ಪತ್ನಿ ಜೊತೆ ಗಲಾಟೆ ಮಾಡಿ ಶಾಂತವಾಗಲು 450 ಕಿ.ಮೀ. ನಡೆದ ವ್ಯಕ್ತಿ!

Published : Jun 14, 2025, 07:31 PM IST
mountain trekking

ಸಾರಾಂಶ

ಹೆಂಡತಿಯ ಜಗಳದಿಂದ ಮನನೊಂದ ಇಟಲಿ ವ್ಯಕ್ತಿಯೊಬ್ಬ 450 ಕಿ.ಮೀ. ನಡೆದು ಸುದ್ದಿಯಾದರು. ಲಾಕ್‌ಡೌನ್‌ ಉಲ್ಲಂಘನೆಗೆ ದಂಡ ವಿಧಿಸಲಾಯಿತಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹೆಂಡತಿಯೊಂದಿಗೆ ಜಗಳ ಮಾಡಿಕೊಂಡ ಕಾರಣದಿಂದ ಮನಸ್ಸು ತುಂಬಾ ಕೆಟ್ಟಿದ್ದ ಇಟಲಿ ವ್ಯಕ್ತಿಯೊಬ್ಬ, ಮನಸ್ಸು ಶಾಂತಗೊಳಿಸಲು ತಾನೇನೂ ಯೋಚಿಸದೆ ಮನೆ ಬಿಟ್ಟು ಹೊರಬಂದು ನಡೆಯಲು ಆರಂಭಿಸಿ 450 ಕಿಲೋಮೀಟರ್ ದೂರದವರೆಗೆ ನಡೆದು ಹೋಗಿದ್ದಾನೆ!

ಈ ವಿಚಿತ್ರ ಹಾಗೂ ಸ್ಪೂರ್ತಿದಾಯಕ ಘಟನೆಯು ಇಟಲಿಯನ್ನರನ್ನು ಅಚ್ಚರಿ ಪಡಿಸಿದ್ದು, ಈ ವ್ಯಕ್ತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ “ಫಾರೆಸ್ಟ್ ಗಂಪ್” ಎಂದು ನಿಕ್‌ ನೇಮ್‌ ಕೂಡ ಸಿಕ್ಕಿದೆ. 1994ರ ಫಿಲಂ ಫಾರೆಸ್ಟ್ ಗಂಪ್‌ನಲ್ಲಿ ನಾಯಕ ಯುನೈಟೆಡ್ ಸ್ಟೇಟ್ಸ್‌ನ ತುಂಬಾ ಓಡುತ್ತಿದ್ದಂತೆ! ಹೀಗಾಗಿ ಈ ಹೆಸರು ಇಡಲಾಗಿದೆ.

ಇದು 2020ರ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಲಾಕ್‌ ಡೌನ್‌ ಆದಾಗ ನಡೆದ ಘಟನೆ. ಈ ವ್ಯಕ್ತಿಯು ಇಟಲಿಯ ಉತ್ತರ ಭಾಗದ ಕೊಮೊ ಎಂಬ ಊರಿನಲ್ಲಿ ವಾಸವಿದ್ದ, ತನ್ನ ಮನೆಯಿಂದ ಸುಮಾರು 450 ಕಿಮೀ ದೂರದ ಫಾನೊ ಎಂಬ ಕರಾವಳಿ ಪಟ್ಟಣವರೆಗೆ ಪಾದಯಾತ್ರೆ ನಡೆಸಿದ್ದಾನೆ. ಅವನ ದೀರ್ಘ ನಡಿಗೆ 7 ದಿನಗಳವರೆಗೆ ಮುಂದುವರೆದಿದ್ದು, ಪ್ರತಿದಿನ ಸರಾಸರಿ 60 ಕಿಮೀ ನಡೆಯುತ್ತಿದ್ದ.

ದಂಡದ ಜೊತೆಗೆ ಮಾನ್ಯತೆಯೂ ಸಿಕ್ಕಿತು!

ಫಾನೊ ಪಟ್ಟಣದಲ್ಲಿ ಬೆಳಗಿನ ಜಾವ 2 ಗಂಟೆಗೆ ಪೊಲೀಸರು ಈ ವ್ಯಕ್ತಿಯನ್ನು ತಡೆದು ವಿಚಾರಿಸಿದರು. ಅಷ್ಟೆ ಅಲ್ಲ, ಲಾಕ್‌ಡೌನ್ ಕರ್ಫ್ಯೂ ನಿಯಮ ಉಲ್ಲಂಘನೆಯ ಮಾಡಿದ್ದಕ್ಕೆ ಸುಮಾರು ₹35,700 ದಂಡವನ್ನೂ ವಿಧಿಸಿದರು. ಆದರೆ, ಅವರು ತನ್ನನ್ನು ತಾನು ಯಾವುದೇ ವಾಹನ ಬಳಸದೇ ನಡೆದುಕೊಂಡು ಬಂದೆನೆಂದು ತಿಳಿಸಿದಾಗ, ಅಧಿಕಾರಿಗಳು ಹೌಹಾರಿದರು. ತನಿಖೆ ನಡೆಸಿದಾಗ, ಆತನ ಪತ್ನಿಯು ಒಂದು ವಾರದ ಹಿಂದೆ ಗಂಡ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ವರದಿ ಮಾಡಿದ್ದಳು ಎಂಬ ಸಂಗತಿಯೂ ತಿಳಿಯಿತು.

“ನಾನು ಕೇವಲ ಕಾಲ್ನಡಿಗೆಯಲ್ಲೇ ಇಲ್ಲಿ ತಲುಪಿದ್ದೇನೆ. ದಾರಿಯಲ್ಲಿ ಅನೇಕ ಜನರು ನನಗೆ ಆಹಾರ, ಪಾನೀಯ ನೀಡಿ ಸಹಾಯ ಮಾಡಿದ್ದಾರೆ. ನಾನು ಚೆನ್ನಾಗಿದ್ದೇನೆ, ಸ್ವಲ್ಪ ದಣಿದಿದ್ದೇನೆ” ಎಂದು ಪೊಲೀಸರಿಗೆ ಆತ ತಿಳಿಸಿದ್ದ.

ಈ ಘಟನೆ ವೈರಲ್ ಆದ ಬಳಿಕ, ನೆಟಿಜನ್‌ಗಳು ಆ ವ್ಯಕ್ತಿಗೆ ಸೆಲ್ಯೂಟ್‌ ಮಾಡುತ್ತಿದ್ದಾರೆ. “ಅವನಿಗೆ ದಂಡವಲ್ಲ, ಒಂದು ಜೋಡಿ ಶೂಗಳನ್ನು ಬಹುಮಾನವಾಗಿ ಕೊಡಬೇಕಿತ್ತು!” “ಅವನನ್ನು ಕೊಂಡಾಡಬೇಕು. ತನ್ನ ಕೋಪವನ್ನು ಹಿಂಸಾಚಾರವಿಲ್ಲದೇ ಹೊರಹಾಕಿದ್ದಾನೆ” ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ನಡುವೆ, ಆ ಸಮಯದಲ್ಲಿ ಇಟಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಗೊಳಿಸಿರುವುದರಿಂದ, ಈ ನಡಿಗೆ ಕಾನೂನು ಉಲ್ಲಂಘನೆಯಾಗಿದ್ದು, ಸರ್ಕಾರದಿಂದ ದಂಡ ವಿಧಿಸಲಾಯಿತು.

ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಭಾವನೆಗಳನ್ನು ಶಾಂತಿಯುತವಾಗಿ ಸಮಾಧಾನಪಡಿಸಲು ಹೊರಟ ಸಾಹಸ ನಡಿಗೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಿಂದ ಕಲಿಯುವ ಪಾಠವೇನೆಂದರೆ, ಅವಸರ, ಕೋಪದ ನಡುವೆ ಹೆಜ್ಜೆಗಳಲ್ಲೂ ಶಾಂತಿ ಹುಡುಕಬಹುದಾಗಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು