ಮಗನ ಬರ್ತ್‌ಡೇಗಾಗಿ ರಸ್ತೆ ಬಂದ್ ಮಾಡಿ ದರ್ಪ; 'ನಾನೊಬ್ಬ ಸೆಲೆಬ್ರಿಟಿ' ಎಂದ ಉದ್ಯಮಿಗೆ ಒದ್ದು ಜೈಲಿಗೆ ದಬ್ಬಿದ ಪೊಲೀಸರು!

Published : Dec 25, 2025, 11:00 PM IST
Surat Businessman Arrested for Blocking Road for Sons Birthday Bash

ಸಾರಾಂಶ

ಸೂರತ್‌ನ ಉದ್ಯಮಿಯೊಬ್ಬ ಮಗನ ಹುಟ್ಟುಹಬ್ಬ ಆಚರಿಸಲು ಬ್ಯುಸಿ ರಸ್ತೆಯನ್ನೇ ತಡೆದಿದ್ದಾನೆ. ಪಟಾಕಿ ಸಿಡಿಸಿ, ಪ್ರಯಾಣಿಕರಿಗೆ ಬೆದರಿಕೆ ಹಾಕಿ ನಡೆಸಿದ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಾನೊಬ್ಬ ಸೆಲೆಬ್ರಿಟಿ ಎಂದು ಆತ ವಾದಿಸಿದ್ದ.

ಸೂರತ್ (ಗುಜರಾತ್): ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು 'ಚಿನ್ನದ ಮಗು'ವಾಗಿರಬಹುದು, ಆದರೆ ಆ ಪ್ರೀತಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಸೂರತ್‌ನಲ್ಲಿ ಉದ್ಯಮಿಯೊಬ್ಬ ಮಗನ ಹುಟ್ಟುಹಬ್ಬದ ಹೆಸರಿನಲ್ಲಿ ನಡುರಸ್ತೆಯಲ್ಲೇ ಪುಂಡಾಟಿಕೆ ನಡೆಸಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.

ರಸ್ತೆ ತಡೆದು ಪಟಾಕಿ ಸಿಡಿಸಿ ಪುಂಡಾಟ

ಸೂರತ್‌ನ ಡುಮಾಸ್ ಪ್ರದೇಶದಲ್ಲಿ ದೀಪಕ್ ಇಜಾರ್ದಾರ್ ಎಂಬ ಉದ್ಯಮಿ ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾರ್ವಜನಿಕ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದ. ಜನನಿಬಿಡ ರಸ್ತೆಯಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿದ ಈತ, ರಸ್ತೆಯ ಮಧ್ಯದಲ್ಲೇ ಪಟಾಕಿಗಳನ್ನು ಸಿಡಿಸಿ ಅಟ್ಟಹಾಸ ಮೆರೆದಿದ್ದಾನೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪಟಾಕಿಯ ಅಬ್ಬರಕ್ಕೆ ಬೆದರಿ ಹೋದರೂ, ಈತ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂಭ್ರಮಾಚರಣೆಯಲ್ಲಿ ಮಗ್ನನಾಗಿದ್ದ.

ಪ್ರಶ್ನಿಸಿದ ಕಾರು ಚಾಲಕನಿಗೆ ಬೆದರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ದೀಪಕ್ ತನ್ನ ಕೈಯಲ್ಲಿ ಉರಿಯುತ್ತಿರುವ ಸ್ಪಾರ್ಕ್ಲರ್‌ಗಳನ್ನು (ಮತಾಪು) ಹಿಡಿದು ಆಕಾಶಕ್ಕೆ ತೋರಿಸುತ್ತಾ ರಸ್ತೆಯ ಮಧ್ಯೆ ನಿಂತಿರುವುದು ಕಂಡುಬಂದಿದೆ. ಈ ವೇಳೆ ದಾರಿ ಬಿಡುವಂತೆ ಕಾರು ಚಾಲಕನೊಬ್ಬ ಹಾರ್ನ್ ಮಾಡಿದಾಗ, ಉದ್ಯಮಿ ದೀಪಕ್ ಕೋಪಗೊಂಡು ಕೈಯಲ್ಲಿದ್ದ ಉರಿಯುವ ಮತಾಪನ್ನು ಕಾರಿನತ್ತಲೇ ಹಿಡಿದು ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. ಈ ಉದ್ಧಟತನದ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

'ನಾನೊಬ್ಬ ಸೆಲೆಬ್ರಿಟಿ' ಎಂದು ಪೊಲೀಸರ ಮುಂದೆ ವಾದ

ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸೂರತ್ ಪೊಲೀಸರು ದೀಪಕ್ ಇಜಾರ್ದಾರ್‌ನನ್ನು ಬಂಧಿಸಿ ಲಾಕಪ್‌ಗೆ ಹಾಕಿದ್ದಾರೆ. ಆದರೆ, ಪೊಲೀಸರ ಎದುರೂ ತನ್ನ ದರ್ಪ ಮುಂದುವರಿಸಿದ ಈತ, ನಾನೊಬ್ಬ ಸೆಲೆಬ್ರಿಟಿ, ನಿಮ್ಮನ್ನು ಐದು ನಿಮಿಷ ತಡೆದರೆ ಯಾವ ಗಂಭೀರ ಅಪರಾಧ ಮಾಡಿದೆ? ಎಂದು ಪ್ರಶ್ನಿಸಿದ್ದಾನೆ. ಸಾರ್ವಜನಿಕ ಶಾಂತಿಗೆ ಭಂಗ ತಂದ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೆಟ್ಟಿಗರ ಆಕ್ರೋಶ ಮತ್ತು ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಎಸಗುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೌಜನ್ಯವಿಲ್ಲದ ಸೆಲೆಬ್ರಿಟಿಗಿರಿ ಮನೆಯಲ್ಲಿರಲಿ, ರಸ್ತೆಯಲ್ಲಲ್ಲ ಎಂದು ಜನ ಕಿಡಿ ಕಾರುತ್ತಿದ್ದಾರೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ವರ್ತನೆ ತೋರುವವರಿಗೆ ಒಂದು ಎಚ್ಚರಿಕೆಯ ಪಾಠವಾಗಿದೆ.

PREV
Read more Articles on
click me!

Recommended Stories

ಅಕ್ಷಯ್ ಖನ್ನಾಗೆ ಭಾರೀ ಬೇಡಿಕೆ.. ಅಜಯ್ ದೇವಗನ್ 'ದೃಶ್ಯಂ 3' ಚಿತ್ರದಿಂದ ಹೊರಹೋದ್ರಾ ಅಕ್ಷಯ್ ಖನ್ನಾ?
ಕೋಟಿ ಕೋಟಿ ಬ್ಯುಸಿನೆಸ್ ಮಾಡ್ತಿದ್ದವ ಈಗ ರ್ಯಾಪಿಡೋ ಡ್ರೈವರ್, ಈತನ ಹೋರಾಟಕ್ಕೊಂದು ಸಲಾಂ