
ಬೆಂಗಳೂರು : ಸ್ಪೈಡರ್ಮ್ಯಾನ್ ಚಿತ್ರ ಈಗ ಸಕತ್ ಸದ್ದು ಮಾಡುತ್ತಿದೆ. ಹಲವಾರು ದಾಖಲೆಗಳನ್ನು ಈ ಚಿತ್ರ ಮುರಿದಿದೆ. ಇದರ ನಡುವೆಯೇ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ , ಕಿರಣ್ ಮುಜುಂದಾರ್ ಶಾ ಅವರು ಮಾಡಿರುವ ಟ್ವೀಟ್ ಮಾತ್ರ ಸಕತ್ ವೈರಲ್ ಆಗುತ್ತಿದೆ. ಇದು ಭಾರಿ ಚರ್ಚೆಗೂ ಗ್ರಾಸವಾಗಿದೆ. ಬೆಂಗಳೂರಿನ ಅವ್ಯವಸ್ಥೆಯ ಕುರಿತು ಆಗಾಗ್ಗೆ ಟೀಕೆ ಮಾಡುತ್ತಲೇ ಇರುವ ಕಿರಣ್ ಅವರು, ಇದೀಗ ಟೀಕೆಗೆ ಸ್ಪೈಡರ್ಮ್ಯಾನ್ ಅನ್ನು ಬಳಸಿಕೊಂಡಿದ್ದಾರೆ. Spider-Man was warned not to come to Bengaluru” ಎನ್ನುವ ವಾಕ್ಯದೊಂದಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ ಮಜುಂದಾರ್ ಶಾ, ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಸ್ಪೈಡರ್ಮ್ಯಾನ್ಗೆ ಬೆಂಗಳೂರಿಗೆ ಬರದಂತೆ ಅವರು ವಾರ್ನ್ ಮಾಡಿದ್ದಾರೆ.
ಅಷ್ಟಕ್ಕೂ ಬೆಂಗಳೂರು ಮಾತ್ರವಲ್ಲದೇ ಹಲವು ನಗರಗಳಲ್ಲಿ, ಕೇಬಲ್ ವೈಯರ್ಗಳು ಬೇಕಾಬಿಟ್ಟೆ ನೇತಾಡುತ್ತಲೇ ಇರುತ್ತವೆ. ಇದಾಗಲೇ ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ, ಕೆಲವು ಕಡೆಗಳಲ್ಲಿ ಕೇಬಲ್ ವೈಯರ್ಗಳು ತುಂಬಾ ತೊಂದರೆ ಉಂಟುಮಾಡುತ್ತಿವೆ. ಹಲವು ವರ್ಷಗಳಿಂದಲೂ ಇದು ದೊಡ್ಡ ಸಮಸ್ಯೆಯಾಗಿದೆ. ಕೆಲವರು ಬಲಿ ಕೂಡ ಆಗಿದ್ದಾರೆ. ಇದಾಗಲೇ, ಕಿರಣ್ ಅವರು, ಬೆಂಗಳೂರಿನ ಮೂಲಭೂತ ಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುತ್ತಲೇ ಬಂದಿದ್ದು, ಇದೀಗ ಈ ಕೇಬಲ್ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸ್ಪೈಡರ್ಮ್ಯಾನ್ ಚಿತ್ರ ಬಳಸಿಕೊಂಡಿದ್ದಾರೆ.
ಇದರಲ್ಲಿ ಅವರು, ಎಲೆಕ್ಟ್ರಿಕ್ ಪೋಲ್, ಅದನ್ನು ಸುತ್ತಿಕೊಂಡಿರುವ ನೂರೆಂಟು ಕೇಬಲ್’ಗಳ ಫೋಟೋವನ್ನು ತಮ್ಮ ಎಕ್ಸ್ ಪೋಸ್ಟಿಗೆ ಬಳಸಿಕೊಂಡಿದ್ದಾರೆ. ಜೊತೆಗೆ, ಸ್ಪೈಡರ್ ಮ್ಯಾನ್, ಆ ಕೇಬಲ್’ಗಳ ಗೊಂಚಲಿನ ಮಧ್ಯೆ ಕೂತು, ಕೇಬಲ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಬಳಸಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆ ನೀಡಿರುವ ಅವರು, ಬೆಂಗಳೂರಿಗೆ ಬರದಂತೆ ಸ್ಪೈಡರ್ ಮ್ಯಾನ್ ಅನ್ನು ಎಚ್ಚರಿಸಿದ್ದಾರೆ. ಈಗಾಗಲೇ, ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. ನೂರಾರು ಮಂದಿ ರಿಪೋಸ್ಟ್ ಮಾಡಿದ್ದರು.
ಆದರೆ ಇಲ್ಲೊಂದು ಚಿಕ್ಕ ಎಡವಟ್ಟಾಗಿದೆ. ಏಕೆಂದರೆ ಇದು ಎಐ ಫೋಟೋ ಆಗಿದ್ದು, ಅಲ್ಲಿ ಕನ್ನಡದ ಬದಲು ಬೇರೆ ಬೋರ್ಡ್ ಇರುವ ಕಾರಣ, ಹೀಗೆಲ್ಲಾ ಚಿತ್ರ ಬಳಸುವಾಗ ಕನ್ನಡದ ಬೋರ್ಡ್ ಇರುವ ಎಐ ಮಾಡಿ ಎಂದಿದ್ದಾರೆ ಹಲವರು. ಆದರೆ, ಈ ರೀತಿಯಾಗಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತಿರುವುದಕ್ಕೆ ಹಲವರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.