
ನವದೆಹಲಿ (ಆ.24): ದೇಶದ ಅತ್ಯುನ್ನತ ಮತ್ತು ಕಠಿಣ ಪರೀಕ್ಷೆಯಾದ ಯುಪಿಎಸ್ಸಿ (UPSC Civil Services) ಪರೀಕ್ಷೆಯಲ್ಲಿ ಪಾಸಾಗಬೇಕೆಂದು ವರ್ಷಗಟ್ಟಲೆ ನಿದ್ದೆಗೆಟ್ಟು, ಊಟ-ತಿಂಡಿ ಮರೆತು ಓದುವ ಲಕ್ಷಾಂತರ ಆಕಾಂಕ್ಷಿಗಳಿದ್ದಾರೆ. ಆದರೆ ಎಲ್ಲರ ಕನಸೂ ನನಸಾಗುವುದಿಲ್ಲ. ಸತತ ನಾಲ್ಕು ವರ್ಷಗಳ ಪ್ರಯತ್ನದ ಬಳಿಕವೂ ಪರೀಕ್ಷೆ ಪಾಸ್ ಮಾಡಲಾಗದೆ ಹತಾಶನಾದ ಯುವಕನೊಬ್ಬ, ತಾನು ಜೀವದಂತೆ ಕಾಪಾಡಿಕೊಂಡಿದ್ದ ಸಾವಿರಾರು ರೂಪಾಯಿ ಬೆಲೆಯ ಎಲ್ಲಾ ಪುಸ್ತಕಗಳು, ಕೈಬರಹದ ನೋಟ್ಸ್ಗಳನ್ನು ಗುಜರಿ ಅಂಗಡಿಗೆ (ಕಬಾಡಿವಾಲಾ) ಕೇವಲ ₹464ಕ್ಕೆ ಮಾರಾಟ ಮಾಡಿರುವ ಮನಕಲಕುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರೆಡ್ಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ ಈ ಯುವಕ ತನ್ನ UPSC ಪಯಣದ ನೋವಿನ ಕಥೆಯನ್ನು ಹಂಚಿಕೊಂಡಿದ್ದಾನೆ. 2023, 2024 ಮತ್ತು 2025ರಲ್ಲಿ ಸತತವಾಗಿ UPSC ಮೇನ್ಸ್ (Mains) ಪರೀಕ್ಷೆ ಬರೆದಿದ್ದರೂ ಅಂತಿಮ ಹಂತ ತಲುಪಲು ಸಾಧ್ಯವಾಗಿರಲಿಲ್ಲ. 2026ರ ಪರೀಕ್ಷೆಯಲ್ಲಿ ಮೊದಲ ಹಂತವಾದ ಪ್ರಿಲಿಮ್ಸ್ (Prelims) ಪರೀಕ್ಷೆಯಲ್ಲೂ ಫೇಲ್ ಆಗಿದ್ದಾನೆ.
ಸತತ ವೈಫಲ್ಯಗಳಿಂದ ಮನನೊಂದ ಆತ, ಇನ್ನು ಮುಂದೆ ಎಂದಿಗೂ UPSC ಪರೀಕ್ಷೆಯ ಸಹವಾಸವೇ ಬೇಡ ಎಂದು ನಿರ್ಧರಿಸಿ, ತಾನು ಸಂಗ್ರಹಿಸಿದ್ದ NCERT ಪುಸ್ತಕಗಳು, ಎಂ. ಲಕ್ಷ್ಮೀಕಾಂತ್ ಅವರ 'ಇಂಡಿಯನ್ ಪಾಲಿಟಿ', ಮಾಕ್ ಟೆಸ್ಟ್ ಪೇಪರ್ಗಳು ಹಾಗೂ ಹಗಲಿರುಳು ಬರೆದ ಕೈಬರಹದ ನೋಟ್ಸ್ಗಳನ್ನೆಲ್ಲಾ ಮೂಟೆಕಟ್ಟಿ ಗುಜರಿಯವನಿಗೆ ತೂಕಕ್ಕೆ ಹಾಕಿದ್ದಾನೆ.
ಗುಜರಿ ಅಂಗಡಿಯವನಿಗೆ ಪುಸ್ತಕಗಳನ್ನು ಮಾರುವಾಗ ಉಂಟಾದ ಶೂನ್ಯ ಭಾವನೆಯನ್ನು ಯುವಕ ಭಾವುಕವಾಗಿ ಬರೆದುಕೊಂಡಿದ್ದಾನೆ: 'ಗುಜರಿಯವನು ನನ್ನ ಪುಸ್ತಕಗಳನ್ನು ಒಂದೊಂದಾಗಿ ತಕ್ಕಡಿಯಲ್ಲಿಟ್ಟು ತೂಕ ಮಾಡುತ್ತಿದ್ದಾಗ ನನ್ನಲ್ಲಿ ದೊಡ್ಡ ಶೂನ್ಯ ಆವರಿಸಿತ್ತು. ಅವು ಕೇವಲ ಹಾಳೆಗಳಾಗಿರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಎದ್ದು ಕಣ್ಣುಜ್ಜಿಕೊಂಡು ಸಿದ್ಧಪಡಿಸಿದ ಅನಾಲಿಸಿಸ್ ಶೀಟ್ಗಳು, ಬರೆದ ನೂರಾರು ಮಾಕ್ ಟೆಸ್ಟ್ಗಳು, ತಿದ್ದಿ ತೀಡಿದ ಉತ್ತರಗಳು... ನನ್ನ ಬದುಕಿನ ಅತ್ಯಮೂಲ್ಯ ವರ್ಷಗಳ ತ್ಯಾಗ ಆ ತಕ್ಕಡಿಯ ಮೇಲಿತ್ತು' ಎಂದು ಆತ ನೋವು ತೋಡಿಕೊಂಡಿದ್ದಾನೆ.
ಈ ಪರೀಕ್ಷೆಯ ಕನಸಿಗಾಗಿ ಆತ ಕಳೆದುಕೊಂಡದ್ದು ಕೇವಲ ಸಮಯವನ್ನಷ್ಟೇ ಅಲ್ಲ: 2022ರಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಉತ್ತಮ ಕಾರ್ಪೊರೇಟ್ ಕೆಲಸವನ್ನು ರಿಸೈನ್ ಮಾಡಿ ಈತ ಓದಲು ಕುಳಿತಿದ್ದ. ಇದೇ ಸತತ ಒತ್ತಡ ಹಾಗೂ ಪರೀಕ್ಷೆಯ ತಯಾರಿಯ ನಡುವೆ ಆತನ ನಾಲ್ಕು ವರ್ಷಗಳ ಪ್ರೀತಿಯ ಸಂಬಂಧವೂ (Love Relationship) ಬ್ರೇಕಪ್ ಆಗಿತ್ತು.
ತನ್ನ ಎಲ್ಲಾ ಸ್ಟಡಿ ಮೆಟೀರಿಯಲ್ ಮಾರಿದಾಗ ಗುಜರಿಯವನು ಆತನ ಕೈಗಿಟ್ಟಿದ್ದು ಕೇವಲ ₹464 ರೂಪಾಯಿಗಳು. 'ಇನ್ನೊಂದು ₹200 ಹೆಚ್ಚಿಗೆ ಕೇಳಬಹುದಿತ್ತಲ್ಲವೇ?' ಎಂದು ನೆಟ್ಟಿಗರು ಕೇಳಿದಾಗ, 'ಇನ್ನೊಂದು ನೂರು-ಇನ್ನೂರು ರೂಪಾಯಿ ಹೆಚ್ಚು ಬಂದಿದ್ದರೂ ನನ್ನ ಕಳೆದುಹೋದ ಜೀವನ ಮರಳಿ ಬರುತ್ತಿರಲಿಲ್ಲ' ಎಂದು ಉತ್ತರಿಸಿದ್ದಾನೆ. ವಿಶೇಷವೆಂದರೆ, ಆ ₹464 ರೂಪಾಯಿಗಳನ್ನು ಆತ ನೇರವಾಗಿ ದೇವಸ್ಥಾನಕ್ಕೆ ಹೋಗಿ ಹುಂಡಿಗೆ ಹಾಕಿದ್ದಾನೆ. 'ಇದು ಮುಂದಿನ ಪ್ರಯತ್ನದ ಯಶಸ್ಸಿಗಾಗಿ ಹಾಕಿದ ಹರಕೆಯಲ್ಲ, ಏಕೆಂದರೆ ನನ್ನ UPSC ಅಧ್ಯಾಯ ಇಂದಿಗೆ ಸಂಪೂರ್ಣ ಮುಕ್ತಾಯವಾಗಿದೆ' ಎಂದು ಆತ ಬರೆದುಕೊಂಡಿದ್ದಾನೆ.
ಈ ಪೋಸ್ಟ್ ಈಗ ದೇಶಾದ್ಯಂತ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಕಣ್ಣಂಚಿನಲ್ಲಿ ನೀರು ತರಿಸಿದ್ದು, ಸ್ಪರ್ಧೆಯ ಹಿಂದಿನ ಮಾನಸಿಕ ಯಾತನೆ ಹಾಗೂ ತ್ಯಾಗದ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.