆ.

ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಅನಿಲ್ ಅಂಬಾನಿ ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರತ್ತ ನೋಡುತ್ತಿದ್ದಾರೆ.

ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ಸ್, ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 30,142 ಕೋಟಿ ರೂ. ನಷ್ಟ ಅನುಭವಿಸಿದೆ.

ಅಬ್ಬಬ್ಬಾ ಅಂಬಾನಿ: ಇಲ್ಲಿದೆ ಆಸ್ತಿ ಏರಿಕೆಯ ಅಸಲಿ ಕಹಾನಿ!

ವ್ಯಾಪಾರ ಕ್ಷೇತ್ರದ ಉತ್ತುಂಗದಲ್ಲಿ ಮುಖೇಶ್ ಅಂಬಾನಿ:

ಇದಕ್ಕೆ ವಿರುದ್ಧವಾಗಿ ಮುಖೇಶ್ ಅಂಬಾನಿ ಭಾರತದ ವ್ಯಾಪಾರ ಕ್ಷೇತ್ರದ ಉತ್ತುಂಗವನ್ನು ತಲುಪಿದ್ದಾರೆ. ನಿರಂತರವಾಗಿ ಷೇರು ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಟ್ಟು ಮಾರುಕಟ್ಟೆಮೌಲ್ಯ 10 ಲಕ್ಷ ಕೋಟಿ ರು. ಗಡಿ ದಾಟಿದೆ.

ಈ ಸಾಧನೆ ಮಾಡಿದ ದೇಶದ ಮೊದಲ ಕಂಪನಿ ಎಂಬ ಹಿರಿಮೆಗೆ ರಿಲಯನ್ಸ್‌ ಪಾತ್ರವಾಗಿದ್ದು, ಮುಖೇಶ್ ಅಂಬಾನಿ ಸದ್ಯ ಒಟ್ಟು 61 ಬಿಲಿಯನ್ ಡಾಲರ್ ಆಸ್ತಿಯ ಒಡೆಯರಾಗಿದ್ದಾರೆ.

ಟಾಟಾಗೆ ಹಿನ್ನೆಡೆ: ಕಂಪನಿ ಜವಾಬ್ದಾರಿ ಸೈರಸ್ ಮಿಸ್ತ್ರಿ ಹೆಗಲಿಗೆ!

ಸೈರಸ್ ಮಿಸ್ತ್ರಿ ಹೆಗಲಿಗೆ ಟಾಟಾ:

ರಾಷ್ಟ್ರೀಯ  ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್'ಎಟಿ ) ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್' ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪಿಸಲು ಆದೇಶಿಸಿದೆ. ಈ ಮೂಲಕ ಮಿಸ್ತ್ರಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!

ಈರುಳ್ಳಿ ಬೆಲೆ ಏರಿಕೆ:

ಅಗತ್ಯ ವಸ್ತುಗಳ ಬೆಲೆ ಏರಿಕೆ ಎಂಬುದು ಭಾರತದಲ್ಲಿ ಸಮಾನ್ಯ ಸಂಗತಿ. ಯಾವುದೇ ಪಕ್ಷದ ಸರ್ಕಾರ ಇದ್ದರೂ ಅಗತ್ಯ ವಸ್ತುಗಳ ಬೆಲೆಗಳು ಗಗನ ತಲುಪುವುದು ಶತಸಸಿದ್ಧ.

ಅದರಂತೆ 2019ರಲ್ಲಿ ಈರುಳ್ಳಿ ಬೆಲೆ ಕೂಡ ಗಗನಕ್ಕೇರಿದ್ದು ಕೆಜಿ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದ್ದರಿಂದ ಗ್ರಾಹರಕರು ಕಂಗಾಲಾಗಿದ್ದರು. ಸದ್ಯ ಈರುಳ್ಳಿ ಬೆಲೆ ಕೆಜಿಗೆ 140 ರೂ. ಆಸುಪಾಸಿನಲ್ಲಿದ್ದು, ಈರುಳ್ಳಿಯ ಬೆಲೆ ಕಂಡು ದೇಶದ ಬಹುತೇಕ ಅಡುಗೆ ಮನೆಗಳು ಅಳುತ್ತಿವೆ.

ಶತಮಾನದ ಮಿಲನ: ಜಗತ್ತಿಗೆ ಕೇಳಿಸಿದ ಅಮೆರಿಕ-ಚೀನಾ ಹೊಸ ಘೋಷಣೆ!

ಮುಗಿದ ಅಮೆರಿಕ-ಚೀನಾ ವಾಣಿಜ್ಯ ಯುದ್ಧ:

ವಾಣಿಜ್ಯ ಸಮರದಲ್ಲಿ ನಿರತವಾಗಿರುವ ಅಮೆರಿಕ-ಚೀನಾ, ಇದೀಗ ಹಗೆತನ ಮರೆತು ಒಂದಾಗಿ ವ್ಯಾಪಾರ ಮಾಡುವ ನಿರ್ಧಾರಕ್ಕೆ ಬಂದಿವೆ. ಅಮೆರಿಕದಿಂದ ಆಮದು ಹೆಚ್ಚಳಕ್ಕೆ ಸಮ್ಮತಿಸಿರುವ ಚೀನಾ, ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಘೋಷಿಸಿದೆ.

ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!

ಇನ್ಫೋಸಿಸ್ ಆಂತರಿಕ ಕಚ್ಚಾಟ:

ಇನ್ಫೋಸಿಸ್ ಸಿಇಒ ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ, ಸಂಸ್ಥೆಯ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಸಂಸ್ಥೆಯ ಆರ್ಥಿಕ ಚಟುವಟಿಕೆ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ ಎಂದು ಉದ್ಯೋಗಿಯೊಬ್ಬರು ಪತ್ರ ಮುಖೇನ ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಯ ಷೇರುಗಳು ಬರೊಬ್ಬರಿ ಶೇ.16ರಷ್ಟು ಕುಸಿತ ಕಂಡಿದ್ದುಸ್ಕಳೆದ 6 ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟದ ಕುಸಿತ ದಾಖಲಿಸಿದೆ.

ಇದಿಷ್ಟೇ ಅಲ್ಲದೇ ಜಾಗತಿಕ ವಾಣಿಜ್ಯ ಕ್ಷೇತ್ರದಲ್ಲೂ ಕೂಡ ಹಲವು ಬದಲಾವಣೆಗಳಾಗಿದ್ದು, ಪ್ರಮುಖವಾಗಿ ಅಲಿಬಾಬಾ ಮಖ್ಯಸ್ಥ ಸ್ಥಾನಕ್ಕೆ ಜಾಕ್ ಮಾ ರಾಜೀನಾಮೆ ನೀಡಿದ್ದಾರೆ.

ಅಲಿಬಾಬಾ ಅಧ್ಯಕ್ಷ ಸ್ಥಾನದಿಂದ ಇಂದು ಜಾಕ್‌ ಮಾ ನಿವೃತ್ತಿ

ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ತಮ್ಮ ಅರ್ಧದಷ್ಟು ಆಸ್ತಿಯನ್ನು ಪರಿಹಾರವಾಗಿ ನೀಡಿದ್ದಾರೆ.

OMG! 2 ಗಂಟೆಯಲ್ಲಿ ಜೂಕರ್​ಬರ್ಗ್ ಕಳೆದುಕೊಂಡಿದ್ದೇಷ್ಟು?

ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜುಕರ್'ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಹಾವು-ಏಣಿ ಆಟವನ್ನು ಮುಂದುವರೆಸಿದ್ದಾರೆ.

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios