
ಮಧ್ಯಪ್ರದೇಶದ ಸಿಧಿ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಏಪ್ರಿಲ್ 13 ರಂದು ವೈರಲ್ ಆದ ಒಂದು ಆಘಾತಕಾರಿ ವಿಡಿಯೋದಲ್ಲಿ, ಈ ಪೊಲೀಸರು ಕುಡಿದ ಮತ್ತಿನಲ್ಲಿ ರೋಗಿಯ ಬೆಡ್ ಮೇಲೆ ಮಲಗಿದ್ದರು. ಅಷ್ಟೇ ಅಲ್ಲ, ಒಬ್ಬಾತ ಆಸ್ಪತ್ರೆಯ ಕಸದ ಬುಟ್ಟಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಈ ಪೊಲೀಸರನ್ನು ಮಾರ್ಚ್ 28 ರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬನಿಗೆ ಕಾವಲು ಕಾಯಲು ನೇಮಿಸಲಾಗಿತ್ತು. ಈ ತಂಡದಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ ನರ್ಮದಾ ಪ್ರಸಾದ್ ಪ್ರಜಾಪತಿ, ಕಾನ್ಸ್ಟೇಬಲ್ಗಳಾದ ಉದಯರಾಜ್ ಸಿಂಗ್, ಜಿತೇಂದ್ರ ಸಿಂಗ್ ಮತ್ತು ಮನೀಶ್ ತಿವಾರಿ ಇದ್ದರು. ವಿಡಿಯೋದಲ್ಲಿ ಅವರ ಯೂನಿಫಾರ್ಮ್ಗಳನ್ನು ಪಕ್ಕದಲ್ಲೇ ನೇತುಹಾಕಿದ್ದ ದೃಶ್ಯ ಕೂಡ ಸೆರೆಯಾಗಿದೆ.
ಈ ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ, ಪೊಲೀಸರು ಕುಡಿದ ಮತ್ತಿನಲ್ಲಿ ಈ ರೀತಿ ಅಶಿಸ್ತಿನಿಂದ ವರ್ತಿಸಿದ್ದು ದೃಢಪಟ್ಟಿದೆ. ಮೇಲಾಧಿಕಾರಿಯ ಮೇಲ್ವಿಚಾರಣೆಯ ಕೊರತೆಯೂ ಸ್ಪಷ್ಟವಾಗಿತ್ತು. ಹೀಗಾಗಿ, ಸಿಧಿ ಪೊಲೀಸ್ ಇಲಾಖೆಯು ತೀವ್ರ ಅಶಿಸ್ತು, ಕರ್ತವ್ಯ ಲೋಪ ಮತ್ತು ಇಲಾಖೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರನ್ನೂ ತಕ್ಷಣವೇ ಅಮಾನತು ಮಾಡಿದೆ.
ಅಮಾನತುಗೊಂಡಿರುವ ಈ ನಾಲ್ವರು ಸಿಬ್ಬಂದಿಯನ್ನು ಸದ್ಯ ಸಿಧಿಯ ರಿಸರ್ವ್ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇಲಾಖಾ ನಿಯಮಗಳ ಪ್ರಕಾರ ಅವರ ವಿರುದ್ಧದ ತನಿಖೆ ಮುಂದುವರಿಯಲಿದೆ.