Mangaluru: ಪ್ರೇಯಸಿ ಕೋಪ, ಚರಂಡಿ ಸೇರಿದ ಕಾರಿನ ಕೀ! ಬರ್ತಡೇ ವಿಶ್ ಮಾಡಲು ಬಂದು ಕಡಬದಲ್ಲಿ ಯುವಕ ಪಟ್ಟ ಫಜೀತಿ!

Published : Jul 25, 2026, 01:13 PM IST
girlfriend throws car key

ಸಾರಾಂಶ

ಕಡಬದಲ್ಲಿ ತನ್ನ ಪ್ರೇಯಸಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದ ಯುವಕನಿಗೆ ಮುನಿಸಿನಿಂದಾಗಿ ಸಂಕಷ್ಟ ಎದುರಾಯಿತು. ಮಾತಿನ ಚಕಮಕಿಯ ಬಳಿಕ ಯುವತಿ ಕಾರಿನ ಕೀಯನ್ನು ಚರಂಡಿಗೆ ಎಸೆದಿದ್ದು, ಸ್ಥಳೀಯರ ಸಹಾಯದೊಂದಿಗೆ 5 ಗಂಟೆಗಳ ಕಾಲ ಹುಡುಕಾಡಿದರೂ ಕೀ ಸಿಗದೆ ಯುವಕ ಪರದಾಡಿದನು.

ಮಂಗಳೂರು: ಕೆಲವೊಮ್ಮೆ ಪ್ರೀತಿಯಲ್ಲಿ ಅತಿಯಾದ ಮುನಿಸು ಮತ್ತು ಕೋಪ ಯಾವ ಮಟ್ಟದ ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದ ಈ ಸ್ವಾರಸ್ಯಕರ ಘಟನೆಯೇ ಸಾಕ್ಷಿ. ಸಣ್ಣದೊಂದು ವಾಗ್ವಾದ ಇಡೀ ದಿನ ಯುವಕನೊಬ್ಬನನ್ನು ಚರಂಡಿಯ ಕೊಳಚೆ ನೀರಿನಲ್ಲಿ ಕೈಹಾಕಿ ಪರದಾಡುವಂತೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ! ಜುಲೈ 24 ರಂದು ಕಡಬದ ಸಂತೆಕಟ್ಟೆ ಬಳಿ ನಡೆದ ಈ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹುಟ್ಟುಹಬ್ಬದ ಸಂಭ್ರಮಕ್ಕೆ ಬಂದವನಿಗೆ ಕಾದಿತ್ತು ಶಾಕ್

ವರದಿ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಕಡಬದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರೇಯಸಿ ಎನ್ನಲಾದ ಪರಿಚಯದ ಯುವತಿಗೆ ಜನ್ಮದಿನದ ಶುಭಾಶಯ ಕೋರಲು ಅತ್ಯಂತ ಸಂಭ್ರಮದಿಂದ ಬಂದಿದ್ದ. ಇದಕ್ಕಾಗಿ ಆತ ತನ್ನ ಸ್ನೇಹಿತನ ಬಳಿ ಸ್ವಿಫ್ಟ್ ಕಾರನ್ನು ಕೇಳಿ ಪಡೆದುಕೊಂಡು, ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಕಡಬಕ್ಕೆ ತಲುಪಿದ್ದ. ಸಂತೆಕಟ್ಟೆ ಬಳಿ ಕಾರನ್ನು ನಿಲ್ಲಿಸಿ, ಆಕೆ ಕೆಲಸ ಮಾಡುತ್ತಿದ್ದ ಕಚೇರಿಯೊಂದರ ಮೊದಲ ಮಹಡಿಯಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಮಾತುಕತೆ ಚೆನ್ನಾಗಿಯೇ ಆರಂಭವಾಗಿತ್ತು. ಆದರೆ ಮಾತುಕತೆ ಮುಂದಕ್ಕೆ ಹೋದಂತೆ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ.

ಮಾತಿಗೆ ಮಾತು ಬೆಳೆದು ಚರಂಡಿ ಸೇರಿದ ಕೀ

ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಜೋರಾಗಿದೆ. ಕೋಪ ತಡೆದುಕೊಳ್ಳಲಾಗದ ಯುವತಿ ಏಕಾಏಕಿ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಬಲವಂತವಾಗಿ ಕಸಿದುಕೊಂಡಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, ತನ್ನ ಕೋಪ ತೀರಿಸಿಕೊಳ್ಳಲು ಪಕ್ಕದಲ್ಲೇ ಇದ್ದ, ಗಿಡಗಂಟಿ ಹಾಗೂ ಕೊಳಚೆ ನೀರು, ಹೂಳಿನಿಂದ ತುಂಬಿದ್ದ ಆಳವಾದ ಚರಂಡಿಯ ಕಡೆಗೆ ಕೀಯನ್ನು ಜೋರಾಗಿ ಎಸೆದುಬಿಟ್ಟಿದ್ದಾಳೆ!

ಕಣ್ಣೆದುರೇ ಕಾರಿನ ಕೀ ಕೊಳಚೆ ನೀರಿನೊಳಗೆ ಮುಳುಗಡೆಯಾಗಿದ್ದನ್ನು ಕಂಡು ಯುವಕ ಒಮ್ಮೆಲೇ ಗಲಿಬಿಲಿಗೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಇತ್ತ ಕೋಪ ತೀರಿಸಿಕೊಂಡ ಯುವತಿ ಅಲ್ಲಿಂದ ಹೊರಟುಹೋಗಿದ್ದಾಳೆ. ಕೀ ಇಲ್ಲದೆ ಕಾರನ್ನು ಅಲ್ಲಿಂದ ಕದಲಿಸಲೂ ಆಗದೆ, ಏನು ಮಾಡಬೇಕೆಂದು ತೋಚದೆ ಯುವಕ ಅಸಹಾಯಕನಾಗಿ ಚರಂಡಿಯತ್ತ ಓಡಿದ್ದಾನೆ.

ಕೀಗಾಗಿ ಶುರುವಾಯ್ತು ಮಹಾ ಹುಡುಕಾಟ: ಸ್ಥಳೀಯರ ಸಾಥ್

ಮಧ್ಯಾಹ್ನ 2:30 ರ ಸುಮಾರಿಗೆ ಚರಂಡಿಯ ಕೆಸರು ನೀರಿನಲ್ಲಿ ಯುವಕ ಒಬ್ಬನೇ ಕೈಹಾಕಿ ಕೀ ಹುಡುಕಲು ಆರಂಭಿಸಿದ್ದ. ಆತನ ಒದ್ದಾಟವನ್ನು ಕಂಡ ಸ್ಥಳೀಯರು ಮತ್ತು ಸಾರ್ವಜನಿಕರು ಸಹಾಯಕ್ಕೆ ಧಾವಿಸಿದರು. ಸಂತೆಕಟ್ಟೆಯಂತಹ ಜನನಿಬಿಡ ಪ್ರದೇಶದಲ್ಲಿ ಚರಂಡಿಯೊಳಗೆ ಏನನ್ನೋ ಹುಡುಕುತ್ತಿರುವುದನ್ನು ಕಂಡು ನೂರಾರು ಜನರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದರು. ಸ್ಥಳೀಯರು ಕೀ ಪತ್ತೆಹಚ್ಚಲು ಚರಂಡಿ ಸುತ್ತಮುತ್ತ ಬೆಳೆದಿದ್ದ ದಟ್ಟವಾದ ಗಿಡಗಂಟಿಗಳನ್ನು ಕತ್ತರಿಸಿ ಹಾಕಿದರು. ಕೊಳಚೆ ನೀರು, ಹೂಳು ಎನ್ನದೆ ಎಲ್ಲರೂ ಸತತ ಪ್ರಯತ್ನ ನಡೆಸಿದರು. ಆದರೆ ದುರಾದೃಷ್ಟವಶಾತ್ ಕೀ ಮಾತ್ರ ಪತ್ತೆಯಾಗಲಿಲ್ಲ.

5 ಗಂಟೆಗಳ ಹುಡುಕಿದರೂ ಸಿಗದ ಕೀ, ರಿಕ್ಷಾದಲ್ಲಿ ಮನೆ ಸೇರಿದ ಯುವಕ!

ಮಧ್ಯಾಹ್ನ 2:30 ಕ್ಕೆ ಆರಂಭವಾದ ಈ ‘ಕಿಂಗ್ ಆಪರೇಷನ್’ ಸಂಜೆ ಕತ್ತಲಾಗುವವರೆಗೂ ಅಂದರೆ ರಾತ್ರಿ 7:30 ರ ತನಕ ಸತತ ಐದು ಗಂಟೆಗಳ ಕಾಲ ನಡೆಯಿತು. ಆದರೂ ಕೀ ಮಾತ್ರ ಸಿಗಲಿಲ್ಲ. ಅಷ್ಟರಲ್ಲಾಗಲೇ ಯುವಕ ತೀವ್ರ ಸುಸ್ತಾಗಿದ್ದ. ಇತ್ತ ಜನರೆಲ್ಲಾ ಸೇರಿ ನೋಡುತ್ತಿದ್ದ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ವೀಡಿಯೋಗಳು ವೈರಲ್ ಆಗತೊಡಗಿದವು.

ಕೊನೆಗೆ ಬೇರೆ ದಾರಿ ಕಾಣದೆ, ರಾತ್ರಿ 7:30 ರ ವೇಳೆಗೆ ಕೀ ಹುಡುಕಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಯಿತು. ಸ್ನೇಹಿತನ ಕಾರನ್ನು ಕಡಬದಲ್ಲೇ ಬಿಟ್ಟು, ಯುವಕ ಅನಿವಾರ್ಯವಾಗಿ ಆಟೋ ರಿಕ್ಷಾ ಮಾಡಿಕೊಂಡು ತನ್ನ ಊರಿಗೆ ವಾಪಸ್ ತೆರಳಿದ್ದಾನೆ. ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಬಂದು, ಕೀ ಕಳೆದುಕೊಂಡು ಯುವಕ ಪಟ್ಟ ಫಜೀತಿ ಮಾತ್ರ ಕಡಬದ ಜನರಿಗೆ ಸದ್ಯದ ಸ್ವಾರಸ್ಯಕರ ಹರಟೆಯ ವಿಷಯವಾಗಿದೆ.

PREV
Read more Articles on
click me!

Recommended Stories

60 ವರ್ಷಗಳಿಂದ ಒಂದು ರೂ.ಗೆ ಊಟ ನೀಡ್ತಿರೋ 80ರ ವೃದ್ಧ: ಬಡತನದಲ್ಲಿಯೂ ಹೃದಯ ಶ್ರೀಮಂತಿಕೆ
ಕ್ಯಾರಾವ್ಯಾನ್ ಒಳಗೆ ನುಗ್ಗಿದ ಕಿರಾತಕನ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್