ವಿಪ್ರೋ ಕೆಲಸಕ್ಕೆ ಗುಡ್‌ಬೈ, 10 ಬಾರಿ ದಿವಾಳಿ ಅಂಚಿಗೆ! ಇಂದು 600 ಕೋಟಿ ಸಾಮ್ರಾಜ್ಯ ಕಟ್ಟಿದ ಕನ್ನಡಿಗನ ಯಶೋಗಾಥೆ!

Published : Aug 27, 2026, 11:26 AM IST
From Wipro Architect to Agri Entrepreneur - Shashikumar's Success Story

ಸಾರಾಂಶ

12 ವರ್ಷಗಳ ವಿಪ್ರೋ ವೃತ್ತಿಜೀವನ ತೊರೆದು ಕೃಷಿಯತ್ತ ಮುಖ ಮಾಡಿದ ಶಶಿ ಕುಮಾರ್‌ರ ಕಥೆ ಈಗ ಉದ್ಯಮಶೀಲತೆಗೆ ಮಾದರಿಯಾಗಿದೆ. ಆರಂಭದಲ್ಲಿ ಕುಟುಂಬದ ವಿರೋಧ ಮತ್ತು ಹಲವು ಬಾರಿ ದಿವಾಳಿಯ ಅಂಚಿನ ಸಂಕಷ್ಟ ಎದುರಿಸಿದ ಅವರು, ಪತ್ನಿ ಹಾಗೂ ಕುಟುಂಬದ ನೆರವಿನಿಂದ ಅಕ್ಷಯಕಲ್ಪ ಆರ್ಗ್ಯಾನಿಕ್ ಕಟ್ಟಿದರು. ಇಂದು 2,800 ಹಳ್ಳಿಗಳ 2,800 ರೈತರೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ.

Wipro ತೊರೆದು ಮಣ್ಣಿನತ್ತ ಹೆಜ್ಜೆ: ಶಶಿ ಕುಮಾರ್‌ರ ಕೃಷಿ ಉದ್ಯಮದ ಯಶೋಗಾಥೆ, 12 ವರ್ಷದ ಟೆಕ್ ವೃತ್ತಿಗೆ ವಿದಾಯ

ಉತ್ತಮ ಸಂಬಳ, ಪ್ರತಿಷ್ಠಿತ ಹುದ್ದೆ ಮತ್ತು ಸ್ಥಿರ ವೃತ್ತಿಜೀವನವನ್ನು ಬಿಟ್ಟು ಸಂಪೂರ್ಣ ವಿಭಿನ್ನ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ನಿರ್ಧಾರವಲ್ಲ. ಆದರೆ ಶಶಿ ಕುಮಾರ್ ಅವರು 2010ರಲ್ಲಿ ಇಂತಹದ್ದೊಂದು ದೊಡ್ಡ ನಿರ್ಧಾರ ಕೈಗೊಂಡರು. ವಿಪ್ರೋದಲ್ಲಿ ಲೀಡ್ ಆರ್ಕಿಟೆಕ್ಟ್ ಆಗಿ 12 ವರ್ಷ ಕೆಲಸ ಮಾಡಿದ ಅವರು, ಕಾರ್ಪೊರೇಟ್ ಬದುಕಿಗೆ ವಿದಾಯ ಹೇಳಿ ಕೃಷಿ ಆಧಾರಿತ ಉದ್ಯಮದತ್ತ ಮುಖ ಮಾಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಕುಮಾರ್, ಅಮೆರಿಕದ ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು.

ಕೃಷಿಯ ಬೀಜ ಬಿತ್ತಿದ್ದು ಕಾಲೇಜು ದಿನಗಳಲ್ಲೇ

ಕೃಷಿಯ ಮೇಲಿನ ಅವರ ಆಸಕ್ತಿ 2010ರಲ್ಲಿ ಹುಟ್ಟಿದ್ದಲ್ಲ. 1991ರಲ್ಲೇ, ಕಾಲೇಜಿನಲ್ಲಿದ್ದಾಗ ತಮ್ಮ ಪೂರ್ವಜರ ಜಮೀನಿನಲ್ಲಿ ನೈಸರ್ಗಿಕ ಕೃಷಿ ಆರಂಭಿಸುವ ಆಲೋಚನೆ ಹೊಂದಿದ್ದರು. ಉಡುಪಿಯ ನೈಸರ್ಗಿಕ ಕೃಷಿಕ ಚೆರ್ಕಾಡಿ ರಾಮಚಂದ್ರ ರಾವ್ ಅವರ ಪರಿಚಯವೂ ಅವರ ಚಿಂತನೆಗೆ ದೊಡ್ಡ ಪ್ರಭಾವ ಬೀರಿತು.

ರಾವ್ ಅವರ ಸಣ್ಣ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದಷ್ಟೇ ಅಲ್ಲದೆ, ಉತ್ಪನ್ನಗಳನ್ನು ಮಾರಾಟ ಮಾಡಿ ಕೃಷಿಯನ್ನು ಆರ್ಥಿಕವಾಗಿ ಲಾಭದಾಯಕವಾಗಿಸಬಹುದೆಂಬುದನ್ನು ಕುಮಾರ್ ಅರಿತುಕೊಂಡರು.

ಕುಟುಂಬದ ವಿರೋಧ, ಹಣಕಾಸಿನ ಸಂಕಷ್ಟ

ವೃತ್ತಿ ಬದಲಾವಣೆಯ ನಿರ್ಧಾರಕ್ಕೆ ಕುಟುಂಬದಿಂದ ಆರಂಭದಲ್ಲಿ ಬೆಂಬಲ ಸಿಗಲಿಲ್ಲ. ತಂದೆ ಸುಮಾರು ಎಂಟು ವರ್ಷಗಳ ಕಾಲ ಅವರೊಂದಿಗೆ ಮಾತನಾಡಲಿಲ್ಲ ಎನ್ನಲಾಗಿದೆ. ಉದ್ಯಮದ ಆರಂಭಿಕ ಹಂತದಲ್ಲೂ ಸಂಕಷ್ಟಗಳು ಎದುರಾದವು. ವ್ಯವಹಾರ ಸುಮಾರು 10 ಬಾರಿ ದಿವಾಳಿಯ ಅಂಚಿಗೆ ತಲುಪಿತ್ತು.

ಆ ಸಂದರ್ಭದಲ್ಲಿ ಪತ್ನಿ ಶಿಲ್ಪಾ ಜಿ ತಮ್ಮ ಉಳಿತಾಯದಿಂದ ₹30 ಲಕ್ಷ ಹಾಗೂ ಚಿಕ್ಕಪ್ಪ ಡಾ. ಮುನಿ ರೆಡ್ಡಿ ₹10 ಲಕ್ಷ ಹೂಡಿಕೆ ಮಾಡಿದ್ದು ಉದ್ಯಮಕ್ಕೆ ನೆರವಾಯಿತು.

ಅಕ್ಷಯಕಲ್ಪದಿಂದ ರೈತರ ಆದಾಯಕ್ಕೆ ಹೊಸ ಮಾದರಿ

ಕುಮಾರ್ ಸ್ಥಾಪಿಸಿದ ಅಕ್ಷಯಕಲ್ಪ ಆರ್ಗ್ಯಾನಿಕ್ ಮೊದಲು ಡೈರಿ ಕ್ಷೇತ್ರದೊಂದಿಗೆ ಆರಂಭವಾಯಿತು. ಋತುಮಾನಕ್ಕೆ ಅವಲಂಬಿತ ಬೆಳೆಗಳ ಬದಲು ರೈತರಿಗೆ ನಿಯಮಿತ ಆದಾಯ ಸಿಗುವಂತೆ ಮಾಡುವ ಉದ್ದೇಶ ಇದರ ಹಿಂದಿತ್ತು.

ನಂತರ ಮಣ್ಣಿನ ನಿರ್ವಹಣೆ, ಜೇನು ಸಾಕಣೆ, ಕೋಳಿ ಸಾಕಣೆ, ಬಾಳೆ ಕೃಷಿ ಹಾಗೂ ಗೊಬ್ಬರ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉದ್ಯಮ ವಿಸ್ತರಿಸಿತು.

2,800 ಹಳ್ಳಿಗಳಲ್ಲಿ 2,800 ರೈತರು

ಇಂದು ಸಂಸ್ಥೆ ಸುಮಾರು 2,800 ಹಳ್ಳಿಗಳ 2,800 ರೈತರೊಂದಿಗೆ ಕೆಲಸ ಮಾಡುತ್ತಿದೆ ಎಂದು ಕುಮಾರ್ ಹೇಳಿದ್ದಾರೆ. ರೈತರ ಸರಾಸರಿ ವಯಸ್ಸು 32 ವರ್ಷವಾಗಿದ್ದು, ಅವರಲ್ಲಿ ಸುಮಾರು 1,200 ಮಂದಿ ಮಹಿಳೆಯರು.

ಕಂಪನಿಯ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕುಟುಂಬಕ್ಕೆ ಸರಾಸರಿ ಮಾಸಿಕ ಪಾವತಿ ₹1.28 ಲಕ್ಷದಷ್ಟಿತ್ತು. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಗ್ರಾಹಕ ಕಾರ್ಯಾಚರಣೆಗಳನ್ನು ವಿಸ್ತರಿಸಿರುವ ಸಂಸ್ಥೆ, ಮುಂಬೈ ಮತ್ತು ಪುಣೆಯಂತಹ ಮಾರುಕಟ್ಟೆಗಳತ್ತವೂ ಹೆಜ್ಜೆ ಇಟ್ಟಿದೆ.

ಒಂದು ಕಾಲದಲ್ಲಿ ಟೆಕ್ ಉದ್ಯೋಗ ತೊರೆದು ಅಪಾಯ ಸ್ವೀಕರಿಸಿದ್ದ ಶಶಿ ಕುಮಾರ್, ಕೃಷಿಯನ್ನೂ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ದೃಷ್ಟಿಕೋನದಿಂದ ನೋಡಿದರೆ ಯುವಕರಿಗೆ ಹೊಸ ವೃತ್ತಿ ಅವಕಾಶವಾಗಬಹುದು ಎಂಬ ಮಾದರಿಯನ್ನು ನಿರ್ಮಿಸಿದ್ದಾರೆ.

PREV
Read more Articles on
click me!

Recommended Stories

ಟೀ ಅಂಗಡಿಯಿಂದ ಪಿಜಿವರೆಗೆ: ಸಾಫ್ಟ್‌ವೇರ್ ಉದ್ಯೋಗಿಗಳನ್ನೇ ಮೀರಿಸಿದ ‘ಈ’ ಉದ್ಯೋಗಗಳು!
ಬೆಂಗಳೂರಲ್ಲಿ ಪತ್ತೆಯಾದ ಚಿನ್ನದ ಮಾತ್ರೆ ಉಗುಳುವ ವ್ಯಕ್ತಿ; ಈತ ಬಾಯಿ ತೆರೆದಾಗ ಬಂಗಾರ ಉದುರಿಬಿತ್ತು!