
ಟೆಹ್ರಾನ್ (ಮಾ.14) ಅಮೆರಿಕ ಮತ್ತು ಇಸ್ರೇಲ್, ಜಂಟಿಯಾಗಿ ಇರಾನ್ ಮೇಲೆ ಭಾರೀ ವಾಯುದಾಳಿ ನಡೆಸಿ, ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹೊಡೆದುರುಳಿಸಿ ವೆನಿಜುವೆಲಾ ರೀತಿಯಲ್ಲೇ ಆಡಳಿತ ಬದಲಾವಣೆಯನ್ನು ನಿರೀಕ್ಷಿಸಿದ್ದವು. ಆದರೆ ಯುದ್ಧ ಆರಂಭವಾದ 2 ವಾರಗಳ ನಂತರವೂ ಇರಾನ್ ಹೋರಾಟ ಮುಂದುವರೆಸಿದೆ. ತನ್ನ ಹಲವು ಉನ್ನತ ನಾಯಕರು ಸಾವನ್ನಪ್ಪಿದರೂ ಧೃತಿಗೆಡದೆ ಸಮರೋತ್ಸಾಹ ತೋರುತ್ತಿದೆ. ಇದು ಅಮೆರಿಕವನ್ನು ದಂಗುಬಡಿಸಿದೆ.
ಇದಕ್ಕೆ ಕಾರಣ ಇರಾನಿಗೆ ಬೆನ್ನೆಲುಬಾಗಿ ನಿಂತಿರುವ ಸೇನಾ ತಂತ್ರಜ್ಞ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ ಹಾಗೂ ಆತ ನಿರ್ಮಿಸಿರುವ ‘ಮೊಸೈಕ್’ ಎಂಬ ವಿಶಿಷ್ಟ ರಕ್ಷಣಾ ವ್ಯವಸ್ಥೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಇರಾನ್ ಸೇನೆಯು ‘ಮೊಸೈಕ್ ಡಿಫೆನ್ಸ್’ ಎಂಬ ವಿಶೇಷ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ಎಂಥದ್ದೇ ದಾಳಿ ಎದುರಾದರೂ ಸಮರ್ಥವಾಗಿ ಎದುರಿಸಿ ನಿಲ್ಲುವ ಶಕ್ತಿ ಒದಗಿಸಿದೆ. ಮೊಹಮ್ಮದ್ ಅಲಿ ಜಾಫರಿ ಈ ವ್ಯವಸ್ಥೆಯ ರೂವಾರಿ ಎನ್ನಲಾಗುತ್ತದೆ. ಅವರು 2007ರಿಂದ 2019ರವರೆಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (ಐಆರ್ಜಿಸಿ) ಮುಖ್ಯಸ್ಥರಾಗಿದ್ದರು. ಇರಾನ್-ಇರಾಕ್ ಯುದ್ಧದಲ್ಲಿ (1980-1988) ಹೋರಾಡಿದ್ದರು.
1992ರಲ್ಲಿ ಗಾರ್ಡ್ಸ್ ಗ್ರೌಂಡ್ ಫೋರ್ಸ್ಗಳ ಮುಖ್ಯಸ್ಥರಾದರು. 2005ರಲ್ಲಿ ಐಆರ್ಜಿಸಿಯ ಸ್ಟ್ರ್ಯಾಟಜಿಕ್ ಸ್ಟಡೀಸ್ ಸೆಂಟರ್ನ ನಿರ್ದೇಶಕರಾದರು. ಅಲ್ಲಿ ಇರಾನ್-ಇರಾಕ್ ಯುದ್ಧ ಮತ್ತು 2003ರಲ್ಲಿ ಅಮೆರಿಕ ಇರಾಕ್ ಮೇಲೆ ನಡೆಸಿದ ಆಕ್ರಮಣ ತಂತ್ರಗಳನ್ನು ಅಧ್ಯಯನ ಮಾಡಿದರು. ಅದರ ಆಧಾರದ ಮೇಲೆ ‘ಮೊಸೈಕ್’ ವ್ಯವಸ್ಥೆಯನ್ನು ರೂಪಿಸಿದರು. 2007ರಲ್ಲಿ ಐಆರ್ಜಿಸಿ ಕಮಾಂಡರ್-ಇನ್-ಚೀಫ್ ಆದ ನಂತರ ಈ ವ್ಯವಸ್ಥೆಯನ್ನು ದೇಶದಲ್ಲಿ ಸಂಪೂರ್ಣವಾಗಿ ಅಳವಡಿಸಿದರು ಎನ್ನಲಾಗಿದೆ.
ಮೊಸೈಕ್ ಎಂಬುದು ಇರಾನ್ನ ರಕ್ಷಣಾ ವ್ಯವಸ್ಥೆಯನ್ನು ಒಂದೇ ಕೇಂದ್ರೀಕೃತ ಆದೇಶ ಸರಣಿಯ ಬದಲಿಗೆ ಹಲವು ಪ್ರಾದೇಶಿಕ ಮತ್ತು ಸ್ವತಂತ್ರ ಘಟಕಗಳಾಗಿ ವಿಂಗಡಿಸುವ ತಂತ್ರ. ಐಆರ್ಜಿಸಿ, ಸೇನೆ, ಕ್ಷಿಪಣಿ ದಳಗಳು, ನೌಕಾಪಡೆ ಮತ್ತು ಸ್ಥಳೀಯ ಆದೇಶ ವ್ಯವಸ್ಥೆಗಳು ಸೇರಿದಂತೆ ಹಲವು ಘಟಕಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಐಆರ್ಜಿಸಿಯಲ್ಲಿ 31 ಪ್ರಾಂತೀಯ ಘಟಕಗಳಿವೆ. ಪ್ರತಿ ಘಟಕವು ಸ್ವತಂತ್ರವಾದ ಶಸ್ತ್ರಾಸ್ತ್ರ, ಗುಪ್ತಚರ ಮತ್ತು ಆದೇಶ ವ್ಯವಸ್ಥೆ ಹೊಂದಿದೆ. ಯಾವುದೇ ಒಂದು ಘಟಕಕ್ಕೆ ದಾಳಿಯಾದರೂ ಇತರ ಘಟಕಗಳು ಕಾರ್ಯನಿರ್ವಹಿಸುತ್ತವೆ. ಉನ್ನತ ನಾಯಕರು ಸತ್ತರೂ ವ್ಯತ್ಯಾಸವಾಗುವುದಿಲ್ಲ. ಇದೇ ತಂತ್ರ ಇರಾನ್, ಅಮೆರಿಕ-ಇಸ್ರೇಲ್ ಜಂಟಿ ದಾಳಿಗೂ ಜಗ್ಗದಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
‘ನಮ್ಮ ರಕ್ಷಣಾ ತಂತ್ರವು 2 ದಶಕಗಳ ಅಧ್ಯಯನದ ಫಲ. ನಮ್ಮ ಪೂರ್ವ ಮತ್ತು ಪಶ್ಚಿಮದಲ್ಲಿ ಅಮೆರಿಕ ಸೇನೆ ಸೋತಿದ್ದನ್ನು ಅಧ್ಯಯನ ಮಾಡಿ ಅದರ ಪಾಠಗಳನ್ನು ಅಳವಡಿಸಿಕೊಂಡಿದ್ದೇವೆ. ರಾಜಧಾನಿಯಲ್ಲಿ ಬಾಂಬ್ ದಾಳಿ ನಡೆದರೂ ನಮ್ಮ ಯುದ್ಧ ನಡೆಸುವ ಸಾಮರ್ಥ್ಯಕ್ಕೆ ಯಾವುದೇ ಪರಿಣಾಮವಾಗುವುದಿಲ್ಲ. ವಿಕೇಂದ್ರೀಕೃತ ಮೊಸೈಕ್ ರಕ್ಷಣಾ ವ್ಯವಸ್ಥೆಯಿಂದ ಯುದ್ಧ ಯಾವಾಗ ಮತ್ತು ಹೇಗೆ ಕೊನೆಗೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ’ ಎಂದು ಇರಾನ್ನ ವಿದೇಶಾಂಗ ಸಚಿವ ಸಯದ್ ಅಬ್ಬಾಸ್ ಅರಾಗ್ಚಿ, ಖಮೇನಿ ಸಾವಿನ ಬಳಿಕವೂ ಹೇಳಿದ್ದರು. ಅದನ್ನಿಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ