
ನವದೆಹಲಿ (ಜು.3): ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು "ಶರಣಾಗತಿ ಎಂಬ ಪದ ಪಾಕಿಸ್ತಾನದ ನಿಘಂಟಿನಲ್ಲಿಲ್ಲ" ಎಂದು ಹೇಳಿದ್ದು ಈಗ ಸಾಕಷ್ಟು ಟ್ರೋಲ್ ಆಗಿದೆ. ಈ ಹೇಳಿಕೆಯನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರು ಪಾಕಿಸ್ತಾನ ಹಾಗೂ ಬಿಲಾವಲ್ ಭುಟ್ಟೋನನ್ನು ಭರ್ಜರಿಯಾಗಿ ಟ್ರೋಲ್ ಮಾಡಿದ್ದಾರೆ. ನಿರೀಕ್ಷೆಯಂತೆಯೇ ಹೆಚ್ಚಿನವರು ಬೆನ್ಜೀರ್ ಭುಟ್ಟೋ ಪುತ್ರನಿಗೆ 1971ರಲ್ಲಿ ಪಾಕಿಸ್ತಾನದ ಸೈನ್ಯ ಭಾರತದ ಸೈನ್ಯಕ್ಕೆ ಶರಣಾದ ಚಿತ್ರವನ್ನು ನೆನಪಿಸಿದ್ದಾರೆ.
ಬುಧವಾರ ಇಸ್ಲಾಮಾಬಾದ್ನಲ್ಲಿ ನಡೆದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನದ ಬದ್ಧತೆಯನ್ನು ಪುನರುಚ್ಚರಿಸಿದ ಬಿಲಾವಲ್ ಭುಟ್ಟೋ, "ಶರಣಾಗತಿ ಎಂಬ ಪದ ಪಾಕಿಸ್ತಾನದ ನಿಘಂಟಿನಲ್ಲಿಲ್ಲ" ಎಂದು ಹೇಳಿದರು.
ಪಾಕಿಸ್ತಾನ ಮೂಲದ ARY ನ್ಯೂಸ್ ಪ್ರಕಾರ, ಭಯೋತ್ಪಾದನೆಯನ್ನು ಕೊನೆಗೊಳಿಸಲು ಸಾಮೂಹಿಕ ಜಾಗತಿಕ ಪ್ರಯತ್ನಕ್ಕೆ ಭುಟ್ಟೋ ಕರೆ ನೀಡಿದರು, ಭಯೋತ್ಪಾದಕರಿಗೆ ಯಾವುದೇ ರಾಷ್ಟ್ರೀಯತೆ, ಧರ್ಮ, ಜಾತಿ ಅಥವಾ ಪಂಥವಿಲ್ಲ ಎಂದು ಹೇಳಿದರು. ಭಾರತದೊಂದಿಗಿನ ಉದ್ವಿಗ್ನತೆಯ ಕುರಿತು ಮಾತನಾಡಿದ ಮಾಜಿ ವಿದೇಶಾಂಗ ಸಚಿವರು, ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಕಾಶ್ಮೀರಿ ಜನರ ಆಶಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಪರಿಹರಿಸಬೇಕಾಗಿದೆ ಎಂದು ಹೇಳಿದರು. ಅವರು ಸಿಂಧೂ ಜಲ ಒಪ್ಪಂದದ ಬಗ್ಗೆಯೂ ಪ್ರತಿಕ್ರಿಯಿಸಿದರು.
ಈ ನಡುವೆ, ಬಿಲಾವಲ್ ಭುಟ್ಟೋ ಜರ್ದಾರಿ ಅವರ 'ಶರಣಾಗತಿ' ಹೇಳಿಕೆ ಸೋಶೀಯಲ್ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ನೆಟಿಜನ್ಗಳು ಅವರಿಗೆ 1971 ರ ಇಂಡೋ-ಪಾಕ್ ಯುದ್ಧವನ್ನು ನೆನಪಿಸಿದರು. ಯೂಸರ್ ಒಬ್ಬರು, "ಚಿಂತಿಸಬೇಡಿ, ನಾವು ಪಾಕಿಸ್ತಾನದ ನಿಘಂಟನ್ನು ಬದಲಾಯಿಸುತ್ತೇವೆ. ಆದರೆ ನಾವು ಅದನ್ನು 1971 ರಲ್ಲಿಯೇ ಬದಲಾಯಿಸಿದ್ದೇವೆ. ಬಹುಶಃ ನೀವು ಆ ನಿಘಂಟಿನ ಆವೃತ್ತಿಯನ್ನು ಕಳೆದುಕೊಂಡಿರಬಹುದು" ಎಂದು ಟ್ರೋಲ್ ಮಾಡಿದ್ದಾರೆ.
ಮತ್ತೊಬ್ಬ ಯೂಸರ್, "1971 ರಲ್ಲಿ 93,000 ಪಾಕಿಸ್ತಾನಿ ಸೈನಿಕರು ಪೂರ್ಣ ಸಮವಸ್ತ್ರದಲ್ಲಿ ಶರಣಾದ ಅಧ್ಯಾಯವನ್ನು ಅವರು ಬಿಟ್ಟುಬಿಟ್ಟಿರಬಹುದು. ಪೂರ್ವ ಪಾಕಿಸ್ತಾನವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿತ್ತು. ಅದು ವಿಫಲ ದೇಶದ ನಿಘಂಟು!" ಎಂದು ಬರೆದಿದ್ದಾರೆ.
ಇತ್ತೀಚಿನ ಉದ್ವಿಗ್ನತೆಗಳ ನಂತರ ಧ್ವನಿಯಲ್ಲಿ ಗಮನಾರ್ಹ ಬದಲಾವಣೆಯಾಗಿ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು "ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪ್ರಾದೇಶಿಕ ಶಾಂತಿಯನ್ನು ಬೆಳೆಸಲು ಐತಿಹಾಸಿಕ, ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ" ಭಾರತವು ಪಾಕಿಸ್ತಾನದೊಂದಿಗೆ ಸೇರಬೇಕೆಂದು ಕರೆ ನೀಡಿದ್ದಾರೆ. ಇಸ್ಲಾಮಾಬಾದ್ ನೀತಿ ಸಂಶೋಧನಾ ಸಂಸ್ಥೆಯಲ್ಲಿ "ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನದ ಯುದ್ಧ" ಎಂಬ ವಿಷಯದ ಕುರಿತು ಮಾತನಾಡಿದ ಭುಟ್ಟೋ, ಭಾರತವು "ಹಗೆತನವನ್ನು ಮೀರಿ" ಮತ್ತು "ಸಹಕಾರಿ ಎಂಗೇಜ್ಮೆಂಟ್ ಸ್ವೀಕರಿಸಲು" ಒತ್ತಾಯಿಸಿದರು.
1971 ಡಿಸೆಂಬರ್ 16ರಂದು, 13 ದಿನಗಳ ಭಾರತ-ಪಾಕಿಸ್ತಾನ ಯುದ್ಧದ ನಂತರ, ಪಾಕಿಸ್ತಾನವು ಢಾಕಾದಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿತು. 93 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಶರಣಾದರು. ಇದು ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ಅಂದಿನ ಭಾರತ-ಪಾಕಿಸ್ತಾನ ಸಂಘರ್ಷವನ್ನು ಅಧಿಕೃತವಾಗಿ ಕೊನೆಗೊಳಿಸಿತು.
ಶರಣಾಗತಿ ದಾಖಲೆಗೆ ಪಾಕಿಸ್ತಾನದ ಪೂರ್ವ ಕಮಾಂಡ್ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು ಭಾರತೀಯ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಔಪಚಾರಿಕವಾಗಿ ಸಹಿ ಹಾಕಿದರು. ಆ ಸಮಯದಲ್ಲಿ, ಬಾಂಗ್ಲಾದೇಶದಲ್ಲಿರುವ ಎಲ್ಲಾ ಪಾಕಿಸ್ತಾನಿ ಸಶಸ್ತ್ರ ಪಡೆಗಳು ಶರಣಾಗಲು ಒಪ್ಪಿಕೊಂಡವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ