
ಕೊಲಂಬೋ (ಜು.18): ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ದಿವಾಳಿತನದ ಬಳಿಕ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸರ್ಕಾರ ಪತನಕ್ಕೆ ಕಾರಣವಾದ ಬೃಹತ್ ಜನಾಂದೋಲನ ಭಾನುವಾರಕ್ಕೆ 100 ದಿನ ಪೂರೈಸಿದೆ. ಆದರೆ, ಸರ್ಕಾರ ಪತನಗೊಂಡಿದ್ದರೂ, ಇಡೀ ವ್ಯವಸ್ಥೆಯ ಬದಲಾವಣೆಗೆ ಪಟ್ಟು ಹಿಡಿದಿರುವ ಹೋರಾಟಗಾರರು, ತಮ್ಮ ಹೋರಾಟವನ್ನು ಮುಂದುವರೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶವನ್ನು ದಯನೀಯ ಸ್ಥಿತಿಗೆ ಇಳಿಸಿದ ಭ್ರಷ್ಟ ಸರ್ಕಾರ ಇಳಿಸಲು ಸಲುವಾಗಿ ಏ.9ರಂದು ಅಧ್ಯಕ್ಷರ ಮನೆ ನಿವಾಸದಲ್ಲಿ ಈ ಹೋರಾಟ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜಪಕ್ಸೆ ವಿದೇಶಕ್ಕೆ ಪರಾರಿಯಾಗಿ ರಾಜೀನಾಮೆ ಕೂಡ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಹೋರಾಟಗಾರ ಫಾ.ಜೀವಂಥ ಪೆರಿಸ್, ‘ಇದು ಸ್ವಾತಂತ್ರ್ಯದ ಹೋರಾಟ. ನಾವು ಈ ಜನಶಕ್ತಿಯ ಮೂಲಕ ಸರ್ವಾಧಿಕಾರಿ ಅಧ್ಯಕ್ಷರನ್ನು ಮನೆಗೆ ಕಳುಹಿಸಿದ್ದೇವೆ. ಆದರೆ ಇಷ್ಟಕ್ಕೆ ನಮ್ಮ ಹೋರಾಟ ನಿಲ್ಲದು. ಇಡೀ ವ್ಯವಸ್ಥೆಯಲ್ಲಿ ಪೂರ್ಣ ಬದಲಾವಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಅಧ್ಯಕ್ಷರ ಹುದ್ದೆಯನ್ನೇ ರದ್ದು ಮಾಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ, ಜೊತೆಗೆ ಹಲವು ಬೇಡಿಕೆ ಈಡೇರಬೇಕು ಎಂದು ಹೇಳಿದ್ದಾರೆ.
ಲಂಕಾದಲ್ಲಿ ಪೆಟ್ರೋಲ್ ವಿತರಣೆಗೆ ಇನ್ನು ಮಾಸಿಕ ಪಾಸ್!
ತೀವ್ರ ತೈಲ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಸರ್ಕಾರ, ದೇಶದ ಜನರಿಗೆ ಸೂಕ್ತ ಮತ್ತು ನ್ಯಾಯ ಸಮ್ಮತ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮಾಡಲು ಮಾಸಿಕ ಪಾಸ್ ವಿತರಣೆ ಮಾಡಲು ತೀರ್ಮಾನ ತೆಗೆದುಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಲಂಕಾದ ಇಂಧನ ಸಚಿವ ಕಾಂಚನ ವಿಜೆಶೇಖರ, ಸರ್ಕಾರ ನಿಗದಿಪಡಿಸಿದ ವೆಬ್ಸೈಟ್ನಲ್ಲಿ ಅರ್ಹರು ತಮ್ಮ ಮಾಹಿತಿ ದಾಖಲಿಸುವ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು. ಹೀಗೆ ನೊಂದಾಯಿಸಿಕೊಂಡವರಿಗೆ ವಾರಕ್ಕೊಮ್ಮೆ ನಿಗದಿತ ಪ್ರಮಾಣದಲ್ಲಿ ತೈಲ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಲಂಕಾ ರಾಷ್ಟ್ರಪತಿ ಭವನದಲ್ಲಿ ಗದ್ದಲದ ನಡುವೆ ಯುವತಿಯ ಗ್ಲಾಮರಸ್ ಫೋಟೋಶೂಟ್,
ವಿದೇಶಿ ವಿನಿಮಯ ಪೂರ್ಣ ಖಾಲಿಯಾಗಿರುವ ಕಾರಣ, ಶ್ರೀಲಂಕಾ ಸರ್ಕಾರ ವಿದೇಶಗಳಿಂದ ತೈಲ ಆಮದು ಮಾಡಿಕೊಳ್ಳಲಾಗದ ಸ್ಥಿತಿ ತಲುಪಿದೆ. ಹೀಗಾಗಿ ಬಂಕ್ಗಳಲ್ಲಿ ತೈಲ ಖರೀದಿಸಲು 3-6 ದಿನಗಳ ಕಾಲ ಸರದಿ ನಿಲ್ಲಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಈಗಾಗಲೇ ಅಗತ್ಯ ಸೇವೆಗಳನ್ನು ಹೊರತುಪಡಿಸಿದ ಉಳಿದ ವಾಹನಗಳಿಗೆ ತೈಲ ವಿತರಣೆ ಸ್ಥಗಿತಗೊಳಿಸಲಾಗಿದೆ.
Sri Lanka Presidential Election; ಲಂಕಾ ನೂತನ ಅಧ್ಯಕ್ಷ ಹುದ್ದೆಗೆ ಸಾಲಲ್ಲಿ ನಿಂತ ನಾಯಕರು!
ಲಂಕಾ ಸಮಸ್ಯೆ ಬಗ್ಗೆ ಚರ್ಚೆಗೆ ಭಾರತ ನಾಳೆ ಸರ್ವಪಕ್ಷ ಸಭೆ ನಿಗದಿ: ಶ್ರೀಲಂಕಾ ಬಿಕ್ಕಟ್ಟಿನ ಕುರಿತು ಚರ್ಚಿಸಲು ಭಾರತ ಸರ್ಕಾರ, ಮಂಗಳವಾರ ಸರ್ವಪಕ್ಷಗಳ ಸಭೆ ಆಯೋಜಿಸಿದೆ. ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸರ್ವಪಕ್ಷ ಸಭೆಯಲ್ಲಿ ಲಂಕಾ ವಿಷಯ ಪ್ರಸ್ತಾಪಿಸಿದ ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು, ನೆರೆಯ ಶ್ರೀಲಂಕಾ ತೀವ್ರವಾದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅಲ್ಲಿ ಸಾಕಷ್ಟುಸಂಖ್ಯೆಯಲ್ಲಿರುವ ತಮಿಳು ಸಮುದಾಯದ ಹಿತದೃಷ್ಟಿಯಿಂದ, ಈ ವಿಷಯದಲ್ಲಿ ಭಾರತದ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇಡಬೇಕಾದ ಮುಂದಿನ ಹೆಜ್ಜೆಗಳ ಬಗ್ಗೆ ಸಮಾಲೋಚಿಸಲು ಸರ್ವಪಕ್ಷ ಸಭೆ ಆಯೋಜನೆಗೆ ಸರ್ಕಾರ ಸಮ್ಮತಿಸಿತು. ಸಭೆಯಲ್ಲಿ ಲಂಕಾ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್ ಮತ್ತು ಪ್ರಹ್ಲಾದ್ ಜೋಶಿ ಅವರು ಸಭೆಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ