
ಛತ್ತೀಸ್ಗಢದ ಛಿಂದ್ವಾಡಾ ಜಿಲ್ಲೆಯ ಬೀಚ್ಬಹರಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕಿಯ ವರ್ತನೆಯಿಂದ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದು, ಈ ಕುರಿತು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. ಶಾಲೆಯ ಒಬ್ಬ ಅತಿಥಿ ಶಿಕ್ಷಕ ಮತ್ತು ಶಿಕ್ಷಕಿಯ ನಡುವೆ ಆಪ್ತ ಸಂಬಂಧವಿದೆ, ಅವರು ಪಾಠ ಮಾಡುವುದಿಲ್ಲ, ಬದಲಾಗಿ ಮುಚ್ಚಿದ ಕ್ಲಾಸ್ ರೂಮಿನಲ್ಲಿ ಪ್ರೀತಿ, ಪ್ರೇಮದ ಮಾತನಾಡುತ್ತಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಮಕ್ಕಳಿಗೆ ಪಾಠ ಮಾಡುತ್ತಾರೆ. ಇವರಲ್ಲಿ ಒಬ್ಬ ಶಿಕ್ಷಕ ಮತ್ತು ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕಿ ಒಮ್ಮೆ ಶೌಚಾಲಯಕ್ಕೆ ತೆರಳಿದಾಗ, ಅವರ ಹಿಂದೆ ಶಿಕ್ಷಕ ಕೂಡ ಶೌಚಾಲಯದೊಳಗೆ ಹೋಗಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನು ನೋಡಿದ ಕೆಲವು ವಿದ್ಯಾರ್ಥಿಗಳನ್ನು ಶಿಕ್ಷಕರು ಸುಮ್ಮನಿರುವಂತೆ ಬೆದರಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ತರಗತಿಯ ಬಾಗಿಲು-ಕಿಟಕಿಗಳನ್ನು ಮುಚ್ಚಿ ಪ್ರೀತಿ ಮಾತು
ವಿದ್ಯಾರ್ಥಿಗಳು ನೀಡಿದ ದೂರಿನ ಪ್ರಕಾರ, ಶಿಕ್ಷಕ ಮತ್ತು ಶಿಕ್ಷಕಿ ಶಾಲೆಯ ಕೊಠಡಿಯಲ್ಲಿ ಕುಳಿತು ಪ್ರೀತಿ-ಪ್ರೇಮದ ಮಾತುಗಳನ್ನು ಆಡುತ್ತಿದ್ದರು. ಈ ವೇಳೆ ತರಗತಿಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಮಕ್ಕಳಿಗೆ ಪಾಠ ಮಾಡುವ ಬದಲು ಅವರನ್ನು ಶಾಲೆಯಿಂದ ಬೇಗ ಮನೆಗೆ ಕಳುಹಿಸುತ್ತಿದ್ದರು ಮತ್ತು ಇಬ್ಬರೂ ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರ ನಡುವೆ, ಶಿಕ್ಷಕಿಯು ವಿದ್ಯಾರ್ಥಿಗಳ ಆರೋಪಗಳನ್ನು ತಿರಸ್ಕರಿಸಿದ್ದಾರೆ.
ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳಿಂದ ದೂರು
ವಿದ್ಯಾರ್ಥಿಗಳು ಮೊದಲು ತಮ್ಮ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದರು. ನಂತರ ಆಗಸ್ಟ್ 15ರಂದು ನಡೆದ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಈ ವಿಚಾರವನ್ನು ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಿದರು. ವಿಷಯ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದ ಬಳಿಕ, ವಿದ್ಯಾರ್ಥಿಗಳ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ತನಿಖೆಯ ನಂತರ ಶಾಲೆಯಲ್ಲಿದ್ದ ಎಲ್ಲಾ ಅತಿಥಿ ಶಿಕ್ಷಕ-ಶಿಕ್ಷಕಿಯರನ್ನು ತೆಗೆದುಹಾಕಲಾಗಿದೆ.
ಹೊಸ ಶಿಕ್ಷಕರ ನೇಮಕಕ್ಕೆ ಸಿದ್ಧತೆ
ವಿಕಾಸಖಂಡ ಶಿಕ್ಷಣಾಧಿಕಾರಿ (BEO) ಒಪಿ ಜೋಶಿ ಹೇಳುವಂತೆ, ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರ ನಡವಳಿಕೆಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವಿಚಾರಣೆ ನಡೆಸಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿತ್ತು. ತಂಡವು ಶಾಲೆಗೆ ತೆರಳಿ ತನಿಖೆ ನಡೆಸಿ, ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಜಿಲ್ಲಾಡಳಿತದ ಆದೇಶದ ಮೇರೆಗೆ ಶಾಲೆಯಲ್ಲಿದ್ದ ಎಲ್ಲಾ ಅತಿಥಿ ಶಿಕ್ಷಕರನ್ನು ತೆಗೆದುಹಾಕಲಾಗಿದೆ. ಇದೀಗ ಹೊಸ ಅತಿಥಿ ಶಿಕ್ಷಕ-ಶಿಕ್ಷಕಿಯರ ನೇಮಕಕ್ಕಾಗಿ ಜಾಹೀರಾತು ಪ್ರಕಟಿಸಲಾಗಿದೆ ಎಂದಿದ್ದಾರೆ.