ಸುಡುತ್ತಿದೆ ಭೂಮಿ.. ಕುದಿಯುತ್ತಿದೆ ಸಾಗರ..! ಗ್ಲೋಬಲ್ ವಾರ್ಮಿಂಗ್ ಬಗ್ಗೆ ಆ ಶಾಕಿಂಗ್ ವರದಿಯಲ್ಲೇನಿದೆ?

Published : Sep 10, 2026, 03:21 PM IST
Global temperature rise report

ಸಾರಾಂಶ

ಯುರೋಪಿಯನ್ ಒಕ್ಕೂಟದ ಕ್ಲೈಮೇಟ್ ಮಾನಿಟರಿಂಗ್ ವರದಿಯ ಪ್ರಕಾರ, ಭೂಮಿಯ ತಾಪಮಾನವು ಕಳೆದ 12 ತಿಂಗಳುಗಳಲ್ಲಿ ಕೈಗಾರಿಕಾ-ಪೂರ್ವ ಮಟ್ಟಕ್ಕಿಂತ 1.48°C ಹೆಚ್ಚಾಗಿದೆ. ಈ ದಾಖಲೆಯ ಏರಿಕೆಯು ಭೂಮಿ ಮತ್ತು ಸಾಗರಗಳೆರಡನ್ನೂ ಬಿಸಿಮಾಡಿದ್ದು, ಬರ ಮತ್ತು ಪ್ರವಾಹದಂತಹ ತೀವ್ರ ಹವಾಮಾನ ಘಟನೆಗಳಿಗೆ ಕಾರಣವಾಗಿದೆ.

ಭೂಮಿಯ ತಾಪಮಾನ ದಿನೇದಿನೆ ಏರಿಕೆಯಾಗುತ್ತಲೇ ಇದ್ದು ಇದೀಗ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ತಾಪಮಾನ ಕಳೆದ ಆಗಸ್ಟ್‌ ತಿಂಗಳಲ್ಲಿ ದಾಖಲಾಗಿದೆ. ಇದು ಕೇವಲ ಒಂದು ತಿಂಗಳ ಕಥೆಯಲ್ಲ ಬದಲಾಗಿ ಒಂದು ವರ್ಷದಿಂದ ಭೂಮಿ ನಿರಂತರವಾಗಿ ಬಿಸಿ ಆಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಯುರೋಪಿಯನ್ ಕ್ಲೈಮೇಟ್ ಮಾನಿಟರಿಂಗ್ ವರದಿ ಶಾಕ್

ಭೂಮಿಯ ತಾಪಮಾನ ಏರಿಕೆ ಕುರಿತಂತೆ ಯುರೋಪಿಯನ್ ಒಕ್ಕೂಟದ ಕ್ಲೈಮೇಟ್ ಮಾನಿಟರಿಂಗ್ ಸರ್ವಿಸ್ (European Union's climate monitoring service)ಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 2025 ರಿಂದ ಆಗಸ್ಟ್ 2026ರವರೆಗಿನ 12 ತಿಂಗಳ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನವು ಕೈಗಾರಿಕಾ-ಪೂರ್ವದ (1850-1900) ಸರಾಸರಿಗಿಂತ 1.48°C ನಷ್ಟು ಹೆಚ್ಚಾಗಿದೆ. ವಿಜ್ಞಾನಿಗಳು ಎಚ್ಚರಿಸುತ್ತಿರುವ 1.5°C ಮಿತಿಗೆ ನಾವು ಕೇವಲ ಕೂದಲೆಳೆಯ ಅಂತರದಲ್ಲಿದ್ದೇವೆ ಎನ್ನುವುದನ್ನು ಈ ಸಂಖ್ಯೆಗಳು ತೋರಿಸುತ್ತವೆ. ಪರಿಸ್ಥಿತಿ ಕೈಮೀರುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?

ಒಂದು ಕಡೆ ಭೂಮಿ, ಇನ್ನೊಂದ್ಕಡೆ ಸಾಗರ ಎರಡೂ ಬಿಸಿ!

ಈ ತಾಪಮಾನ ಏರಿಕೆಯ ಪರಿಣಾಮ ಕೇವಲ ಭೂಮಿಯ ಮೇಲ್ಮೈಗೆ ಸೀಮಿತವಾಗಿಲ್ಲ. ಭೂಮಿಯ ಶ್ವಾಸಕೋಶಗಳೆಂದೇ ಕರೆಯಲ್ಪಡುವ ಸಾಗರಗಳ ತಾಪಮಾನವೂ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ವಾತಾವರಣದಲ್ಲಿನ ಹೆಚ್ಚುವರಿ ಶಾಖವನ್ನು ಹೀರಿಕೊಳ್ಳುವ ಸಾಗರಗಳು ಇದೀಗ ತಾವೇ ಕುದಿಯುವ ಹಂತಕ್ಕೆ ತಲುಪಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಇದೀಗ ದಾಖಲೆ ಸೃಷ್ಟಿಸಿದ ತಾಪಮಾನವು ಕೇವಲ ಅಂಕಿಅಂಶವಲ್ಲ, ಬದಲಾಗಿ ವಿಶ್ವಾದ್ಯಂತ ಬರ, ಪ್ರವಾಹ, ಕಾಡ್ಗಿಚ್ಚು ಮತ್ತು ಚಂಡಮಾರುತಗಳಂತಹ ತೀವ್ರ ಹವಾಮಾನ ಘಟನೆಗಳಿಗೆ ನೇರ ಕಾರಣವಾಗಿದೆ. ಈ ವರದಿಯು ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಸಿದೆ.

ಆತಂಕಕಾರಿ ಅಂಕಿ-ಅಂಶಗಳು

ಯುರೋಪಿಯನ್ ಒಕ್ಕೂಟದ ಹವಾಮಾನ ಸೇವೆಯು ಈ ವರದಿಯನ್ನು ಸಿದ್ಧಪಡಿಸಿದ್ದು, ಇದು ಅತ್ಯಂತ ನಿಖರವಾದ ಮತ್ತು ವಿಶ್ವಾಸಾರ್ಹ ದತ್ತಾಂಶಗಳನ್ನು ಆಧರಿಸಿದೆ. 1850-1900ರ ಅವಧಿಯನ್ನು ಮಾನವ ಚಟುವಟಿಕೆಗಳಿಂದ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರುವ ಮುಂಚಿನ ಕಾಲಘಟ್ಟವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಹೋಲಿಸಿದರೆ ಈಗಿನ 1.48°C ಹೆಚ್ಚಳವು ಕಳೆದ 150 ವರ್ಷಗಳಲ್ಲಿ ನಾವು ಭೂಮಿಗೆ ಎಷ್ಟು ಹಾನಿ ಮಾಡಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಯಸ್ಸು ಕೇವಲ ಸಂಖ್ಯೆ ಅಷ್ಟೇ: AI ಬಳಸಿ ವನ್ಯಜೀವಿ ರಕ್ಷಣಾ ಅಪ್ಲಿಕೇಶನ್ ನಿರ್ಮಿಸಿದ ಕೆನಡಾದ 8 ವರ್ಷದ ಬಾಲಕ!
Artemis II mission: ಚಂದ್ರನ ಸುತ್ತು ಹಾಕಿ ಬಂದಿದ್ದ ನಾಸಾದ ಇಬ್ಬರು ಗಗನಯಾತ್ರಿಗಳು ನಿವೃತ್ತಿ