
ಗಾಜಾದಲ್ಲಿನ ಯುದ್ಧಾಪರಾಧಗಳ ಆರೋಪದ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ (Arrest Warrant) ಹೊರಡಿಸಲು ಮುಂದಾಗಿರುವ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು(Benjamin netanyahu) ಖಡಕ್ ತಿರುಗೇಟು ನೀಡಿದ್ದಾರೆ.
ವಿದೇಶದಲ್ಲಿ ಯಾವುದೇ ಇಸ್ರೇಲಿ ಪ್ರಜೆಯನ್ನು ಬಂಧಿಸಲು ಪ್ರಯತ್ನಿಸಿದರೆ ನಾನು ಕಮಾಂಡೋಗಳನ್ನು ಕಳುಹಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ನೇತನ್ಯಾಹು ಅವರ ಈ ವಾರ್ನಿಂಗ್ ನ್ಯೂಯಾರ್ಕ್ ನಗರದ ಇಬ್ಬರು ಜನಪ್ರತಿನಿಧಿಗಳ ಹೇಳಿಕೆಗೆ ಪ್ರತಿಯಾಗಿ ಬಂದಿದೆ ಎನ್ನಲಾಗುತ್ತಿದೆ. ನೇತನ್ಯಾಹು ಅವರು ನ್ಯೂಯಾರ್ಕ್ಗೆ ಕಾಲಿಟ್ಟರೆ ಅವರನ್ನು ಬಂಧಿಸಬೇಕು ಎಂದು ಈ ಇಬ್ಬರೂ ರಾಜಕಾರಣಿಗಳು ಆಗ್ರಹಿಸಿದ್ದರು.
ನೇತನ್ಯಾಹು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದವರಲ್ಲಿ ನ್ಯೂಯಾರ್ಕ್ ನ ಮೇಯರ್ ಜೊಹ್ರಾನ್ ಮಮ್ದಾನಿ ಪ್ರಮುಖರು. ಆದರೆ, ಆರಂಭದಲ್ಲಿ ಬಂಧನದ ಬಗ್ಗೆ ಮಾತನಾಡಿದ್ದ ಅವರು ಈಗ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಯಾರನ್ನೇ ಆಗಲಿ ಬಂಧಿಸುವ ಅಧಿಕಾರ ತಮಗಿಲ್ಲ ಎಂದು ಅವರು ಹೇಳಿದ್ದಾರೆ. ಯಾವುದೇ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಇರುವುದು ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ (NYPD) ಮಾತ್ರ ಎಂದು ಮಮ್ದಾನಿ ತಿಳಿಸಿದ್ದಾರೆ.
ಭಾರತೀಯ-ಉಗಾಂಡಾ ಮೂಲದ ಮಮ್ದಾನಿ ಅವರ ಈ ಯೂ-ಟರ್ನ್, ರಾಜಕೀಯ ವಲಯದಲ್ಲಿ ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಮಮ್ದಾನಿ ಮಾತ್ರವಲ್ಲ, ಬಾಂಗ್ಲಾದೇಶ ಮೂಲದ ನ್ಯೂಯಾರ್ಕ್ ನಗರಸಭೆ ಸದಸ್ಯೆ ಶಹಾನಾ ಹನೀಫ್ ಕೂಡ ಇದೇ ರೀತಿ ನೆತನ್ಯಾಹು ಬಂಧನಕ್ಕೆ ಆಗ್ರಹಿಸಿದ್ದರು. ಈ ಇಬ್ಬರ ಹೇಳಿಕೆ ಬಳಿಕ ಅಮೆರಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದವು.
ಗಾಜಾದಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ನಡೆದಿವೆ ಎಂಬ ಆರೋಪದ ಮೇಲೆ ಐಸಿಸಿ ಪ್ರಾಸಿಕ್ಯೂಟರ್ ನೇತನ್ಯಾಹು ವಿರುದ್ಧ ಬಂಧನ ವಾರಂಟ್ ಕೋರಿದ್ದಾರೆ. ಈ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಒಂದು ಕಾನೂನಾತ್ಮಕ ತೊಡಕೂ ಇದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಐಸಿಸಿಯ ಸದಸ್ಯರಲ್ಲ. ಆದರೆ ಪ್ಯಾಲೆಸ್ತೀನ್ ಐಸಿಸಿಯ ಸದಸ್ಯತ್ವ ಹೊಂದಿರುವುದರಿಂದ ಈ ವಾರಂಟ್ಗೆ ಕಾನೂನಿನ ಮಾನ್ಯತೆ ಇದೆಯೇ ಎಂಬ ಜಿಜ್ಞಾಸೆ ಮುಂದುವರಿದಿದೆ. ಇದೇ ಕಾರಣಕ್ಕೆ ನೇತನ್ಯಾಹು ಅವರಂತಹ ನಾಯಕರು ಐಸಿಸಿ ಕ್ರಮವನ್ನು ಕಠಿಣವಾಗಿ ವಿರೋಧಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ