
ಇಸ್ಲಾಮಾಬಾದ್: ತಾರತಮ್ಯ ಖಂಡಿಸಿ ಪಾಕಿಸ್ತಾನ ಸರ್ಕಾರದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ 4ನೇ ದಿನ ಪೂರೈಸಿದೆ. ಈ ನಡುವೆ ಪ್ರತಿಭಟನೆ ಹತ್ತಿಕ್ಕಲು ಪಾಕ್ ಸರ್ಕಾರ ಲಾಠಿಚಾರ್ಜ್, ಗೋಲಿಬಾರ್ನಂಥ ದಾಳಿಯಂಥ ದಮನಕಾರಿ ನೀತಿ ಪ್ರದರ್ಶಿಸುತ್ತಿದ್ದು, ಪೊಲೀಸರು ಮತ್ತು ಸೇನೆಯ ಗುಂಡಿನ ದಾಳಿಗೆ ಗುರುವಾರ ಒಂದೇ 12 ದಿನ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ 4 ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ.
38 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಮ್ಮು ಕಾಶ್ಮೀರ ಜಂಟಿ ಆವಾಮಿ ಕಾರ್ಯಸಮಿತಿ ಈ ಪ್ರತಿಭಟನೆ ನಡೆಸುತ್ತಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು, ವ್ಯಾಪಾರ, ವಹಿವಾಟು ಬಂದ್ ಮಾಡಿ, ಸಾರಿಗೆ ಸಂಚಾರ ಸ್ಥಗಿತಗೊಳಿಸಿ ಕಂಡುಕೇಳರಿಯದ ಬೃಹತ್ ಹೋರಾಟ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜಧಾನಿ ಮುರ್ಷಿದಾಬಾದ್, ಕೋಟ್ಲಿ, ರಾವಲ್ಕೋಟ್, ನೀಲಂ ವ್ಯಾಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದ ಸೇನೆ ನಿಯೋಜಿಸಲಾಗಿದೆ. ಜೊತೆಗೆ ಮೊಬೈಲ್ ಹಾಗೂ ಇಂರ್ಟನೆಟ್ ಸೇವೆಯನ್ನು ಪೂರ್ಣ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಹೋರಾಟಗಾರರನ್ನು ಬೆದರಿಸುವ ತಂತ್ರವಾಗಿ ಅವರ ಮೇಲೆ ಲಾಠಿಚಾರ್ಜ್ ಮತ್ತು ಗೋಲಿಬಾರ್ನಂಥ ಕೃತ್ಯಗಳಿಗೂ ಸರ್ಕಾರ ಆದೇಶಿಸಿದೆ. ಇದು ಪ್ರತಿಭಟನಾಕಾರರ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಡುವೆ ದಮನಕಾರಿ ನೀತಿಗಳ ಹೊರತಾಗಿಯೂ ಪ್ರತಿಭಟನೆ ಕಿಚ್ಚು ಆರದೇ ಇರುವುದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಳವಳ ಹೆಚ್ಚಿಸಿದೆ. ಈ ಹೋರಾಟ ಕಾಶ್ಮೀರ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಬಹುದು ಎಂಬ ಕಳವಳ ಸರ್ಕಾರವನ್ನು ಕಾಡತೊಡಗಿದೆ. ಹೀಗಾಗಿ ಪ್ರತಿಭಟನಾಕಾರರ ಜೊತೆಗೆ ಸಂಧಾನಕ್ಕಾಗಿ ಪಾಕ್ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ಪಿಒಕೆಗೆ ಕಳುಹಿಸಿಕೊಟ್ಟಿದೆ.
ಆಗಿದ್ದೇನು?
- ಆಕ್ರಮಿತ ಕಾಶ್ಮಿರದಲ್ಲಿನ ಜನರ ವಿರುದ್ಧ ಪಾಕ್ ಸರ್ಕಾರ ತಾರತಮ್ಯ
- ಇದರ ವಿರುದ್ಧ ಜನರ ಭಾರಿ ದಂಗೆ. ಹೋರಾಟ ನಿನ್ನೆ 4ನೆ ದಿನಕ್ಕೆ ಲಗ್ಗೆ
- ಇದರಿಂದಾಗಿ ಪಾಕ್ ಪ್ರಧಾನಿ ಷರೀಫ್ಗೆ ಸ್ವಾತಂತ್ರ್ಯ ಸಂಗ್ರಾಮ ಭೀತಿ
- ಹೀಗಾಗಿ ತಮ್ಮದೇ ಜನರ ಮೇಲೆ ಪಾಕ್ ಸೇನೆಯಿಂದ ಗುಂಡಿನ ದಾಳಿ
- ಇದರ ನಡುವೆ ಸಂಧಾನಕ್ಕಾಗಿ ಪಾಕ್ ಸರ್ಕಾರದಿಂದ ತಂಡ ರವಾನೆ
- ಪಿಒಕೆನಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಸಂಪೂರ್ಣವಾಗಿ ಬಂದ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ