
ನವದೆಹಲಿ/ಬೀಜಿಂಗ್: ಭಾರತ ಮತ್ತು ಚೀನಾ ಸಂಬಂಧ ಹಳಸಲು ಕಾರಣವಾಗಿದ್ದ 2020ರ ಗಲ್ವಾನ್ ಸಂಘರ್ಷವನ್ನು ಕಥಾವಸ್ತುವಾಗಿಟ್ಟುಕೊಂಡು ‘ಬ್ಯಾಟಲ್ ಆಫ್ ಗಲ್ವಾನ್’ ಎಂಬ ಚಿತ್ರ ನಿರ್ಮಿಸಲಾಗುತ್ತಿದೆ. ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗ ಬಿಡುಗಡೆ ಆಗಿದ್ದು, ಚೀನಾ ಕೆಂಗಣ್ಣಿಗೆ ಗುರಿಯಾಗಿದೆ.
ಅಪೂರ್ವಾ ಲಾಖಿಯಾ ನಿರ್ದೇಶನದ ಸಿನಿಮಾದಲ್ಲಿ ಸಲ್ಮಾನ್ ಅವರು, ಚೀನಾ ಸೇನೆ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾದ ‘16 ಬಿಹಾರ ರೆಜಿಮೆಂಟ್’ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಚಿತ್ರಾಂಗದಾ ಸಿಂಗ್, ಝೆನ್ ಶಾ, ಅಂಕುರ್ ಭಾಟಿಯಾ, ವಿಪಿನ್ ಭಾರದ್ವಾಜ್ ಕೂಡ ಬಣ್ಣ ಹಚ್ಚಿದ್ದಾರೆ.
‘ಬ್ಯಾಟಲ್ ಆಫ್ ಗಲ್ವಾನ್’ ಬಗ್ಗೆ ಚೀನಾ ಅಪಸ್ವರವೆತ್ತಿದ್ದು, ‘ಇದು ಸತ್ಯಕ್ಕೆ ದೂರವಾದ ಕತೆ’ ಎಂದಿದೆ. ಈ ಬಗ್ಗೆ ಅಲ್ಲಿನ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ನಲ್ಲಿ ವರದಿ ಪ್ರಕಟಿಸಿದೆ.
‘ಬಾಲಿವುಡ್ ಸಿನಿಮಾಗಳು ಮನರಂಜನೆಗಾಗಿ ಮತ್ತು ಭಾವನಾತ್ಮಕವಾಗಿ ಇರುತ್ತವೆ. ಆದರೆ ಹೀಗೆ ಮಾಡುವುದರಿಂದ ಇತಿಹಾಸವನ್ನು ಬದಲಿಸಲು ಅಥವಾ ನಮ್ಮ ಭೂಪ್ರದೇಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಸೇನೆಯ ದೃಢಸಂಕಲ್ಪವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸಂಘರ್ಷದಲ್ಲಿ ಯೋಧ ಬಾಬು ಅವರ ತ್ಯಾಗ ಅಷ್ಟೇನೂ ಮಹತ್ವದಲ್ಲ. ಚಿತ್ರದಲ್ಲಿ ಸಾವಿನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ತೋರಿಸಲಾಗಿದೆ. ರಾಷ್ಟ್ರೀಯತಾವಾದಿ ಭಾವನೆಯನ್ನು ಕೆರಳಿಸಲು ಭಾರತವು ಸಿನಿಮಾಗಳನ್ನು ಬಳಸುತ್ತದೆ’ ಎಂದು ಹೇಳಲಾಗಿದೆ. ಜತೆಗೆ, ಗಲ್ವಾನ್ ಕಣಿವೆಯು ಚೀನಾಗೆ ಸೇರಿದ್ದೆಂದೂ ಅದರಲ್ಲಿ ಬರೆಯಲಾಗಿದೆ.
ಚೀನಾದ ಹೇಳಿಕೆಯನ್ನು ಭಾರತ ಸರ್ಕಾರದ ಮೂಲಗಳು ಸಾರಾಸಗಟಾಗಿ ತಳ್ಳಿಹಾಕಿವೆ.‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಜತೆಗೆ ಕಲಾತ್ಮಕ ಸ್ವಾತಂತ್ರ್ಯವೂ ಇದೆ. ಇದರಡಿಯಲ್ಲಿ ನಿರ್ಮಾಪಕರು ಚಲನಚಿತ್ರಗಳನ್ನು ನಿರ್ಮಿಸಲು ಸ್ವತಂತ್ರರು. ಇದರಲ್ಲಿ ಯಾರಿಗಾದರೂ ಸಮಸ್ಯೆಯಿದ್ದಲ್ಲಿ, ಸ್ಪಷ್ಟನೆಗಾಗಿ ರಕ್ಷಣಾ ಇಲಾಖೆಯನ್ನು ಸಂಪರ್ಕಿಸಬಹುದು’ ಎಂದಿದೆ. ಜತೆಗೆ, ಈ ಚಿತ್ರದಲ್ಲಿ ಸರ್ಕಾರದ ಪಾತ್ರವಿಲ್ಲ’ ಎಂದು ಹೇಳಿವೆ.
ಈ ಬಗ್ಗೆ ನಿರ್ಮಾಪಕ ಅಶೋಕ್ ಪಂಡಿತ್ ಅವರು ಮಾತನಾಡಿ, ‘ಭಾರತೀಯ ಸಿನಿಮಾಗಳು ಯಾವಾಗಲೂ ವೈರಿರಾಷ್ಟ್ರದ ಬಂಡವಾಳವನ್ನು ಬಯಲುಮಾಡುತ್ತವೆ. ನಾವು ಹಾಗೆ ಮಾಡಿದಾಗ ಎದುರಾಳಿಗೆ ಅಳುಕು ಆರಂಭವಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ