
ಢಾಕಾ: ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಪ್ರಯೋಗಿಸಿ ಯಶಸ್ವಿಯಾಗಿರುವ ಭರಪೂರ ಗ್ಯಾರಂಟಿ ಯೋಜನೆಗಳಿಗೆ ಇದೀಗ ಬಾಂಗ್ಲಾದೇಶವೂ ಮೊರೆ ಹೋಗಿದೆ.
ಸಾರ್ವತ್ರಿಕ ಚುನಾವಣೆಗೆ ಇನ್ನೇನು 2 ದಿನ ಬಾಕಿ ಇರುವಾಗಲೇ ಕರ್ನಾಟಕದ ಜನಪ್ರಿಯ ಗೃಹಲಕ್ಷ್ಮೀ ಯೋಜನೆ, ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆ ಹಾಗೂ ಕೇಂದ್ರದ ಆಯುಷ್ಮಾನ್ ಭಾರತ್ದಂತಹ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಎನ್ಪಿ ಮತ್ತು ಜಮಾತ್-ಎ-ಇಸ್ಲಾಮಿ ಭರವಸೆ ನೀಡಿವೆ.
ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರು. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಬಾಂಗ್ಲಾದ ಬಿಎನ್ಪಿ ಪಕ್ಷವು ಇದೇ ರೀತಿಯ ಯೋಜನೆ ಭರವಸೆ ನೀಡಿದ್ದು, ಮಹಿಳೆಯರಿಗೆ ಮಾಸಿಕ 2,000 ರು. ನೀಡುವ ‘ಕುಟುಂಬ ಕಾರ್ಡ್’ ನೀಡುವುದಾಗಿ ಘೋಷಿಸಿದೆ. ಇದರ ಮೂಲಕ ಅಕ್ಕಿ, ಧಾನ್ಯ, ಅಡುಗೆ ಎಣ್ಣೆ ಮತ್ತು ಉಪ್ಪನ್ನೂ ಪಡೆಯಬಹುದಾಗಿದೆ. ಮಹಿಳೆಯರಿಗೆ ನೇರವಾಗಿ ನಗದು ವರ್ಗಾವಣೆ ಮಾಡುವ ಗೃಹಲಕ್ಷ್ಮೀ, ಮಧ್ಯಪ್ರದೇಶದ ಲಾಡ್ಲಿ ಬಹ್ನಾ ಮತ್ತು ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆಗಳು ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಗಮನಾರ್ಹ.
ಬಾಂಗ್ಲಾದ ಜಮಾತ್ ಪಕ್ಷ ನಮ್ಮ ಆಯುಷ್ಮಾನ್ ಭಾರತ್ ಯೋಜನೆಯನ್ನೇ ಹೋಲುವ ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರ, ಬಡ ಕುಟುಂಬಗಳಿಗೆ ಪ್ರತಿವರ್ಷ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ಒದಗಿಸುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಕೈಗೆಟುಕುವ ವಸತಿ ಯೋಜನೆಯನ್ನು ಸಹ ಜಮಾತ್ ಘೋಷಣೆ ಮಾಡಿದೆ.
ಮಹಿಳಾ ಸಮೃದ್ಧಿ, ಕಿಸಾನ್ ಕ್ರೆಡಿಟ್ ಕಾರ್ಡ್ ಕಾಪಿ:
ಭಾರತದ ಮಹಿಳಾ ಸಮೃದ್ಧಿ ಯೋಜನೆಯಂತೆಯೇ, ಬಿಎನ್ಪಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗಾಗಿ ಮೈಕ್ರೋ-ಫೈನಾನ್ಸ್ ಯೋಜನೆಯನ್ನು ಘೋಷಿಸಿದೆ. ಇದು ಕೌಶಲ್ಯ ತರಬೇತಿ ಮತ್ತು ಆದಾಯ ಗಳಿಕೆಯ ಮೇಲೆ ಕೇಂದ್ರೀಕರಿಸುತ್ತದೆ. ಭಾರತವು ಕಿಸಾನ್ ಕ್ರೆಡಿಟ್ ಕಾರ್ಡ್ ಜಾರಿಗೊಳಿಸಿದ್ದರೆ, ಬಿಎನ್ಪಿ ‘ರೈತ ಕಾರ್ಡ್’ನ ಭರವಸೆ ನೀಡಿದೆ. ಇದು ರೈತರಿಗೆ ಸಾಲ, ಸಬ್ಸಿಡಿ ಮತ್ತು ಕೃಷಿ ವಿಮೆ ಒದಗಿಸುತ್ತದೆ.
ಬಿಸಿಯೂಟದ ಭರವಸೆ:
ಬಿಎನ್ಪಿಯು ಭಾರತ ಜಾರಿಗೊಳಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಿಂದ ಪ್ರಭಾವಿತವಾದಂತಿದೆ. ಭಾರತದ 11.2 ಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 11.8 ಕೋಟಿಗೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಒದಗಿಸಲಾಗುತ್ತಿದೆ. ಬಿಎನ್ಪಿ ಅಧಿಕಾರಕ್ಕೆ ಬಂದರೆ ಅಂತಹ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.
- ಶೇಖ್ ಹಸೀನಾ ಪದಚ್ಯುತಿಯಾದ 1.5 ವರ್ಷ ಬಳಿಕ ಬಾಂಗ್ಲಾದಲ್ಲಿ ನಾಳೆ ಸಾರ್ವತ್ರಿಕ ಚುನಾವಣೆ
- ಮತದಾರರನ್ನು ಸೆಳೆಯಲು ಗ್ಯಾರಂಟಿ ಮಾದರಿ ಸ್ಕೀಂ ಮೊರೆ ಹೋಗಿರುವ ರಾಜಕೀಯ ಪಕ್ಷಗಳು
- ಬಿಎನ್ಪಿ- ಜಮಾತ್ ಎ ಇಸ್ಲಾಮಿ ಪಕ್ಷಗಳ ನಡುವೆ ಪೈಪೋಟಿ. ಹಲವು ಫ್ರೀ ಸ್ಕೀಂಗಳ ಪ್ರಕಟಣೆ
- ಬಿಎನ್ಪಿ ಪಕ್ಷದಿಂದ ಮಹಿಳೆಯರಿಗೆ ಮಾಸಿಕ 2000 ರು. ನೆರವು ನೀಡುವ ಸ್ಕೀಂ ಘೋಷಣೆ
- ಜಮಾತೇ ಪಕ್ಷದಿಂದ ಉಚಿತ ಚಿಕಿತ್ಸೆ, ಆಯುಷ್ಮಾನ್ ಭಾರತ ಮಾದರಿ ಸ್ಕೀಂ ಬಗ್ಗೆ ಭರವಸೆ
- ಭಾರತದ ಮಹಿಳಾ ಸಮೃದ್ಧಿ, ಕಿಸಾನ್ ಕಾರ್ಡ್ ಯೋಜನೆಗಳನ್ನೂ ಕಾಪಿ ಹೊಡೆದ ಪಕ್ಷಗಳು
- ಭಾರತದ ಮಾದರಿಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಜಾರಿಗೊಳಿಸುವುದಾಗಿ ಪ್ರಣಾಳಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ