
ದೋಹಾ: ಇತ್ತೀಚೆಗೆ ಕತಾರ್ ಹೊಡೆದುರುಳಿಸಿದ ಇರಾನ್ನ ಬಾಂಬರ್ ವಿಮಾನಗಳು, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆಯ ತೀರಾ ಸಮೀಪಕ್ಕೆ ಬಂದಿದ್ದವು ಎಂಬ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಕತಾರ್ನಲ್ಲಿರುವ ಅಲ್-ಉದೈದ್ ಸೇನಾ ನೆಲೆಯನ್ನು ತಲುಪಲು ಕೇವಲ ಎರಡು ನಿಮಿಷ ಬಾಕಿ ಇರುವಾಗ ಕತಾರ್ ವಾಯುಪಡೆ ಆ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಕತಾರ್ನ ಅಲ್-ಉದೈದ್ ಸೇನಾ ನೆಲೆಯಲ್ಲಿ ಸುಮಾರು 10,000 ಯುಎಸ್ ಸೈನಿಕರಿದ್ದಾರೆ. ಇದು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆ. ಇರಾನ್ನ ಬಾಂಬರ್ಗಳು ಈ ಸೇನಾ ನೆಲೆ ಮತ್ತು ಕತಾರ್ ಆರ್ಥಿಕತೆಯ ಬೆನ್ನೆಲುಬಾಗಿರುವ ರಾಸ್ ಲಫಾನ್ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ಬಂದಿದ್ದವು. ಸೇನಾ ನೆಲೆಯ ಸಮೀಪಕ್ಕೆ ಬಂದಾಗ, ಕತಾರ್ ವಾಯುಪಡೆ ಇವುಗಳನ್ನು ಹೊಡೆದುರುಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸೋಮವಾರ ಬೆಳಗ್ಗೆ ಇರಾನ್, ಸೋವಿಯತ್ ಕಾಲದ ಎರಡು ಸುಖೋಯ್-24 ಟ್ಯಾಕ್ಟಿಕಲ್ ಬಾಂಬರ್ಗಳನ್ನು ಕತಾರ್ನತ್ತ ಕಳುಹಿಸಿತ್ತು. ಇರಾನಿನ ವಿಮಾನಗಳು ತಮ್ಮ ಗುರಿಯಿಂದ ಕೇವಲ ಎರಡು ನಿಮಿಷಗಳಷ್ಟು ದೂರದಲ್ಲಿದ್ದವು. ಯುಎಸ್ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿರುವ ಪ್ರಕಾರ, ಈ ವಿಮಾನಗಳನ್ನು ನೇರವಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ ಬಾಂಬ್ಗಳು ಮತ್ತು ಗೈಡೆಡ್ ಯುದ್ಧ ಸಾಮಗ್ರಿಗಳು ಇದ್ದವು.
ರಾಡಾರ್ ಕಣ್ತಪ್ಪಿಸಲು ಇರಾನ್ನ ಬಾಂಬರ್ಗಳು ಕೇವಲ 80 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದವು. ಕತಾರ್ ಅಧಿಕಾರಿಗಳು ರೇಡಿಯೋ ಮೂಲಕ ಇರಾನ್ ವಿಮಾನಗಳಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಕ್ಷಣವೇ, ಕತಾರ್ ತನ್ನ ಯುದ್ಧ ವಿಮಾನಗಳನ್ನು ಇವುಗಳನ್ನು ಎದುರಿಸಲು ಕಳುಹಿಸಿತು. ಕತಾರ್ನ ಎಫ್-15 ಯುದ್ಧ ವಿಮಾನವೊಂದು ಇವುಗಳನ್ನು ಹೊಡೆದುರುಳಿಸಿತು. ಇರಾನ್ ವಿಮಾನಗಳು ಕತಾರ್ನ ಸಮುದ್ರ ವ್ಯಾಪ್ತಿಯಲ್ಲಿ ಪತನಗೊಂಡಿವೆ ಎಂದು ವರದಿ ತಿಳಿಸಿದೆ.
ಯುಎಸ್ ಜಾಯಿಂಟ್ ಚೀಫ್ ಆಫ್ ಸ್ಟಾಫ್ ಅಧ್ಯಕ್ಷ ಜನರಲ್ ಡಾನ್ ಕೇನ್ ಬುಧವಾರ ಈ ಘಟನೆಯನ್ನು ಖಚಿತಪಡಿಸಿದ್ದಾರೆ. ಆದರೆ, ಇರಾನ್ ಬಾಂಬರ್ಗಳ ನಿಖರ ಗುರಿ ಯಾವುದು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಅಂದೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಕತಾರ್ ಪ್ರಧಾನಿಗೆ ಕರೆ ಮಾಡಿದ್ದರು. ಈ ಫೋನ್ ಸಂಭಾಷಣೆಯಲ್ಲಿ, ಕತಾರ್ ಈ ಘಟನೆಯನ್ನು 'ಪ್ರಚೋದನಕಾರಿ' ಎಂದು ಬಣ್ಣಿಸಿದೆ. "ಸಂಘರ್ಷವನ್ನು ಕಡಿಮೆ ಮಾಡಲು ಅಥವಾ ಪರಿಹಾರ ಕಂಡುಕೊಳ್ಳಲು ಇರಾನ್ಗೆ ನಿಜವಾದ ಆಸಕ್ತಿ ಇಲ್ಲ. ಬದಲಾಗಿ, ನೆರೆಯ ದೇಶಗಳಿಗೆ ತೊಂದರೆ ನೀಡಿ, ಅವರಿಗೆ ಸಂಬಂಧವಿಲ್ಲದ ಯುದ್ಧಕ್ಕೆ ಎಳೆಯಲು ಇರಾನ್ ಪ್ರಯತ್ನಿಸುತ್ತಿದೆ" ಎಂದು ಪ್ರಧಾನಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ