
ಹಿಮಾಚಲ ಪ್ರದೇಶದ ಅಟಲ್ ಟನಲ್ ಬಳಿ ಬುಧವಾರ (ಜುಲೈ 1, 2026) ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ರಾಜಸ್ಥಾನದಿಂದ ಬಂದಿದ್ದ ಪ್ರವಾಸಿಯೊಬ್ಬರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಸ್ಕಾರ್ಪಿಯೋ ಎಸ್ಯುವಿ ಕಾರು ಚಾಲಕನ ನಿಯಂತ್ರಣ ತಪ್ಪಿ, ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಬ್ಬಿಣದ ರಾಡ್ಗಳಿಗೆ ನೇರವಾಗಿ ನುಗ್ಗಿದೆ. ಪರಿಣಾಮ, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಬ್ಬಿಣದ ರಾಡ್ಗಳು ಕಾರಿನೊಳಗೆ ಚುಚ್ಚಿಕೊಂಡು ಹೋಗಿರುವ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಚಾಚಿಕೊಂಡಿದ್ದ ಕಬ್ಬಿಣದ ರಾಡ್ಗಳಿಗೆ ಸ್ಕಾರ್ಪಿಯೋ ಕಾರು ಸಿಕ್ಕಿಹಾಕಿಕೊಂಡು ನೇತಾಡುತ್ತಿರುವ ಭಯಾನಕ ದೃಶ್ಯಗಳು ವಿಡಿಯೋದಲ್ಲಿವೆ. ಈ ದೃಶ್ಯವೇ ಅಪಘಾತದ ತೀವ್ರತೆಯನ್ನು ತೋರಿಸುತ್ತದೆ. ಪೊಲೀಸರ ಪ್ರಕಾರ, ಅತಿವೇಗವೇ ಈ ಅಪಘಾತಕ್ಕೆ ಕಾರಣ. ವೇಗವಾಗಿ ಬಂದ ಕಾರು, ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಸೇತುವೆಗೆ ಡಿಕ್ಕಿ ಹೊಡೆದು, ಅಲ್ಲಿದ್ದ ಕಬ್ಬಿಣದ ರಾಡ್ಗಳಿಗೆ ಚುಚ್ಚಿಕೊಂಡಿದೆ ಎಂದು ವರದಿಗಳು ಹೇಳಿವೆ. ರಾಜಸ್ಥಾನದ ಸಿಕಾರ್ ಮೂಲದ ಕೈಲಾಶ್ (34) ಮೃತಪಟ್ಟ ದುರ್ದೈವಿ. ಉತ್ತರ ಪ್ರದೇಶದ ಲಖಿಂಪುರ್ ನಿವಾಸಿ ಆದಿತ್ಯ, ರಾಜಸ್ಥಾನದ ರಾಜೇಂದ್ರ ಹಾಗೂ ಕಾರು ಚಲಾಯಿಸುತ್ತಿದ್ದ ಸಿದ್ಧಾರ್ಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜೇಂದ್ರ ಮತ್ತು ಸಿದ್ಧಾರ್ಥ್ ಕೂಡ ಸಿಕಾರ್ ಮೂಲದವರೆಂದು ವರದಿಯಾಗಿದೆ.
ಈ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ವೀಕ್ಷಿಸಿ
ಮಂಗಳವಾರ ರಾತ್ರಿ ಮನಾಲಿ ಕಡೆಯಿಂದ ಲಾಹೌಲ್ಗೆ ಈ ತಂಡ ಹೊರಟಿತ್ತು. ರಾತ್ರಿ ಸುಮಾರು 10 ಗಂಟೆಗೆ ಅಟಲ್ ಟನಲ್ನ ಉತ್ತರ ಭಾಗದ ಬಳಿ ಈ ಅಪಘಾತ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಟನಲ್ನಿಂದ ಹೊರಬಂದ ತಕ್ಷಣ ಸ್ಕಾರ್ಪಿಯೋ ಅತಿವೇಗದಲ್ಲಿತ್ತು. ಇದೇ ಕಾರಣಕ್ಕೆ ಚಾಲಕನಿಗೆ ತಿರುವಿನಲ್ಲಿ ಕಾರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಾರು ಚಂದ್ರ ನದಿಯ ಕಡೆಗೆ ಸಾಗಿ, ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸೇತುವೆಯಲ್ಲಿದ್ದ ಕಬ್ಬಿಣದ ರಾಡ್ಗಳು ಕಾರಿನೊಳಗೆ ನುಗ್ಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಉಳಿದ ಮೂವರು ಪ್ರವಾಸಿಗರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಸ್ಸು ಪೊಲೀಸ್ ಠಾಣೆಯ ಅಧಿಕಾರಿ ಮುಕೇಶ್ ರಾಥೋರ್ ಹೇಳಿದ್ದಾರೆ. ಮೃತರ ದೇಹವನ್ನು ವಶಕ್ಕೆ ಪಡೆದು, ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಾಗದಲ್ಲಿ ಮಳೆ ಶುರುವಾಗಿದ್ದು, ರಸ್ತೆಗಳು ಜಾರುತ್ತಿವೆ. ಹೀಗಾಗಿ, ಗುಡ್ಡಗಾಡು ಪ್ರದೇಶಗಳಲ್ಲಿ ಅತಿವೇಗ ಮತ್ತು ಅನಗತ್ಯ ರಾತ್ರಿ ಪ್ರಯಾಣವನ್ನು ತಪ್ಪಿಸುವಂತೆ ಅಧಿಕಾರಿಗಳು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.