
ಮಾಸ್ಕೋ: ಸಂಪರ್ಕ ಕಡಿತಗೊಂಡಿದ್ದ 50 ಜನರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯ An-24 ವಿಮಾನ ರಷ್ಯಾದ ಪೂರ್ವ ಭಾಗದಲ್ಲಿ ದಿಢೀರ್ ಸಂಪರ್ಕ ಕಡಿತಗೊಂಡಿತ್ತು. ಇದೀಗ ವಿಮಾನ ಪತನವಾಗಿರೋದು ದೃಢಪಟ್ಟಿದೆ. ಅಂಗಾರ ಏರ್ಲೈನ್ಸ್ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ನಗರದ ಕಡೆಗೆ ತೆರಳುತ್ತಿತ್ತು. ಈ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ನಿಂದ ಸಂಪರ್ಕ ಕಳೆದುಕೊಂಡಿತ್ತು. ಇದೀಗ ರಷ್ಯಾ ಮಾಧ್ಯಮಗಳು ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ವರದಿ ಮಾಡಿವೆ.
ರಾಯಿಟರ್ಸ್ ವರದಿ ಪ್ರಕಾರ, ಐವರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು, 6 ಸಿಬ್ಬಂದಿ An-24 ವಿಮಾನದಲ್ಲಿದ್ದರು. ರಷ್ಯಾದ ಸುದ್ದಿ ಸಂಸ್ಥೆ ಇಂಟರ್ಫ್ಯಾಕ್ಸ್ ವರದಿ ಪ್ರಕಾರ, An-24 ವಿಮಾನ ಟಿಂಡಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸುತ್ತಿತ್ತು. ಪೈಲಟ್ ಮೊದಲ ಪ್ರಯತ್ನ ವಿಫಲವಾಗಿದ್ದರಿಂದ ವಿಮಾನ ಮತ್ತೆ ಮೇಲೆ ಹಾರಾಟ ಆರಂಭಿಸಿತ್ತು. ಎರಡನೇ ಪ್ರಯತ್ನಕ್ಕಾಗಿ ವಿಮಾನದಲ್ಲಿ ಹಾರಾಟ ನಡೆಸುತ್ತಿರುವ ಸಂದರ್ಭದಲ್ಲಿ ATR ಸಂಪರ್ಕ ಕಡಿತಗೊಂಡಿತ್ತು.
ವಿಮಾನದಲ್ಲಿ ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 43 ಪ್ರಯಾಣಿಕರಿದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ. ಈ ಪತನದಲ್ಲಿ ಎಷ್ಟು ಜನರು ಮೃತರಾಗಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
'ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ, ಪೈಲಟ್ ಮಾಡಿದ ತಪ್ಪಿನಿಂದಲೇ An-24 ವಿಮಾನ ಪತನಗೊಂಡಿದೆ. ಎರಡನೇ ಲ್ಯಾಂಡಿಂಗ್ ಪ್ರಯತ್ನದಲ್ಲಿ ಪ್ರತಿಕೂಲ ಹವಾಮಾನದಿಂದ ಪೈಲಟ್ಗೆ ಸ್ಪಷ್ಟವಾಗಿ ನೋಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ವಿಮಾನ ಪತನವಾಗಿದೆ ಎಂದು ಹೇಳಲಾಗುತ್ತಿದೆ. ಅಂಗಾರ ವಿಮಾನಯಾನ ಸಂಸ್ಥೆಯೂ ಪತನಕ್ಕೆ ನಿಖರ ಕಾರಣವನ್ನು ತಿಳಿಸಿಲ್ಲ.
ಸೈಬೀರಿಯಾದ ಅಂಗಾರ ಏರ್ಲೈನ್ಸ್ನ ಪತನಗೊಂಡ An-24 ವಿಮಾನವು ಸುಮಾರು 50 ವರ್ಷ ಹಳೆಯದು ಎಂದು ಹೇಳಲಾಗುತ್ತದೆ. 1976ರಲ್ಲಿಯೇ ಈ ವಿಮಾನ ನಿರ್ಮಾಣಗೊಂಡಿತ್ತು ಎಂದು ಪ್ಲೇಟ್ ಟೇಲ್ ಮೇಲಿರುವ ಸಂಖ್ಯೆ ಹೇಳುತ್ತದೆ. ರಕ್ಷಣಾ ತಂಡವು ಹೆಲಿಕಾಪ್ಟರ್ ಮೂಲಕ ವಿಮಾನವನ್ನು ಹುಡುಕುತ್ತಿದ್ದಾಗ, ವಿಮಾನದ ಮುಂಭಾಗ ಉರಿಯುತ್ತಿರುವುದು ಕಂಡುಬಂದಿತು. ಇದನ್ನು ನೋಡಿದ ರಕ್ಷಣಾ ತಂಡವು ತಕ್ಷಣ ಸ್ಥಳಕ್ಕೆ ತಲುಪಿದೆ.
ಟಿಂಡಾ ವಿಮಾನ ನಿಲ್ದಾಣದ ಅಧಿಕಾರಿಗಳು ಪೈಲಟ್ ಎರಡನೇ ಬಾರಿಗೆ ಲ್ಯಾಂಡ್ ಮಾಡಲು ಪ್ರಯತ್ನಿಸುತ್ತಿದ್ದರು. ಬಹುಶಃ ಪೈಲಟ್ ಮಾಡಿದ ತಪ್ಪಿನಿಂದಲೇ ವಿಮಾನ ಪತನಗೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಗಾರ ಏರ್ಲೈನ್ಸ್ ನ ಈ ವಿಮಾನ ಇದ್ದಕ್ಕಿದ್ದಂತೆ ರಾಡಾರ್ ನಿಂದ ಕಣ್ಮರೆಯಾಯಿತು. ವಿಮಾನ ಪತನಗೊಂಡ ಸಂದರ್ಭದಲ್ಲಿ ದೃಶ್ಯದ ಗೋಚರತೆ (visibility) ಕಡಿಮೆ ಇತ್ತು ಎಂದು ಹಲವು ವರದಿಗಳು ಹೇಳುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ