
ಆತ್ಮ, ಭೂತ, ಪ್ರೇತ, ಪಿಶಾಚಿ ಇವೆಲ್ಲಾ ಇವೆಯೋ ಇಲ್ಲವೋ ಎಂದು ಬಹಳ ಚರ್ಚೆಗಳು ನಡೆಯುತ್ತಲೇ ಇವೆ. ಕೆಲವರು ತಾವು ಇವುಗಳನ್ನೆಲ್ಲಾ ನೋಡಿರುವುದಾಗಿ ಹೇಳಿದರೆ, ಮತ್ತೆ ಕೆಲವರು ಇದು ಮಾನಸಿಕ ಸಮಸ್ಯೆ ಅಷ್ಟೇ. ಭೂತ-ಪ್ರೇತ ಏನೂ ಇಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಅನಿಸಿಕೆ. ಇದರ ಇರುವಿಕೆ, ಇದರ ಅಸ್ತಿತ್ವದ ಬಗ್ಗೆ ಜನರಲ್ಲಿ ಇನ್ನೂ ಕುತೂಹಲ ಇದ್ದೇ ಇದೆ.
ಇದರ ನಡುವೆಯೇ ದೇವರು ಮೈಮೇಲೆ ಬರುವುದು ಎನ್ನುವ ಘಟನೆ ಬಹುತೇಕ ಕಡೆಗಳಲ್ಲಿ ನಡೆಯುವುದು ಇದೆ. ಇದರ ಬಗ್ಗೆಯೂ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆಗುತ್ತಲೇ ಇರುತ್ತವೆ. ಇದನ್ನು ನಂಬುವವರು ಎಷ್ಟು ಮಂದಿ ಇದ್ದಾರೋ, ಅಷ್ಟೇ ನಂಬದವರೂ ಇದ್ದಾರೆ. ದೇವರು ಬರುವ ವಿಷಯ ಒಂದೆಡೆಯಾದರೆ, ಬೇರೆಯವರ ಆತ್ಮ ಮೈಮೇಲೆ ಬರುತ್ತದೆ ಎನ್ನುವ ಮಾತು ಕೂಡ ಅಲ್ಲಲ್ಲಿ ಕೇಳಿಬರುವುದು ಉಂಟು.
ಅಂಥದ್ದೇ ಒಂದು ಘಟನೆ ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಸೊಸೆಯ ಮೈಮೇಲೆ ಮಾವನ ಆತ್ಮ ಬಂದಿದೆಯಂತೆ! ಚಂದ್ರಪ್ಪ ಎನ್ನುವವರಿಗೆ ಬೀಡಿ ಸೇದುವ ಚಟವಿತ್ತು. ಅವರು ಇದಾಗಲೇ ಸತ್ತು 10 ವರ್ಷಗಳ ಮೇಲಾಗಿವೆ. ಇದೀಗ ಅವರ ಸೊಸೆ ಹನುಮವ್ವ ಏಕಾಏಕಿ ಬೀಡಿ ಸೇದಲು ಶುರು ಮಾಡಿಬಿಟ್ಟಿದ್ದಾಳೆ. ಸೊಸೆಯಲ್ಲಿ ಆಗಿರುವ ಈ ಬದಲಾವಣೆ ನೋಡಿ ಮನೆಯವರು ದಂಗಾಗಿ ಹೋಗಿದ್ದಾರೆ. ಕೊನೆಗೆ, ಸೊಸೆ ಹನುಮವ್ವ, ನಾನು ಹನುವಮ್ಮ ಅಲ್ಲ, ಚಂದ್ರಪ್ಪ ಎಂದಾಗಿ ಎಲ್ಲರೂ ನಿಂತಲ್ಲೇ ಕುಸಿದು ಹೋಗಿದ್ದಾರೆ.
ಮಾವನ ಆತ್ಮ ಸೊಸೆಯ ಮೇಲೆ ಬಂದಿರುವ ವಿಷಯ ಹಳ್ಳಿಗಳಲ್ಲಿ ಹಲ್ಚಲ್ ಸೃಷ್ಟಿಸಿ, ಜನರು ದೌಡಾಯಿಸುತ್ತಿದ್ದಾರೆ. ನಿಜವಾಗಿಯೂ ಆಗಿದ್ದೇನು ಎನ್ನುವ ಬಗ್ಗೆ ಕೆಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ನಿಜಕ್ಕೂ ಮಾವನ ಆತ್ಮ ಸೊಸೆಯ ಮೇಲೆ ಬಂದಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈಕೆಗೆ ಬೀಡಿ ಸೇದುವ ಇಚ್ಛೆ ಉಂಟಾಗಿದ್ದರಿಂದ ಹೀಗೆ ಮಾಡಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಏನು ಈ ವಿಷ್ಯ ಎನ್ನುವುದು ತಿಳಿಯಬೇಕಿದೆ. ಸದ್ಯ ಇದರ ವಿಡಿಯೋಸಿಕ್ಕಾಪಟ್ಟೆ ವೈರಲ್ ಆಗ್ತಿದೆ.