Rishikesh: ಹಿಂದೂ ಆಗಿ ಗಂಗಾ ನದಿ ದಡದಲ್ಲಿ ಆ ರೀತಿ ಮಾಡಿದ್ದು ಸರೀನಾ? ವಿದೇಶಿ ಪ್ರವಾಸಿಗರಿಂದ ವಿಡಿಯೋ ವೈರಲ್!

Published : May 20, 2026, 01:02 PM IST
Viral Video Shows Woman Burying Plastic Waste on Ganga Riverbank in Rishikesh

ಸಾರಾಂಶ

ರಿಷಿಕೇಶದ ಸಾಯಿ ಘಾಟ್‌ನಲ್ಲಿ ಮಹಿಳೆಯೊಬ್ಬರು ಗಂಗಾ ನದಿ ದಡದಲ್ಲಿ ಪೂಜೆಯ ಕಸವನ್ನು ಹೂಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದೇಶಿ ಪ್ರವಾಸಿಗರೊಬ್ಬರು ಸೆರೆಹಿಡಿದ ಈ ದೃಶ್ಯವು, ಪವಿತ್ರ ನದಿಗೆ ಪ್ಲಾಸ್ಟಿಕ್ ಸೇರಿ ಇತರ ಕರಗದ ವಸ್ತುಗಳನ್ನು ಸೇರಿಸುವ ಬೇಜವಾಬ್ದಾರಿ ವರ್ತನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Rishikesh: ಗಂಗಾ ನದಿ ದಡದಲ್ಲಿ ಪ್ಲಾಸ್ಟಿಕ್ ಕಸ ಹೂತ ಮಹಿಳೆ; ವಿದೇಶಿ ಪ್ರವಾಸಿಗರಿಂದ ವಿಡಿಯೋ ವೈರಲ್!

ಋಷಿಕೇಶದ ಸಾಯಿ ಘಾಟ್‌ನಲ್ಲಿ ಮಹಿಳೆಯೊಬ್ಬರು ಗಂಗಾ ನದಿ ದಡದಲ್ಲಿ ಪೂಜೆಯ ಕಸವನ್ನು ಹೂಳುತ್ತಿರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಸಿಯೆರಾ ಲಿಲಿಯಾನ್ ಅನ್ನೋ ವಿದೇಶಿ ಪ್ರವಾಸಿಗರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಭಾರತದ ಅತ್ಯಂತ ಪವಿತ್ರ ತೀರ್ಥಕ್ಷೇತ್ರವೊಂದರಲ್ಲಿ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ಮರಳಿನಲ್ಲಿ ಸಣ್ಣ ಗುಂಡಿ ತೋಡಿ, ಪೂಜಾ ಸಾಮಗ್ರಿಗಳನ್ನು ಅದರಲ್ಲಿ ಹಾಕಿ ಮುಚ್ಚಿ ಹೋಗುವುದನ್ನು ನೋಡಬಹುದು. ಆ ಪ್ರವಾಸಿಗರ ಪ್ರಕಾರ, ಆ ವಸ್ತುಗಳಲ್ಲಿ ಪ್ಲಾಸ್ಟಿಕ್ ಮತ್ತು ಬೇಗ ಕರಗದ ವಸ್ತುಗಳೂ ಇದ್ದವು. ಇಂತಹ ವಸ್ತುಗಳು ನದಿ ಮಾಲಿನ್ಯಕ್ಕೆ ಮುಖ್ಯ ಕಾರಣ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

ತಾನು ಆ ಮಹಿಳೆಯನ್ನು ಪ್ರಶ್ನಿಸಲು ಪ್ರಯತ್ನಿಸಿದೆ, ಆದರೆ ಅವರು ಯಾವುದೇ ಉತ್ತರ ನೀಡಲಿಲ್ಲ ಅಂತ ಸಿಯೆರಾ ಲಿಲಿಯಾನ್ ಹೇಳಿದ್ದಾರೆ. ಪವಿತ್ರ ನದಿಯನ್ನೇ ಪೂಜಿಸಿ, ಅದಕ್ಕೇ ಕಸ ಹಾಕುವುದು ಎಂಥಾ ವಿಪರ್ಯಾಸ ಅಂತ ಅವರು ಆನ್‌ಲೈನ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

 

ಸಂಜೆ ನಡೆಯುವ ಗಂಗಾ ಆರತಿ ಹೊತ್ತಲ್ಲೂ ಇದೇ ರೀತಿ ಆಗೋದನ್ನ ನೋಡಿದ್ದೀನಿ ಅಂತ ಆ ಪ್ರವಾಸಿಗರು ಹೇಳಿದ್ದಾರೆ. ಭಕ್ತರು ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಪೂಜಾ ಸಾಮಗ್ರಿಗಳನ್ನು ನೇರವಾಗಿ ನೀರಿಗೆ ಎಸೆಯುತ್ತಿದ್ದರು ಅಂತ ಅವರು ಆರೋಪಿಸಿದ್ದಾರೆ.

ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಹೂವು, ಸಿಂಥೆಟಿಕ್ ಬಟ್ಟೆ ಮತ್ತು ಇತರ ಪ್ಯಾಕೇಜಿಂಗ್ ವಸ್ತುಗಳು ಗಂಗಾ ನದಿ ಮಾಲಿನ್ಯಕ್ಕೆ ದೊಡ್ಡ ಕಾರಣ ಅಂತ ಪರಿಸರ ತಜ್ಞರು ಬಹಳ ಹಿಂದಿನಿಂದಲೂ ಎಚ್ಚರಿಸುತ್ತಲೇ ಬಂದಿದ್ದಾರೆ. ಹೂವು, ಎಲೆಗಳಂತಹ ವಸ್ತುಗಳು ಬೇಗ ಮಣ್ಣಲ್ಲಿ ಕರಗುತ್ತವೆ. ಆದರೆ, ಪ್ಲಾಸ್ಟಿಕ್‌ನಂತಹ ಆಧುನಿಕ ಪ್ಯಾಕೇಜಿಂಗ್ ವಸ್ತುಗಳು ನೂರಾರು ವರ್ಷವಾದರೂ ಕರಗುವುದಿಲ್ಲ. ಇವು ನೀರಿನಲ್ಲಿರುವ ಜೀವಿಗಳಿಗೆ ಮಾರಕವಾಗುತ್ತವೆ.

ಪೂಜೆಯ ನಂತರ ಉಳಿಯುವ ವಸ್ತುಗಳನ್ನು ಅದಕ್ಕಾಗಿ ಇಟ್ಟಿರುವ ಕಸದ ತೊಟ್ಟಿಗಳಲ್ಲೇ ಹಾಕಿ ಅಂತ ಅಧಿಕಾರಿಗಳು ಮತ್ತು ಪರಿಸರ ಸಂಘಟನೆಗಳು ಯಾತ್ರಾರ್ಥಿಗಳಲ್ಲಿ ಪದೇ ಪದೇ ಮನವಿ ಮಾಡುತ್ತಲೇ ಇವೆ. ಜೊತೆಗೆ, ಪರಿಸರಕ್ಕೆ ಹಾನಿ ಮಾಡದ, ಸುಲಭವಾಗಿ ಕರಗುವ ವಸ್ತುಗಳನ್ನು ಬಳಸುವಂತೆಯೂ ಅವರು ಸಲಹೆ ನೀಡುತ್ತಿದ್ದಾರೆ.

PREV
click me!

Recommended Stories

Kishore Mother Accident: 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!
'ಸತ್ತ ವ್ಯಕ್ತಿಗೆ ಮತ್ತೆ ಜೀವ ಬಂತು'.. ಶವಾಗಾರದಲ್ಲಿ ಎದ್ದ ಕೂತ ಮೃತ ಯುವಕ; ಏನಿದು ಪವಾಡ?