
ಮಾಲಿ (ಏ.26) ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಅಲ್ ಖೈದಾ ಉಗ್ರ ಸಂಘಟನೆಯ ಮಿತ್ರ ಸಂಘಟನೆ ತೌರೆಗ್ ರೆಬೆಲ್ಸ್ ದಾಳಿ ಮಾಡಿದೆ. ಮಾಲಿ ದೇಶದ ಭದ್ರತಾ ನೆಲೆಗಳ ಮೇಲೆ ಸಂಘಟಿತ ದಾಳಿ ನಡೆಸಲಾಗಿದೆ. ಮಾಲಿ ದೇಶದ ರಕ್ಷಣಾ ಸಚಿವ ಸದಿಯೋ ಕಮಾರ ಮನೆ ಮೇಲೂ ದಾಳಿಯಾಗಿದೆ. ಈ ದಾಳಿಯಲ್ಲಿ ಸದಿಯೋ ಕಮರಾ ಸೇರಿದಂತೆ ಅವರ ಕುಟುಂಬವೂ ಹತ್ಯೆಯಾಗಿದೆ ಎಂದು ಅಲ್ ಝಜೀರಾ ವರದಿ ಮಾಡಿದೆ.
ಮಾಲಿ ಮಿಲಿಟರಿ ಕ್ಷೇತ್ರದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಸದಿಯೋ ಕಮಾರ, ಭಾರಿ ಜನಪ್ರಿಯತೆಯನ್ನೂ ಪಡೆದಿದ್ದರು. ಮಾಲಿ ದೇಶದ ಪ್ರಭಾವಿ ನಾಯಕನಾಗಿ ಬೆಳೆದಿದ್ದ ಸದಿಯೋ ಹಾಗೂ ಅವರ ಕುಟುಂಬ ಈ ದಾಳಿಯಲ್ಲಿ ನಾಶವಾಗಿದೆ. ಮಾಲಿಯಾ ರಾಜಧಾನಿ ಬಮಾಕೋದ ಹೊರವಲಯದಲ್ಲಿರುವ ಕಟಿ ಪ್ರದೇಶದ ಮೇಲೆ ದಾಳಿಯಾಗಿದೆ. ಇದು ಮಾಲಿಯ ಮಿಲಿಟರಿ ನೆಲೆಯಾಗಿದೆ. ಈ ಮಿಲಿಟರಿ ನೆಲೆಯ ಪಕ್ಕದಲ್ಲೇ ಸದಿಯೋ ಕಮಾರ ನಿವಾಸವಿದೆ. ಭಾರಿ ಭದ್ರತೆಯನ್ನೂ ಒದಗಿಸಲಾಗಿದೆ. ಮನೆಯಲ್ಲಿ ಸದಿಯೋ ಕಮಾರ, ಅವರ ಎರಡನೇ ಪತ್ನಿ ಹಾಗೂ ಇಬ್ಬರು ಮೊಮ್ಮಕ್ಕಳು ಈ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಲ್ ಖೈದಾ ಉಗ್ರರು, ತೌರೆಗ್ ರೆಬೆಲ್ಸ್ ಬಂಡುಕೋರರ ಗುಂಪು ಈ ದಾಳಿ ನಡೆಸಿದೆ ಎಂದು ಹೊಣೆ ಹೊತ್ತುಕೊಂಡಿದೆ. ಕಾರು ಬಾಂಬ್ ಹಾಗೂ ಗುಂಡಿನ ಮೂಲಕ ದಾಳಿ ಮಾಡಲಾಗಿದೆ. ಮಾಲಿಯಲ್ಲಿ ಉಗ್ರರು, ಬಂಡುಕೋರರ ಉಪಟಳ ತೀವ್ರವಾಗಿದೆ. ಹೀಗಾಗಿ 2020ರಿಂದ ಮಾಲಿಯಲ್ಲಿ ಸದಿಯೋ ಕಮಾರ ಇದರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಹಲವು ಬಂಡುಕೋರರು ಹಾಗೂ ಉಗ್ರ ಸಂಘಟನೆಗಳ ಸದಸ್ಯರ ಮೇಲೆ ಭೀಕರ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಹಲವು ಬಾರಿ ಉಗ್ರರು ಸದಿಯೋ ಕಮಾರಗೆ ಬೆದರಿಕೆ ಹಾಕಿದ್ದರು. ಆದರೆ ಉಗ್ರರ ವಿರುದ್ಧದ ಕಾರ್ಯಾಚರಣೆಯಿಂದ ಸದಿಯೋ ಕಮಾರ ಹಿಂದೆ ಸರಿದಿರಲಿಲ್ಲ.
ಸದಿಯೋ ಕಮಾರ ಇದೇ ಕಾರಣದಿಂದ ಮಾಲಿಯಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಸದಿೋ ಕಮಾರ ಶೀಘ್ರದಲ್ಲೇ ಮಾಲಿಯ ಪ್ರಮುಖ ನಾಯಕನಾಗಿ ದೇಶವನ್ನೇ ಮುನ್ನಡೆಸುವ ಸಾಧ್ಯತೆಯನ್ನು ಅಂತಾರಾಷ್ಟ್ರೀಯ ಪ್ರಮುಖ ನಾಯಕರು ಸೂಚಿಸಿದ್ದರು.
ಮಾಲಿಯ ಹಲವು ನಗರಗಳ ಮೇಲೆ ಸಂಘಟಿತ ದಾಳಿ ನಡೆದಿದೆ. ಮಾಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಾಲಿ ಸೈನ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದೆ. ಇತ್ತ ಯೂರೋಪಿಯನ್ ಒಕ್ಕೂಟ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ