Russia Ukraine Crisis: ಮತ್ತೆ 489 ಭಾರತೀಯರು ಉಕ್ರೇನ್‌ನಿಂದ ತವರಿಗೆ: ವಾಪಸಾದವರಿಗೆ ಕೋವಿಡ್‌ ನಿರ್ಬಂಧ ಸಡಿಲ!

Published : Mar 01, 2022, 08:16 AM IST
Russia Ukraine Crisis: ಮತ್ತೆ 489 ಭಾರತೀಯರು ಉಕ್ರೇನ್‌ನಿಂದ ತವರಿಗೆ: ವಾಪಸಾದವರಿಗೆ ಕೋವಿಡ್‌ ನಿರ್ಬಂಧ ಸಡಿಲ!

ಸಾರಾಂಶ

*6 ವಿಮಾನಗಳಲ್ಲಿ 1396 ಜನರ ಕರೆ ತಂದ ಏರಿಂಡಿಯಾ: ಈವರೆಗೆ 8000 ಜನರು ವಾಪಸ್‌ *ಉಕ್ರೇನ್‌ನಿಂದ ಬಂದ ಭಾರತೀಯರಿಗೆ ಕೋವಿಡ್‌ ನಿರ್ಬಂಧ ಇಲ್ಲ: ಆರೋಗ್ಯ ಸಚಿವಾಲಯ

ನವದೆಹಲಿ (ಮಾ. 01): ಉಕ್ರೇನ್‌ನಿಂದ ಭಾರತೀಯರ ಕರೆ ತರುವ ‘ಆಪರೇಷನ್‌ ಗಂಗಾ’ಕ್ಕೆ ಸೋಮವಾರ ಮತ್ತಷ್ಟುತೇಜಿ ಸಿಕ್ಕಿದ್ದು, ಸೋಮವಾರ ಒಟ್ಟು 489 ಜನರನ್ನು ತವರಿಗೆ ಕರೆ ತರಲಾಗಿದೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಏರ್‌ ಇಂಡಿಯಾ ವಿಮಾನವು ಒಟ್ಟು 6 ವಿಮಾನಗಳ ಮೂಲಕ 1396 ಜನರನ್ನು ತವರಿಗೆ ಕರೆತಂದಂತೆ ಆಗಿದೆ. ಸೋಮವಾರ ಬೆಳಗ್ಗೆ ಏರ್‌ ಇಂಡಿಯಾ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 249 ಜನರನ್ನು ತಂದರೆ, ಸಂಜೆ ಆಗಮಿಸಿದ ವಿಮಾನದಲ್ಲಿ 240 ಜನರು ದೆಹಲಿಗೆ ಬಂದಿಳಿದರು.

ಸ್ಪೈಸ್‌ ಜೆಟ್‌:ಈ ನಡುವೆ ಖಾಸಗಿ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ ಜೆಟ್‌ ಶುಕ್ರವಾರದಿಂದ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಭಾರತೀಯರ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.

ಈವರೆಗೆ 8000 ಜನರು ವಾಪಸ್‌: ಭಾರತವು ಯುದ್ಧ ಆರಂಭದ ನಂತರ 1396 ಜನರನ್ನು ಉಕ್ರೇನ್‌ನಿಂದ ಕರೆತಂದಿದೆ. ಇದಕ್ಕೂ ಮೊದಲು ಯುದ್ಧದ ಕಾರಣ ತೆರವು ಸಲಹಾವಳಿ ಹೊರಡಿಸಿದ ನಂತರ ಸುಮಾರು 6500 ಜನರು ಬಂದಿದ್ದರು. ಈ ಮೂಲಕ 8000 ಜನರು ಉಕ್ರೇನ್‌ನಿಂದ ಭಾರತಕ್ಕೆ ಮರಳಿದಂತಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಉಕ್ರೇನ್‌ನಿಂದ ಬಂದ ಭಾರತೀಯರಿಗೆ ಕೋವಿಡ್‌ ನಿರ್ಬಂಧ ಇಲ್ಲ: ಉಕ್ರೇನಿನಿಂದ ಆಗಮಿಸುತ್ತಿರುವ ಭಾರತೀಯರಿಗೆ ಪೂರ್ವ ಬೋರ್ಡಿಂಗ್‌ ಆರ್‌ಸಿಪಿಟಿಆರ್‌ ಪರೀಕ್ಷೆ, ಕೋವಿಡ್‌ ಲಸಿಕೆ ಪ್ರಮಾಣಪತ್ರ ಒದಗಿಸುವುದು ಹಾಗೂ ಆರೋಗ್ಯ ಸುವಿಧಾ ಪೋರ್ಟಲ್‌ನಲ್ಲಿ ದಾಖಲೆ ಅಪಲೋಡ್‌ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಇದನ್ನೂ ಓದಿ: Russia Ukraine Crisis: ವಿಶ್ವಸಂಸ್ಥೆಯಲ್ಲೂ ಸಮರ: ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ ಎಂದ ಯುಎನ್!‌

ಯುದ್ಧಪೀಡಿತ ಉಕ್ರೇನಿನಿಂದ ಮರಳಿದ ಭಾರತೀಯರಿಗಾಗಿ ಕೋವಿಡ್‌ ಮಾರ್ಗದರ್ಶಿ ಪರಿಷ್ಕರಿಸಿ ಮಾನವೀಯ ನೆಲೆಯಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ. ಫೆ. 28ರವೆಗೆ 1,156 ಭಾರತೀಯರು ಉಕ್ರೇನಿನಿಂದ ಮರಳಿದ್ದಾರೆ. ಅವರಲ್ಲಿ ಯಾರನ್ನೂ ಐಸೋಲೇಶನ್‌ನಲ್ಲಿ ಇಟ್ಟಿಲ್ಲ. ಪೂರ್ವ ಬೋರ್ಡಿಂಗ್‌ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳದಿದ್ದವರು ಅಥವಾ ಕೋವಿಡ್‌ ಲಸಿಕೆ ಪಡೆಯದಿದ್ದವರು ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿಯನ್ನು ನೀಡಬೇಕು. 14 ದಿನ ತಮ್ಮ ಆರೋಗ್ಯದ ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಬೇಕು. ಆಗಮಿಸಿದವರಲ್ಲಿ ಯಾರಿಗಾದರೂ ಪಾಸಿಟಿವ್‌ ಬಂದಲ್ಲಿ ನಿಗದಿಪಡಿಸಿದ ಮಾರ್ಗದರ್ಶಿಗಳ ಅನ್ವಯ ಚಿಕಿತ್ಸೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಅಂ.ರಾ. ಸವಾಲು ಎದುರಿಸಲು ದೇಶ ಬಲಿಷ್ಠ ಮಾಡಿ: ಮೋದಿ:  ಪ್ರಸ್ತುತ ಜಾಗತಿಕವಾಗಿ ಹೆಚ್ಚುತ್ತಿರುವ ಸವಾಲುಗಳು ಜಗತ್ತಿನ ಎಲ್ಲಾ ಜನರನ್ನು ಬಾಧಿಸುತ್ತಿವೆ. ಇದರ ವಿರುದ್ಧ ಹೋರಾಡಲು ಭಾರತವನ್ನು ಸರ್ವಶಕ್ತ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಇದನ್ನೂ ಓದಿ: Russia Ukraine Crisis: ಕೀವ್‌, ಖಾರ್ಕೀವ್‌ ಮೇಲೆ ಕ್ಲಸ್ಟರ್‌ ಬಾಂಬ್‌: ಅಣ್ವಸ್ತ್ರ ಸನ್ನದ್ಧ ಸ್ಥಿತಿಯಲ್ಲಿ ರಷ್ಯಾ!

ಉತ್ತರ ಪ್ರದೇಶಲ್ಲಿ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ‘ಪ್ರಸ್ತುತ ಜಗತ್ತು ಬಹಳಷ್ಟುಸವಾಲುಗಳನ್ನು ಎದುರಿಸುತ್ತಿದೆ. ಇವುಗಳಿಂದ ಯಾರಿಗೂ ದೂರ ಉಳಿಯಲು ಸಾಧ್ಯವಿಲ್ಲ. ಪ್ರಪಂಚದ ಎಲ್ಲಾ ನಾಗರಿಕರು ಒಂದಲ್ಲ ಒಂದು ರೀತಿ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ಎದುರಿಸಲು ಇರುವ ಏಕೈಕ ದಾರಿ ಭಾರತವನ್ನು ಕೃಷಿಯಿಂದ ಮಿಲಿಟರಿವರೆಗೆ, ಸಾಗರದಿಂದ ಅಂತರಿಕ್ಷದವರೆಗೆ ಸರ್ವಶಕ್ತಗೊಳಿಸುವುದು. ದೇಶದ ಬಹುದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಭಾರತವನ್ನು ಸರ್ವಶಕ್ತಗೊಳಿಸುವ ಜವಬ್ದಾರಿಯಿದೆ’ ಎಂದರು.

‘ಈ ಬಾರಿಯ ಬಜೆಟ್‌ನಲ್ಲಿ ಗಡಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ನಾವು ಈ ಬಗ್ಗೆ ಕೇವಲ ಭರವಸೆ ನೀಡಿಲ್ಲ. ಇದಕ್ಕಾಗಿ ಅನುದಾನವನ್ನು ನೀಡಿದ್ದೇವೆ. ಇದಕ್ಕೆ ನಾವು ಸ್ಪಂದನಶೀಲ (ವೈಬ್ರಂಟ್‌) ಗ್ರಾಮ ಎಂಬ ಹೆಸರನ್ನು ನೀಡಿದ್ದೇವೆ. ದೇಶದಲ್ಲಿ ಈಗಾಗಲೇ 175 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ’ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ