ಕಾದಿದ್ಯಾ ಅಪಾಯ.. ನ್ಯೂಕ್ಲಿಯರ್‌ ಡ್ರಿಲ್‌ ಆರಂಭಿಸಿದ ರಷ್ಯಾ!

By Santosh NaikFirst Published Oct 26, 2022, 11:48 PM IST
Highlights

ಉಕ್ರೇನ್‌ ವಿಚಾರದಲ್ಲಿ ನೀಡಿದ್ದ ನ್ಯೂಕ್ಲಿಯರ್‌ ಎಚ್ಚರಿಕೆ ಗಂಭೀರವಾದದ್ದು ಎಂದು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ರಷ್ಯಾ, ನ್ಯೂಕ್ಲಿಯರ್‌ ಡ್ರಿಲ್‌ ಅನ್ನು ಆರಂಭ ಮಾಡಿದೆ. ವ್ಲಾಡಿಮಿರ್‌ ಪುಟಿನ್‌ ನೇತೃತ್ವದಲ್ಲಿ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆದಿದ್ದ ಎಲ್ಲಾ ಮೂರೂ ಸೇನೆಗಳಿಗೂ ಅಲರ್ಟ್‌ ಆಗಿರುವಂತೆ ಹೇಳಲಾಗಿದೆ.
 

ಮಾಸ್ಕೋ (ಅ. 26): ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಮಧ್ಯೆ ರಷ್ಯಾ ಪರಮಾಣು ಡ್ರಿಲ್ ಅನ್ನು ಬುಧವಾರ ಪ್ರಾರಂಭ ಮಾಡಿದೆ. ಈ ಸಮಯದಲ್ಲಿ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ಉಡಾವಣೆ ಮಾಡಿದೆ.  ಅದರ ದೃಶ್ಯಾವಳಿಗಳನ್ನು ಸರ್ಕಾರಿ ಟಿವಿ ಬಿಡುಗಡೆ ಮಾಡಿದೆ. ವರದಿಗಳ ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿಯಂತ್ರಣ ಕೊಠಡಿಯಿಂದ ಸಂಪೂರ್ಣ ಪ್ರಯೋಗವನ್ನು ವೀಕ್ಷಣೆ ಮಾಡಿದ್ದಾರೆ. ತಾಂತ್ರಿಕವಾಗಿ ಈ ಡ್ರಿಲ್ ಅನ್ನು ಸ್ಟ್ರಾಟೆಜಿಕ್ ಡಿಟೆರೆನ್ಸ್ ಫೋರ್ಸ್ ಎಂದು ಕರೆಯಲಾಗಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಇದನ್ನು ಪ್ರತಿದಾಳಿಗೆ ತಯಾರಿ ಎನ್ನಬಹುದು. ಅಧ್ಯಕ್ಷ ಪುಟಿನ್ ಅವರ ನೇತೃತ್ವದಲ್ಲಿ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿ ಉಡಾವಣೆಗಳು ನಡೆದವು ಎಂದು ರಷ್ಯಾ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕ್ಷಿಪಣಿ ಪರೀಕ್ಷೆಗಳನ್ನು ರಷ್ಯಾದ ಪೂರ್ವ ಭಾಗದಲ್ಲಿರುವ ಕಮ್ಚಟ್ಕಾದಲ್ಲಿ ನಡೆಸಲಾಯಿತು. ಇದು ಆರ್ಕ್ಟಿಕ್ ಸಮುದ್ರದ ಪ್ರದೇಶವಾಗಿದೆ. ರಷ್ಯಾದ ಹೊಸ ಮತ್ತು ಹೈಟೆಕ್ ಟಿಯು-95 ವಿಮಾನಗಳನ್ನು ಸಹ ಪರೀಕ್ಷೆಯ ಸಮಯದಲ್ಲಿ ಬಳಸಲಾಯಿತು. ಉಡಾವಣೆಯಾದ ಎಲ್ಲಾ ಕ್ಷಿಪಣಿಗಳು ಗುರಿಯನ್ನು ಮುಟ್ಟಿದೆ ಎಂದು ಕ್ರೆಮ್ಲಿನ್ ಹೇಳಿಕೊಂಡಿದೆ.

ರಷ್ಯಾ ಖಂಡಾಂತರ ಕ್ಷಿಪಣಿಗಳನ್ನು ಹೊಂದಿದೆ. ಇದು ಪ್ರಪಂಚದ ಯಾವುದೇ ಭಾಗವನ್ನು ಬೇಕಾದರೂ ತಲುಪಬಹುದು. ಇದಲ್ಲದೆ, ಪರಮಾಣು ದಾಳಿಯನ್ನು ನಡೆಸಬಲ್ಲ ಅಂತಹ ಎಲ್ಲಾ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಕೂಡ ರಷ್ಯಾ ಹೊಂದಿದೆ. ಒಂದೆಡೆ ರಷ್ಯಾ ಸೇನೆ ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸಬಹುದು ಎಂದು ಅಮೆರಿಕ ಹೇಳುತ್ತಿದೆ. ಮತ್ತೊಂದೆಡೆ, ತನ್ನ ಮೇಲೆ ಪರಮಾಣು ದಾಳಿಗೆ ಅಮೆರಿಕ ಮತ್ತು ನ್ಯಾಟೋ ಸಿದ್ಧತೆ ನಡೆಸುತ್ತಿದೆ ಎಂದು ರಷ್ಯಾ ಹೇಳುತ್ತಿದೆ.

‘ನಿಕ್ಕಿ ಏಷ್ಯಾ’ ವರದಿ ಪ್ರಕಾರ, ಬುಧವಾರದಂದು ರಷ್ಯಾ ಅಮೆರಿಕಕ್ಕೆ (USA) ಪರಮಾಣು ಡ್ರಿಲ್ (nuclear drill ) ಬಗ್ಗೆ ಮಾಹಿತಿ ನೀಡಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ(Ballistic missile ) ಉಡಾಯಿಸಲಾಗುವುದು ಎಂದು ಅದು ಹೇಳಿದೆ. ಪೆಂಟಗನ್ ಕೂಡ ಇದನ್ನು ದೃಢಪಡಿಸಿದೆ. ಪೆಂಟಗನ್‌ ವಕ್ತಾರ ಪ್ಯಾಟ್ರಿಕ್ ರೈಡರ್,'ಹೌದು, ರಷ್ಯಾ ನಮಗೆ ಮಾಹಿತಿ ನೀಡಿದೆ. ಇದು ನಿತ್ಯದ ಪರೀಕ್ಷೆ. ಇದರರ್ಥ ರಷ್ಯಾ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಪಾರದರ್ಶಕತೆಯ ಭರವಸೆಗೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸುತ್ತಿದೆ' ಎಂದು ಹೇಳಿದ್ದಾರೆ.

ತಕ್ಷಣವೇ ಉಕ್ರೇನ್ ಬಿಟ್ಟು ಹೊರಡಿ , ತನ್ನ ನಾಗರಿಕರಿಗೆ ವಾರ್ನಿಂಗ್ ನೀಡಿದ ಭಾರತ!

ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆ ಕಳೆದ 8 ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಏತನ್ಮಧ್ಯೆ, ಡರ್ಟಿ ಬಾಂಬ್ ಸೇರಿದಂತೆ ಭಾರತದೊಂದಿಗೆ ಹಲವು ಸಮಸ್ಯೆಗಳ ಬಗ್ಗೆ ರಷ್ಯಾ ಕಳವಳ ವ್ಯಕ್ತಪಡಿಸಿದೆ. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೊಂದಿಗೆ ಬುಧವಾರ ದೂರವಾಣಿ ಸಂಭಾಷಣೆ ನಡೆಸಿದರು. ಈ ವೇಳೆ ಯುದ್ಧದಿಂದ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಲಾಯಿತು. ಖೆರ್ಸನ್ ಪ್ರದೇಶದಲ್ಲಿ ಉಕ್ರೇನ್ ಡರ್ಟಿ ಬಾಂಬ್‌ಗಳನ್ನು ಬಳಸಬಹುದು ಎಂದು ಶೋಯಿಗು ಭಾರತಕ್ಕೆ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ, ರಷ್ಯಾ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸುವ ಮೂಲಕ ಖರ್ಸನ್ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಭಾರತವು ಈ ಸಂಪೂರ್ಣ ವಿಷಯವನ್ನು ಮಾತುಕತೆಯ ಮೂಲಕ ಪರಿಹರಿಸುವ ಬಗ್ಗೆ ಹೇಳಿದೆ.

ಪಿಒಕೆ, ಅಕ್ಸಾಯ್‌ಚಿನ್‌ ಭಾರತದ್ದೆಂದು ಚಿತ್ರಿಸಿದ ರಷ್ಯಾ, ಭೂಪಟ ಬಿಡುಗಡೆ

ಡರ್ಟಿ ಬಾಂಬ್‌ಗಳ ಬಳಕೆಯ ಬಗ್ಗೆ ಅಮೆರಿಕ, ಫ್ರಾನ್ಸ್ ಮತ್ತು ಯುಕೆ ಸೇರಿದಂತೆ ಹಲವು ದೇಶಹಳ ಜೊತೆ ಮಾತನಾಡಿದೆ. ಆದಾಗ್ಯೂ, ಈ ದೇಶಗಳು ರಷ್ಯಾದ ಹೇಳಿಕೆಯನ್ನು ತಿರಸ್ಕರಿಸಿವೆ. ರಷ್ಯಾ ಮಾಡುತ್ತಿರುವ ಹಕ್ಕು ಸಂಪೂರ್ಣ ತಪ್ಪು ಎಂದು ಮೂರು ದೇಶಗಳು ಹೇಳಿವೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ಹೇಳಿಕೆಯನ್ನು ಕಟುವಾಗಿ ತಿರಸ್ಕರಿಸಿದ್ದಾರೆ. ನಮ್ಮ ವಿರುದ್ಧ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾದ ಮಿಲಿಟರಿ ಸ್ವತಃ ಡರ್ಟಿ ಬಾಂಬ್ ಅನ್ನು ಬಳಸಲು ಪ್ರಯತ್ನಿಸುತ್ತಿದೆ ಮತ್ತು ಉಕ್ರೇನ್ ತನ್ನ ಚಟುವಟಿಕೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಆರೋಪಿಸಿದೆ.

click me!