
ಟೊರೊಂಟೊ: ಆಧ್ಯಾತ್ಮಿಕ ಶಕ್ತಿ ಹಾಗೂ ಮಾಟ-ಮಂತ್ರದ ಹೆಸರಿನಲ್ಲಿ ಕೆನಡಾದ ಪ್ರಜೆಯೊಬ್ಬರಿಗೆ ಬರೋಬ್ಬರಿ $800,000 (ಅಂದಾಜು 6.6 ಕೋಟಿ ರೂಪಾಯಿಗೂ ಅಧಿಕ) ವಂಚಿಸಿ, ಭಾರತಕ್ಕೆ ಪಲಾಯನ ಮಾಡಿರುವ 29 ವರ್ಷದ ಭಾರತೀಯ ಅತೀಂದ್ರಿಯ (Psychic) ವಿರುದ್ಧ ಟೊರೊಂಟೊ ಪೊಲೀಸರು ಬಂಧನದ ವಾರಂಟ್ ಹೊರಡಿಸಿದ್ದಾರೆ. ಆರೋಪಿಯನ್ನು ಗಂಗಾಧರ್ ಬಾಬು ಎಂದು ಗುರುತಿಸಲಾಗಿದ್ದು, ಆತ ಕೆನಡಾ ದೇಶವನ್ನು ತೊರೆದು ಭಾರತಕ್ಕೆ ಓಡಿಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಈ ಬೃಹತ್ ವಂಚನೆ ಜಾಲವು ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2025 ರ ನಡುವೆ ನಡೆದಿದೆ. ಈ ಅವಧಿಯಲ್ಲಿ ಆರೋಪಿಯು ತಾನೊಬ್ಬ ಮಹಾನ್ ಆಧ್ಯಾತ್ಮಿಕ ವೈದ್ಯ, ಅತೀಂದ್ರಿಯ ಹಾಗೂ ಭವಿಷ್ಯ ಹೇಳುವವನು ಎಂದು ಬಲಿಪಶುವಿಗೆ ಪರಿಚಯ ಮಾಡಿಕೊಂಡಿದ್ದನು. ಇಂಡಿಯನ್ ಸೈಕಿಕ್ ಅಂಡ್ ಸ್ಪಿರಿಚುವಲ್ ಹೀಲರ್ (Indian Psychic and Spiritual Healer) ಎಂಬ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದ ಈತ, ಅಲೌಕಿಕ ಶಕ್ತಿಗಳ ಮೇಲಿದ್ದ ಗ್ರಾಹಕನ ಗಾಢ ನಂಬಿಕೆಯನ್ನು ತನ್ನ ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಂಡಿದ್ದಾನೆ.
ಆರಂಭದಲ್ಲಿ ಬಲಿಪಶುವಿನ ಸಂಪೂರ್ಣ ವಿಶ್ವಾಸ ಗಳಿಸಿದ ಗಂಗಾಧರ್ ಬಾಬು, ನಂತರದ ದಿನಗಳಲ್ಲಿ ಕಪಟ ಜಾಲ ಹೆಣೆದಿದ್ದಾನೆ. ಬಲಿಪಶು ಮತ್ತು ಆತನ ಕುಟುಂಬ ಸದಸ್ಯರ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವವಿದೆ ಎಂದು ನಂಬಿಸಿದ್ದಾನೆ.
ನೀವು ತಕ್ಷಣವೇ ಆಧ್ಯಾತ್ಮಿಕ ರಕ್ಷಣೆಗಾಗಿ (Spiritual Protection) ಹಣ ಪಾವತಿಸದಿದ್ದರೆ, ನಿಮ್ಮ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಎದುರಾಗಲಿದೆ ಅಥವಾ ನಿವಾರಿಸಲಾಗದ ಭೀಕರ ಹಾನಿ ಸಂಭವಿಸಲಿದೆ ಎಂದು ಆರೋಪಿ ಹೆದರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಭಯಕ್ಕೆ ಹೆದರಿದ ಬಲಿಪಶು, ದೀರ್ಘಕಾಲದವರೆಗೆ ಹಂತಹಂತವಾಗಿ ದೊಡ್ಡ ಮೊತ್ತದ ಹಣವನ್ನು ಆರೋಪಿಯ ಖಾತೆಗೆ ವರ್ಗಾಯಿಸುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ ಇದರ ಮೊತ್ತ $800,000 ದಾಟಿದೆ.
ವಂಚನೆಯ ಅರಿವಾಗುತ್ತಿದ್ದಂತೆಯೇ ಮೋಸ ಹೋದವರು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆರೋಪಿ ಗಂಗಾಧರ್ ಬಾಬು ಕೆನಡಾದಿಂದ ಕಾಲ್ಕಿತ್ತಿದ್ದನು. ಖಾಸಗಿ ಮಾಧ್ಯಮದ ವರದಿಯ ಪ್ರಕಾರ ಪ್ರಸ್ತುತ ಭಾರತದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ನಂಬಲಾಗಿದೆ.
ಟೊರೊಂಟೊ ಪೊಲೀಸ್ ಸೇವೆಯು (Toronto Police Service) ಗಂಗಾಧರ್ ಬಾಬು ವಿರುದ್ಧ ಕಟ್ಟುನಿಟ್ಟಿನ ಬಂಧನ ವಾರಂಟ್ ಹೊರಡಿಸಿದ್ದು, ಆತನ ಮೇಲೆ ಈ ಕೆಳಗಿನ ಗಂಭೀರ ಅಪರಾಧಗಳಡಿ ಪ್ರಕರಣ ದಾಖಲಿಸಿದೆ. $5,000 ಕ್ಕಿಂತ ಹೆಚ್ಚಿನ ಮೊತ್ತದ ವಂಚನೆ (Fraud Over $5,000). ಅಪರಾಧದ ಮೂಲಕ ಗಳಿಸಿದ $5,000 ಕ್ಕಿಂತ ಹೆಚ್ಚಿನ ಹಣವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವುದು. ಕೆನಡಾದ ಅಪರಾಧದ ಹಣವನ್ನು ಕಾನೂನುಬಾಹಿರವಾಗಿ ದೇಶದ ಹೊರಗೆ ವರ್ಗಾಯಿಸುವುದು.
ಆರೋಪಿಯನ್ನು ಪತ್ತೆಹಚ್ಚುವ ಪ್ರಯತ್ನದ ಭಾಗವಾಗಿ ಪೊಲೀಸರು ಆತನ ಛಾಯಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಆತನ ದೈಹಿಕ ಗುರುತುಗಳ ವಿವರ ನೀಡಿದ್ದು, ಬಾಬು ಸುಮಾರು 5 ಅಡಿ 6 ಇಂಚು ಎತ್ತರವಿದ್ದು, ತೆಳ್ಳಗಿನ ಮೈಕಟ್ಟು ಹೊಂದಿದ್ದಾನೆ. ಕಪ್ಪು ಗುಂಗುರು ಕೂದಲು, ಗಾಢ ಕಂದು ಬಣ್ಣದ ಕಣ್ಣುಗಳು ಹಾಗೂ ಕತ್ತರಿಸಿದ ಗಡ್ಡವನ್ನು ಹೊಂದಿರುವ ಆತನ ಮುಂಭಾಗದ ಹಲ್ಲುಗಳ ನಡುವೆ ಗಮನಾರ್ಹವಾದ ಅಂತರವಿದೆ.
ಆರೋಪಿ ಗಂಗಾಧರ್ ಬಾಬು ಇದೇ ರೀತಿಯ ತಂತ್ರವನ್ನು ಬಳಸಿ ಇನ್ನೂ ಹಲವು ಅಮಾಯಕರನ್ನು ಗುರಿಯಾಗಿಸಿಕೊಂಡಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ. ಆಧ್ಯಾತ್ಮಿಕತೆ ಅಥವಾ ಭವಿಷ್ಯ ಹೇಳುವ ನೆಪದಲ್ಲಿ ಈ ಹಿಂದೆ ಯಾರಾದರೂ ಈತನಿಂದ ಮೋಸ ಹೋಗಿದ್ದರೆ ಅಥವಾ ಇದೇ ರೀತಿಯ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ಮುಂದೆ ಬಂದು ಟೊರೊಂಟೊ ಪೊಲೀಸ್ ತನಿಖಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಸಾರ್ವಜನಿಕರು ನೀಡುವ ಇಂತಹ ಮಾಹಿತಿಗಳು ಆರೋಪಿಯನ್ನು ಪತ್ತೆಹಚ್ಚಲು ಮತ್ತು ನಡೆಯುತ್ತಿರುವ ಅಂತರರಾಷ್ಟ್ರೀಯ ಮಟ್ಟದ ತನಿಖೆಗೆ ಮಹತ್ತರವಾದ ನೆರವು ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ