
ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ (Russia Ukraine Crisis) ಸೇನಾ ಜಮಾವಣೆ ಹೆಚ್ಚುತ್ತಿದ್ದಂತೆ ಯುದ್ಧದ ಕಾರ್ಮೋಡವೂ ಮತ್ತಷ್ಟುಆವರಿಸಿಕೊಂಡಿದೆ. ಯುದ್ಧ ಆರಂಭವಾದರೆ ಸಾವಿರಾರು ಜನರು ಸಾವನ್ನಪ್ಪುವ, ಗಾಯಗೊಳ್ಳುವ ಆತಂಕ ಇರುವ ಹಿನ್ನೆಲೆಯಲ್ಲಿ ಇಡೀ ವಿಶ್ವ ರಷ್ಯಾದ ಮುಂದಿನ ಹೆಜ್ಜೆಯೆಡೆಗೆ ಗಮನ ಇರಿಸಿದೆ. ಸಂಭವನೀಯ ಯುದ್ಧವು, ಈಗಷ್ಟೇ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
16000 ಲಕ್ಷ ಸೈನಿಕರು, ಅತ್ಯಾಧುನಿಕ ಸೇನೆ ಸಜ್ಜು: ಉಕ್ರೇನ್ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ 1.60 ಲಕ್ಷ ಯೋಧರನ್ನು ನಿಯೋಜಿಸಿದೆ. ಜೊತೆಗೆ ಖಂಡಾಂತರ, ಕ್ರೂಸ್, ಅಣ್ವಸ್ತ್ರ ದಾಳಿ ಸಾಮರ್ಥ್ಯದ ಕ್ಷಿಪಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ.
ಲಕ್ಷಾಂತರ ಜನರ ತೆರವು: ರಷ್ಯಾ ಸೇನೆ ತನ್ನ ವಶದಲ್ಲಿರುವ ಪ್ರದೇಶಗಳ ಮೇಲೆ ದಾಳಿ ನಡೆಸಬಹುದು ಎಂಬ ಆತಂಕದಲ್ಲಿರುವ ಉಕ್ರೇನಿ ಬಂಡುಕೋರರು ತಮ್ಮ ವಶದಲ್ಲಿನ ಲಕ್ಷಾಂತರ ಜನರನ್ನು ರಷ್ಯಾಕ್ಕೆ ಸ್ಥಳಾಂತರಿಸಿದ್ದಾರೆ. 7 ಲಕ್ಷ ಜನರಿಗೆ ತನ್ನ ದೇಶಕ್ಕೆ ಬರಲು ರಷ್ಯಾ ಅವಕಾಶ ಮಾಡಿಕೊಟ್ಟಿದೆ.
ಬಂಡುಕೋರರಿಂದಲೂ ಸಿದ್ಧತೆ: ಒಂದು ವೇಳೆ ರಷ್ಯಾ ಸೇನೆ ದಾಳಿ ನಡೆಸಿದರೆ, ಉಕ್ರೇನ್ ನಡೆಸುವ ಮೊದಲ ಪ್ರತಿದಾಳಿ ತನ್ನ ಮೇಲಾಗಿರಬಹುದು ಎಂಬ ಆತಂಕದಲ್ಲಿರುವ ಬಂಡುಕೋರರ ಹಿಡಿತದಲ್ಲಿರುವ ರಾಜ್ಯಗಳು ಪೂರ್ಣ ಪ್ರಮಾಣದಲ್ಲಿ ಯುದ್ಧಕ್ಕೆ ಸಿದ್ಧತೆ ನಡೆಸಿವೆ.
Russia Ukraine Crisis ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಭಾರತೀಯ ನಾಗರಿಕರಿಗೆ ಸೂಚನೆ!
ಜನ ಸಾಮಾನ್ಯರಿಗೂ ಯುದ್ಧ ತರಬೇತಿ: ರಷ್ಯಾ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಉಕ್ರೇನಿ ಸೇನೆಯು, ಆಸಕ್ತ ನಾಗರಿಕರಿಗೆ ಗನ್ ಬಳಸುವ ತರಬೇತಿ ಆರಂಭಿಸಿದೆ. ಗನ್ ಮಾದರಿಯ ಪ್ರತಿಕೃತಿಗಳನ್ನು ಹಿಡಿದು ಸೈನಿಕರು ತರಬೇತಿ ನೀಡುತ್ತಿರುವ ಫೋಟೋಗಳು ವೈರಲ್ ಆಗಿದೆ.
1945ರ ಬಳಿಕ ರಷ್ಯಾದಿಂದ ಬೃಹತ್ ಯುದ್ಧ: 1945ರ ನಂತರದ ಬೃಹತ್ ಯುದ್ಧ ನಡೆಸಲು ರಷ್ಯಾ ಯೋಜನೆ ರೂಪಿಸಿದೆ. ಯುದ್ಧದ ಕುರಿತಾಗಿ ದೊರೆತಿರುವ ಪುರಾವೆಗಳು ಸಹ ಇದನ್ನೇ ಸೂಚಿಸುತ್ತಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಉಕ್ರೇನ್ ಮೇಲೆ ರಷ್ಯಾ ದಾಳಿ ಖಚಿತ ಎಂಬ ಸುಳಿವು ನೀಡಿದ್ದಾರೆ. ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಲು ಆರಂಭಿಸಿದೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ.
ಇದಲ್ಲವನ್ನು ಗಮನಿಸಿದರೆ ಯುದ್ಧ ಈಗಾಗಲೇ ಆರಂಭವಾಗಿರುವುದನ್ನು ಸೂಚಿಸುತ್ತಿದೆ. ಈ ಯುದ್ಧದಿಂದ ಉಂಟಾಗುವ ಸಾವಿನ ಕುರಿತು ಕಳವಳವಾಗುತ್ತಿದೆ. ಈ ಯುದ್ಧ ಹಲವಾರು ಜನರ ಸಾವಿಗೆ ಕಾರಣವಾಗಲಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತರ್ಕರಹಿತವಾಗಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮ್ಯೂನಿಚ್ನಲ್ಲಿ ನಡೆದ ವಿಶ್ವ ನಾಯಕರ ಸಭೆಯಲ್ಲಿ ಜಾನ್ಸನ್ ಹೇಳಿದ್ದಾರೆ.
ಉಕ್ರೇನ್ನಿಂದ ಹೊರಡಿ: ರಷ್ಯಾ ದಾಳಿ ಭೀತಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಭಾರತೀಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಕ್ರೇನ್ನ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ. ಸದ್ಯಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳು ಅಥವಾ ಚಾರ್ಟರ್ ವಿಮಾನಗಳಲ್ಲಿ ಸ್ವದೇಶಕ್ಕೆ ಮರಳಲು ಸೂಚಿಸಲಾಗಿದೆ.
Russia Ukraine Crisis ರಷ್ಯಾ ಬೆಂಬಲಿತ ಬಂಡುಕೋರರಿಂದ ಉಕ್ರೇನ್ನಲ್ಲಿ ಶೆಲ್ ದಾಳಿ!
‘ಉಕ್ರೇನ್ನಲ್ಲಿ ಅನಿಶ್ಚಿತ ಯುದ್ಧದ ವಾತಾವರಣ ಇರುವುದರಿಂದ ಅನಿವಾರ್ಯತೆ ಇಲ್ಲದವರು ತಾತ್ಕಾಲಿಕವಾಗಿ ಉಕ್ರೇನ್ನಿಂದ ಹಿಂದಿರುಗಿ. ಹೆಚ್ಚಿನ ಮಾಹಿತಿಗಾಗಿ ರಾಯಭಾರಿ ಕಚೇರಿಯ ಸಂಪರ್ಕದಲ್ಲಿರಿ. ರಾಯಭಾರಿ ಕಚೇರಿಯ ಫೇಸ್ಬುಕ್ ಮತ್ತು ಟ್ವೀಟರ್ ಖಾತೆಗಳನ್ನು ಫಾಲೋ ಮಾಡಿ’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ವಿಮಾನ ಟಿಕೆಟ್ ಸಿಗುತ್ತಿಲ್ಲ ಎಂದು ಹಲವರು ದೂರು ನೀಡಿದ್ದರಿಂದ ಭಾರತೀಯರ ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. 24 ಗಂಟೆ ಮಾಹಿತಿ ನೀಡುವಂತಹ ಸಹಾಯವಾಣಿಯನ್ನು ಸಹ ಸ್ಥಾಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ