
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಈ ಭೇಟಿಯು ಜಾಗತಿಕ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ. ವಾಷಿಂಗ್ಟನ್ (ಅಮೆರಿಕ) ಮತ್ತು ಬೀಜಿಂಗ್ (ಚೀನಾ) ದೇಶಗಳು ನವದೆಹಲಿಯ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ, ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಹಾಗೂ ರಹಸ್ಯ ಸಂದೇಶವನ್ನು ಪುಟಿನ್ ಅವರಿಗೆ ತಲುಪಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ಭಾರತವನ್ನು ರಷ್ಯಾದಿಂದ ದೂರವಿಡಲು ಒತ್ತಡ ಹೇರುತ್ತಿದ್ದರೆ, ಚೀನಾ ತನ್ನದೇ ಆದ ಕಾರ್ಯಸೂಚಿಯೊಂದಿಗೆ ಜಾಗತಿಕ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ಭಾರತವು ತನ್ನ 3D ತಂತ್ರ ಅಂದರೆ ರಷ್ಯಾ, ಚೀನಾ ಮತ್ತು ಅಮೆರಿಕ ಎಂಬ ಮೂರು ಪ್ರಮುಖ ಶಕ್ತಿಗಳನ್ನು ಸಮತೋಲನದಲ್ಲಿಡುವ ವಿದೇಶಾಂಗ ನೀತಿಯನ್ನು ಪ್ರದರ್ಶಿಸಿದೆ. ಭಾರತದ ಸಂದೇಶ ಸ್ಪಷ್ಟವಾಗಿದೆ. ಯಾವುದೇ ಬಣಕ್ಕೆ ಸೇರುವುದಿಲ್ಲ, ರಾಷ್ಟ್ರೀಯ ಹಿತಾಸಕ್ತಿಯೇ ನಮಗೆ ಮುಖ್ಯ.
ರಷ್ಯಾ; ದೇಶದ ಅಗತ್ಯಕ್ಕಾಗಿ ಅಗ್ಗದ ತೈಲ ಮತ್ತು ರಸಗೊಬ್ಬರ ಪಡೆಯುವುದು.
ಅಮೆರಿಕ; ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಒಪ್ಪಂದಗಳನ್ನು ಮುಂದುವರಿಸುವುದು.
ಚೀನಾ; SCO ನಂತಹ ಜಾಗತಿಕ ವೇದಿಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು.
ಸಭೆಯ ಪ್ರಮುಖ ವಿಷಯವೆಂದರೆ ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು.
ಇಂಧನ ಮತ್ತು ರಸಗೊಬ್ಬರ; ಭಾರತಕ್ಕೆ ಅಗತ್ಯವಿರುವ ರಸಗೊಬ್ಬರ ಮತ್ತು ಇಂಧನ ಸರಬರಾಜನ್ನು ನಿರಂತರವಾಗಿ ಹೆಚ್ಚಿಸಲು ರಷ್ಯಾ ಬದ್ಧತೆ ವ್ಯಕ್ತಪಡಿಸಿದೆ. ಕೃಷಿ, ವ್ಯಾಪಾರ ಮತ್ತು ಪರಮಾಣು ಇಂಧನ ಕ್ಷೇತ್ರದಲ್ಲಿ ಸಹಕಾರ ಹೊಸ ಎತ್ತರಕ್ಕೆ ತಲುಪುತ್ತಿದೆ.
ವ್ಯಾಪಾರ ಸಮತೋಲನ; ರಷ್ಯಾದ ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಅವರೊಂದಿಗಿನ ಚರ್ಚೆಯ ನಂತರ, ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಸಮತೋಲನಗೊಳಿಸಲು ಕಾಂಕ್ರೀಟ್ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗುತ್ತಿದೆ.
ಪ್ರಧಾನಿ ಮೋದಿಯವರ ವೈಯಕ್ತಿಕ ಸಂದೇಶ!
ಜೈಶಂಕರ್ ಅವರು ಪ್ರಧಾನಿ ಮೋದಿಯವರ ವಿಶೇಷ ಸಂದೇಶವನ್ನು ಪುಟಿನ್ ಅವರಿಗೆ ಹಸ್ತಾಂತರಿಸಿದರು.
ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯ ವೇಳೆಯಲ್ಲಿ ಪುಟಿನ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಮೋದಿ ಉತ್ಸುಕರಾಗಿದ್ದಾರೆ ಎಂದು ತಿಳಿಸಲಾಯಿತು.
ಮುಂಬರುವ BRICS ಶೃಂಗಸಭೆ ಮತ್ತು ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗಾಗಿ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ದಿನಾಂಕಗಳನ್ನು ಅಂತಿಮಗೊಳಿಸುವ ಕುರಿತು ಚರ್ಚಿಸಲಾಯಿತು.
ಜಾಗತಿಕವಾಗಿ ಎಷ್ಟೇ ಕಷ್ಟಕರ ವಾತಾವರಣವಿದ್ದರೂ, ಭಾರತ ಮತ್ತು ರಷ್ಯಾ ನಡುವಿನ ಭಾಂಧವ್ಯವು ತನ್ನ ಸ್ಥಿರತೆ ಮತ್ತು ಆಳವನ್ನು ಸಾಬೀತುಪಡಿಸಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತದ ಈ "3D ರಾಜತಾಂತ್ರಿಕತೆ" ವಿಶ್ವದಲ್ಲೇ ಅತ್ಯಂತ ಪ್ರಬುದ್ಧ ವಿದೇಶಾಂಗ ನೀತಿ ಎಂಬುದನ್ನು ಈ ಮಾಸ್ಕೋ ಸಭೆ ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ