
ರಾಯ್ಪುರ್ (ಆ.12) ಚಿಕಿತ್ಸೆ ಫಲಿಸದೆ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ. ಪೇದೆ ಪತ್ನಿ ಹಾಗೂ ಕುಟುಂಬಸ್ಥರು ಮೃತದೇಹ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪತಿಯ ಸಾವಿನ ನೋವಿನಿಂದ ಪತ್ನಿ ನಿಧಾನವಾಗಿ ಹೊರಬರಲು ಆರಂಭಿಸುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಆಯುಷ್ಮಾನ್ ಭಾರತ್ ಕಳುಹಿಸಿದ ಮೆಸೇಜ್ ಪೊಲೀಸ್ ಪೇದೆ ಪತ್ನಿಯನ್ನು ಕಂಗಾಲು ಮಾಡಿದೆ. ಕಾರಣ ಈ ಸಂದೇಶದಲ್ಲಿ ಪ್ರೀತಿಯ ದೇವ್ ನಾರಾಯಣ್, ನೀವು ಚೇತರಿಕೆ ಕಂಡು ಮನೆಗೆ ಮರಳುತ್ತಿರುವ ಮಾಹಿತಿ ಕೇಳಿ ಸಂತೋಷ ತಂದಿದೆ ಎಂಬ ಮೆಸೇಜ್ ಬಂದಿದೆ. ಮೇಲ್ನೋಟಕ್ಕೆ ಇದು ತಪ್ಪಿ ಬಂದಿರುವ ಮೆಸೇಜ್ ಆದರೂ ಇದರ ಹಿಂದೆ ಗೋಲ್ಮಾಲ್ ನಡೆದಿರುವ ಅನುಮಾನವನ್ನು ಪೊಲೀಸ್ ಪೇದೆ ಪತ್ನಿ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ ಘಟನೆ ಚತ್ತೀಸಘಡದಲ್ಲಿ ನಡೆದಿದೆ.
ಜಶಪುರ ಜಿಲ್ಲೆಯ ಪೊಲೀಸ್ ಪೇದೆ ದೇವನಾರಾಯಣ ರಾಮ್ (390 ಅನಾರೋಗ್ಯದಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜೂನ್ 30 ರಂದು ಚಿಕಿತ್ಸೆ ಫಲಕಾರಿಯಾಗದೇ ದೇವನಾರಾಯಣ್ ಮೃತಪಟ್ಟಿದ್ದರು. ಪತ್ನಿ ಹಾಗೂ ಕುಟುಂಬಸ್ಥರು ಮೃತದೇಹ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇತ್ತ ಪತಿಯ ಮರಣ ಪ್ರಮಾಣ ಪತ್ರ ಪಡೆದು ಪೊಲೀಸ್ ಇಲಾಖೆಗೂ ಸಲ್ಲಿಕೆ ಮಾಡಿದ್ದಾರೆ.
ಆಗಸ್ಟ್ 6 ರಂದು ದೇವನಾರಾಯಣ್ ಅವರ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಆಯುಷ್ಮಾನ್ ಭಾರತ್ನಿಂದ ಮೆಸೇಜ್ ಬಂದಿದೆ. ಪ್ರೀತಿಯ ದೇವನಾರಾಯಣ್ ರಾಮ್, ನೀವು ಚೇತರಿಸಿಕೊಂಡು ಮನೆಗೆ ಮರಳುತ್ತಿರುವುದು ಸಂತೋಷ ನೀಡಿದೆ. ಆಯುಷ್ಮಾನ್ ಭಾರತ್ ಉಚಿತ ಆರೋಗ್ಯ ಸೇವೆಯಿಂದ ನೀವು ತೃಪ್ತರಾಗಿದ್ದೀರಿ ಎಂದು ಭಾವಿಸುತ್ತೇವೆ ಎಂಬ ಸಂದೇಶ ಇದಾಗಿತ್ತು. ಜೂನ್ 26ಕ್ಕೆ ಆಸ್ಪತ್ರೆ ದಾಖಲಾಗಿ, ಆಗಸ್ಟ್ 6ಕ್ಕೆ ಬಿಡುಗಡೆಯಾಗಿದ್ದಾರೆ ಎಂದು ಈ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.
ದೇವನಾರಾಯಣ್ ರಾಮ್ ಪತ್ತಿ ಸೀಮಾ ಕುಜುರ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದೇಶ ನೋಡಿ ಆಘಾತದ ಜೊತೆ ಇದರ ಹಿಂದಿನ ಮರ್ಮವೂ ಅರ್ಥವಾಗಿದೆ. ಇದು ತಪ್ಪಿ ಬಂದ ಮೆಸೇಜ್ ಅಲ್ಲ ಅನ್ನೋದು ಅರಿವಾಗಿದೆ. ಕಾರಣ ಮೃತ ರೋಗಿಗಳ ಹೆಸರಿನಲ್ಲಿ ಆಯುಷ್ಮಾನ್ ಭಾರತ್ ಮೂಲಕ ಹಣ ಕ್ಲೈಮ್ ಮಾಡಲಾಗುತ್ತಿರುವ ಸಾಧ್ಯತೆ ಇದೆ ಎಂದು ಸೀಮಾ ಕುಜುರ್ ಹೇಳಿದ್ದಾರೆ. ಹೀಗಾಗಿ ಈ ಕುರಿತು ತನಿಖೆಗ ಆಗ್ರಹಿಸಿದ್ದಾರೆ.
ಆಸ್ಪತ್ರೆ ಸ್ಪಷ್ಟನೆ
ಕ್ಲೈಮ್ ಕ್ಲೋಸ್ ಮಾಡಲು ವಿಳಂಬವಾಗಿದೆ. ಹೀಗಾಗಿ ಸ್ವಯಂ ಚಾಲಿತ ಸಂದೇಶ ರವಾನೆಯಾಗಿದೆ. ಕ್ಲೈಮ್ ಕ್ಲೋಸ್ ವಿಳಂಬದಿಂದ ಆಗಿರುವ ಪ್ರಮಾದ. ಇದರ ಹಿಂದೆ ಯಾವುದೇ ಗೋಲ್ಮಾಲ್ ಇಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಡೇಟಾ ಆಫರೇಟರ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ರೋಗಿ ಆಸ್ಪತ್ರೆಯಲ್ಲಿ ಇದ್ದ 5 ದಿನಗಳಿಗೆ 16,700 ರೂಪಾಯಿ ಮಾತ್ರ ಕಡಿತ ಮಾಡಲಾಗಿದೆ. ಹೆಚ್ಚುವರಿ ಹಣ ಕಡಿತ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.