
ಕೈರೋ(ಏ.15): ಕಳೆದ ತಿಂಗಳು ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದ ಎವರ್ ಗ್ರೀನ್ ಸರಕು ಸಾಗಣೆ ಹಡಗಿನಿಂದ ಉಂಟಾದ ಆರ್ಥಿಕ ನಷ್ಟವನ್ನು ಯಾರು ತುಂಬಿಕೊಡಬೇಕು ಎಂಬ ಕುರಿತಾದ ವಿವಾದ ಸೃಷ್ಟಿಯಾಗಿದೆ. ಸೂಯೆಜ್ ಕಾಲುವೆಯಿಂದ ಹಡಗನ್ನು ತೆರವುಗೊಳಿಸಿ ಎರಡು ವಾರಗಳು ಕಳೆದಿದ್ದರೂ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಈಜಿಪ್ಟ್ ಅಧಿಕಾರಿಗಳು ಹಡಗನ್ನು ಜಪ್ತಿ ಮಾಡಿದ್ದಾರೆ. ಹಡಗಿನಲ್ಲಿದ್ದ 20ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿಗಳೂ ಇದೀಗ ಈಜಿಪ್ಟ್ ಅಧಿಕಾರಿಗಳ ವಶದಲ್ಲಿದ್ದಾರೆ.
ಇದೇ ವೇಳೆ ಹಡಗಿನ ಮಾಲಿಕರಾದ ಜಪಾನ್ ಮೂಲದ ಶೋಯಿ ಕಿಸೆನ್ ಕೈಶಾ ಕಂಪನಿಯ ಮುಖ್ಯಸ್ಥರಿಗೆ ಈಜಿಪ್ಟ್ ಬರೋಬ್ಬರಿ 6,750 ಕೋಟಿ ರು. ದಂಡ ಪಾವತಿ ಮಾಡುವಂತೆ ಸೂಚಿಸಿದೆ. ಇದರಲ್ಲಿ ನಿರ್ವಹಣಾ ವೆಚ್ಚ, ಕಾಲುವೆ ಬಳಕೆ ವೆಚ್ಚ, ಅಂತಾರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆಯ ವೆಚ್ಚವೂ ಸೇರಿದೆ. ಆದರೆ, ಭಾರೀ ಪ್ರಮಾಣದ ಪರಿಹಾರ ನೀಡಿರುವುದಕ್ಕೆ ವಿಮಾ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಬಿಲ್ ಪಾವತಿ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹಡಗನ್ನು ಈ ಈಜಿಪ್ಟ್ ಸರ್ಕಾರ ಜಪ್ತಿ ಮಾಡಿದೆ. ಈ ಮಧ್ಯೆ ಬಿಲ್ ಪಾವತಿಗೆ ವಿಮಾ ಕಂಪನಿಗಳು ಮತ್ತು ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಡಗಿನ ಮಾಲಿಕರು ತಿಳಿಸಿದ್ದಾರೆ.
ಒಂದು ವಾರಗಳ ಕಾಲ ಸೂಯೆಜ್ ಕಾಲುವೆಗೆ ಅಡ್ಡಲಾಗಿ ನಿಂತಿದ್ದ ಹಡಗನ್ನು ಮಾ.29ರಂದು ತೆರವುಗೊಳಿಸಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಂಡಲಾಗಿತ್ತು. ಸೂಯೆಜ್ ಕಾಲುವೆಯ ಸ್ಥಗಿತಗೊಂಡಿದ್ದರಿಂದ ಎರಡೂ ಕಡೆಗಳಲ್ಲಿ 400ಕ್ಕೂ ಹೆಚ್ಚು ಹಡಗುಗಳು ನಿಂತಲ್ಲೇ ನಿಂತಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ