
ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಕುರಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮುಸ್ಲಿಮರು ಹಲವಾರು ಕಡೆಗಳಲ್ಲಿ, ಜನ ವಸತಿ ಪ್ರದೇಶಗಳಲ್ಲಿ ಎಲ್ಲೆಡೆಗಳಲ್ಲಿಯೂ ಕುರಿ ಮಾರಾಟ ಮಾಡುತ್ತಾರೆ. ಹಾಗೆಂದು ಕೇವಲ ಮುಸ್ಲಿಮರು ಮಾತ್ರವಲ್ಲ, ಕುರಿ ಕಾಯುವ ಹಿಂದೂಗಳು ಕೂಡ ಕುರಿ, ಮೇಕೆ, ಆಡು ಮುಂತಾದವುಗಳನ್ನು ಮಾರಾಟ ಮಾಡುತ್ತಾರೆ.
ಇದಾಗಲೇ ಗೋವುಗಳನ್ನು ನಾವು ಬಕ್ರೀದ್ ಸಮಯದಲ್ಲಿ ತಿನ್ನುವುದಿಲ್ಲ ಎಂದು ಹಲವು ಮುಸ್ಲಿಂ ಸಂಘಟನೆಗಳು ಘೋಷಿಸಿದ್ದರಿಂದ, ಗೋವು ಮಾರಾಟ ಮಾಡುತ್ತಿರುವ ಹಿಂದೂಗಳೂ ಕಕ್ಕಾಬಿಕ್ಕಿಯಾಗಿರುವ ಘಟನೆಗಳು ವೈರಲ್ ಆಗುತ್ತಲೇ ಇವೆ. ಆದರೆ, ಇದೇ ವೇಳೆ, ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಜನ ವಸತಿ ಪ್ರದೇಶ ಒಂದರಲ್ಲಿ ಕುರಿಗಳನ್ನು ಮಾರಲು ಮುಸ್ಲಿಮರು ಮುಂದಾದಾಗ, ಅವರ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಂದಿಯನ್ನು ತಂದು ಹಲ್ಚಲ್ ಸೃಷ್ಟಿಸಿದ್ದಾನೆ. ಅದರ ವಿಡಿಯೋ ವೈರಲ್ ಆಗಿದೆ.
ಮೊದಲು ಕಾರ್ಯಕರ್ತನೊಬ್ಬ ಹಂದಿ ತಂದು ಗಲಾಟೆ ಸೃಷ್ಟಿಸಿದ. ಬಳಿಕ ಪೊಲೀಸರು ಎಂಟ್ರಿ ಕೊಟ್ಟು ಹಂದಿ ಹಿಡಿದು ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಷ್ಟಕ್ಕೂ ಮುಸ್ಲಿಂ ಸಮುದಾಯಕ್ಕೂ ಹಂದಿಗೂ ಆಗಿಬರುವುದಿಲ್ಲ. ಅವರು ಹಂದಿಯನ್ನು ತಿನ್ನುವುದಿಲ್ಲ. ಇದೇ ಕಾರಣಕ್ಕೆ ಈ ಕಿತಾಪತಿ ಮಾಡಲಾಗಿದೆ.
ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸದ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (ಹರಾಮ್). ಕುರಾನ್ನಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಹಂದಿಯನ್ನು ಸಹಜವಾಗಿ ಅಶುದ್ಧ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮುಸ್ಲಿಮರು ಯಾವುದೇ ರೀತಿಯ ಹಂದಿ ಮಾಂಸ ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವುದಿಲ್ಲ.