
ಭಾರತೀಯ ಉದ್ಯೋಗಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಂಗಾಪುರದ ಉದ್ಯೋಗದಾತೆಯೊಬ್ಬಳು ಎರಡೇ ದಿನದಲ್ಲಿ ಹಠಾತ್ ಸಾವನ್ನಪ್ಪಿದ್ದು, ಆಕೆಯ ಸಾವಿನ ಬಗ್ಗೆ ಭಾರಿ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ತನ್ನ ಭಾರತೀಯ ಮೂಲದ ಉದ್ಯೋಗಿಯೊಬ್ಬ ಹಣಕ್ಕಾಗಿ ಹೇಗೆ ನಾಟಕವಾಡಿದ್ದ ಎಂಬುದನ್ನು ಆಕೆ ಪೋಸ್ಟ್ ಮಾಡಿಕೊಂಡಿದ್ದಳು. ಇದಾಗಿ ಕೇವಲ ಎರಡೇ ದಿನದಲ್ಲಿ ಆಕೆಯೇ ಸಾವಿಗೀಡಾಗಿದ್ದಾಳೆ.
ಸಲಾಡ್ ಶಾಪ್ ನಡೆಸುತ್ತಿದ್ದ ಜೇನ್ ಲೀ
ಸಿಂಗಾಪುರದ ಸಲಾಡ್ ಶಾಪೊಂದರ ಉದ್ಯೋಗಿಯಾಗಿದ್ದ ಜೇನ್ ಲೀ ಜುಲೈ 19ರಂದು ಸಾವನ್ನಪ್ಪಿದ್ದಾಳೆ. ಸಾವಿಗೆ ಎರಡು ದಿನಕ್ಕೂ ಮೊದಲು ಆಕೆ ಫೇಸ್ಬುಕ್ನಲ್ಲಿ ತನ್ನ ಭಾರತೀಯ ಉದ್ಯೋಗಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಪರಿಹಾರ ಹಣಕ್ಕಾಗಿ ಆತ ತನಗೆ ಗಾಯವಾಗಿದೆ ಎಂದು ನಕಲಿ ಗಾಯವನ್ನು ತೋರಿಸಿದ್ದ ಎಂದು ಆಕೆ ದೂರಿದ್ದಳು. ಆದರೆ ಈಗ ಆಕೆಯೇ ಸಾವನ್ನಪ್ಪಿದ್ದಾಳೆ.
ಜೇನ್ ಲೀ ಹಠಾತ್ ಸಾವು
ಅಲ್ಲಿನ ಚಾನೆಲ್ ನ್ಯೂಸ್ ಏಷ್ಯಾದ ವರದಿಯ ಪ್ರಕಾರ , ಲೀ ಅವರ ಸಾವಿಗೆ ಕಾರಣ ಏನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ,ಸಿಂಗಾಪುರ ಪೊಲೀಸ್ ಪಡೆ (SPF) ಅವರ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ಶುರು ಮಾಡಿದೆ. ಜೇನ್ ಲೀ ಸಿಂಗಾಪುರದ ಹಾಲೆಂಡ್ ವಿಲೇಜ್ನಲ್ಲಿರುವ ಸುಮೋ ಸಲಾಡ್ ಎಂಬ ಉಪಾಹಾರ ಗೃಹದ ಮಾಲಕಿಯಾಗಿದ್ದರು. ಜುಲೈ 19, ಶನಿವಾರ ಅವರು ಹಠಾತ್ ನಿಧನರಾಗಿದ್ದಾರೆ ಅವರ ಸಾವು ಸಿಂಗಾಪುರದ ವ್ಯಾಪಾರ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಭಾರತೀಯ ಉದ್ಯೋಗಿಯಿಂದ ಪರಿಹಾರಕ್ಕಾಗಿ ಡ್ರಾಮಾ!
ಜೇನ್ ಲೀ ತಮ್ಮ ಸಾವಿಗೆ ಎರಡು ದಿನ ಮೊದಲು, ಭಾರತೀಯ ಉದ್ಯೋಗಿಯೊಬ್ಬರು ತಮ್ಮ ರೆಸ್ಟೋರೆಂಟ್ನಿಂದ ಪರಿಹಾರ ಪಡೆಯಲು ಗಾಯಗೊಂಡಿರುವುದಾಗಿ ನಟಿಸಿದ ನಂತರ ಅನುಭವಿಸಿದ ಯಾತನೆಯ ಬಗ್ಗೆ ಹೇಳಿಕೊಂಡಿದ್ದರು. ಜುಲೈ 18, ಶುಕ್ರವಾರ ಹಂಚಿಕೊಂಡ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ, ಭಾರತದ ಮಹಿಳೆ ಸರಣ್ ಕಿರಣ್ಜೀತ್ ಕೌರ್, ಕೆಲಸದ ವೇಳೆ ಗಾಯವಾಗಿದೆ ಎಂದು ಸುಳ್ಳು ಗಾಯವನ್ನು ಸೃಷ್ಟಿಸಿದ್ದಳು. ಆಕೆಯ ಗಾಯ ಪರಿಹಾರಕ್ಕೆ ಅರ್ಹವಿತ್ತು. ಹಣದ ಆಸೆಗಾಗಿ ಯಾರಾದರೂ ಇಷ್ಟೊಂದು ಮೋಸದಿಂದ ವರ್ತಿಸಬಹುದೆಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಸುಮೋ ಸಲಾಡ್ನ ಮಾಲಕಿ ಬರೆದುಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಸಂಕಟ ಹೇಳಿಕೊಂಡಿದ್ದ ಅಂಗಡಿ ಮಾಲಕಿ
ಭಾರತ ಮೂಲದ ಕೆಲಸಗಾತಿ ಮಹಿಳೆ ಸರಣ್ ಕಿರಣ್ಜೀತ್ ಕೌರ್ ಅವರು ಉದ್ಯೋಗ ಕೋರಿ ನನ್ನನ್ನು ಸಂಪರ್ಕಿಸಿದ್ದರು. ತನ್ನ ಕೆಲಸದ ಒಪ್ಪಂದ ಮುಗಿಯುವ ಕೇವಲ ಎರಡು ದಿನಗಳ ಮೊದಲು, ಅವಳು ಈ ರೀತಿ ನಾಟಕ ಮಾಡಿದ್ದಾಳೆ. ಕಸ ವಿಲೇವಾರಿ ಮಾಡಲು ಎಸ್ಕಲೇಟರ್ ತೆಗೆದುಕೊಳ್ಳುವಾಗ ಜಾರಿ ಬಿದ್ದಿದ್ದಾಗಿ ಹೇಳಿದಳು. ಆ ದಿನ, ಅವಳು ಬೇಗನೆ ಕೆಲಸ ಬಿಡಬೇಕಿತ್ತು, ಈ ಘಟನೆಯೂ ಪೂರ್ವಯೋಜಿತವಾಗಿತ್ತು ಎಂಬುದು ನನಗೆ ಸ್ಪಷ್ಟವಾಯಿತು, ಬಹುಶಃ ಸುಳ್ಳು ಕೆಲಸದ ಗಾಯದ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಯತ್ನ ಇದಾಗಿರಬಹುದು ಎಂದು ಲೀ ಹೇಳಿದ್ದರು.
ಕೌರ್ ನಿಜವಾಗಿಯೂ ಗಾಯಗೊಂಡಿಲ್ಲ ಎಂದು ಸಾಬೀತುಪಡಿಸಲು ತನ್ನ ಬಳಿ ವೀಡಿಯೊ ದೃಶ್ಯಾವಳಿಗಳಿವೆ. ಅವಳು ಸಾಮಾನ್ಯವಾಗಿ ಓಡಾಡುವುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ - ಅಡುಗೆ ಮಾಡುವುದು, ನಡೆಯುವುದು ಮತ್ತು ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುವುದು. ಆದಾಗ್ಯೂ, ಇತರರ, ವಿಶೇಷವಾಗಿ ವೈದ್ಯರ ಸಮ್ಮುಖದಲ್ಲಿ ಅವಳ ನಡವಳಿಕೆ ನಾಟಕೀಯವಾಗಿ ಬದಲಾಗುತ್ತಿದ್ದವು. ಗಂಭೀರವಾದ ಗಾಯವಾಗಿದೆ ಎಂದು ತೋರಿಸಿಕೊಳ್ಳಲು ಕುಂಟುತ್ತಿದ್ದಳು ಎಂದು ಲೀ ಹೇಳಿದ್ದಾರೆ.
ವಿಮೆ ಇಲ್ಲದ ಸಣ್ಣ ವ್ಯಾಪಾರಿಗಳೇ ಟಾರ್ಗೆಟ್
ಭಾರತೀಯ ಮಹಿಳೆಯ ಈ ತಂತ್ರವು ಸಣ್ಣ ವ್ಯವಹಾರ ಮಾಲೀಕರನ್ನು ಗುರಿಯಾಗಿಸಿಕೊಂಡಿದೆ. ಸರಿಯಾದ ವಿಮಾ ರಕ್ಷಣೆಯಿಲ್ಲದ ಒಬ್ಬ ವ್ಯಕ್ತಿಯನ್ನು ಅವರು ಕಂಡುಕೊಂಡರೆ, ಅವರು ಭಯವನ್ನು ಹುಟ್ಟು ಹಾಕುತ್ತಾರೆ ಮತ್ತು ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಾರೆ ಎಂದು ಲೀ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದು,, ಸಿಂಗಾಪುರದ ಮಾನವಶಕ್ತಿ ಸಚಿವಾಲಯ (MOM)ಹಾಗೂ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ ಇದಾಗಿ ಎರಡು ದಿನದಲ್ಲಿ ಅವರೇ ಸಾವನ್ನಪ್ಪಿದ್ದು, ಅಲ್ಲಿನ ವ್ಯಾಪಾರ ವಲಯದಲ್ಲಿ ಆಘಾತ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ