
ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಕೊಲೇಟ್ ಮತ್ತು ಕ್ಯಾಂಡಿ ಕೊಡದ ತಾಯಿಯ ವಿರುದ್ಧ ದೂರು ನೀಡಲು ಬಾಲಕ ತನ್ನ ತಂದೆಯೊಂದಿಗೆ ದೇದ್ತಲಾಯಿ ಪೊಲೀಸ್ ಠಾಣಾ ಚೌಕಿಗೆ ತೆರಳಿದ್ದ. ಅಲ್ಲಿ ಬಾಲಕ ಸಬ್ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರನ್ನು ಭೇಟಿಯಾಗಿ, ತನ್ನ ತಾಯಿ ತನ್ನ ಚಾಕೊಲೇಟ್ಗಳನ್ನು “ಕದ್ದಿದ್ದಾರೆ” ಎಂದು ದೂರು ನೀಡಿದ್ದಾನೆ. ಅಲ್ಲದೆ, ತಾಯಿಗೆ ಶಿಕ್ಷೆ ನೀಡಬೇಕು ಎಂದೂ ಹೇಳಿದ್ದಾನೆ.
ಮಗುವಿನ ಮಾತನ್ನು ನಿರ್ಲಕ್ಷಿಸದೆ ಪ್ರಿಯಾಂಕಾ ನಾಯಕ್ ಅವರು ತಾಳ್ಮೆಯಿಂದ ಆತನ ಮಾತು ಕೇಳಿದ್ದಾರೆ. ಬಳಿಕ ಪೆನ್ ಮತ್ತು ಪೇಪರ್ ತೆಗೆದುಕೊಂಡು ಆತನ ದೂರನ್ನು ಬರೆಯಲು ಮುಂದಾಗಿದ್ದಾರೆ. ನಂತರ ದೂರಿನ ಮೇಲೆ ಸಹಿ ಮಾಡುವಂತೆ ಕೇಳಿದಾಗ, ಬಾಲಕ ಪೇಪರ್ ಮೇಲೆ ಹಲವು ಗುರುತುಗಳನ್ನು ಹಾಕಿದ್ದಾನೆ. ಆತ ತನ್ನ ದೂರನ್ನು ನಿಜವಾಗಿಯೂ ಗಂಭೀರವಾಗಿ ತೆಗೆದುಕೊಂಡಿರುವಂತೆ ವರ್ತಿಸಿದ್ದು, ಈ ದೃಶ್ಯ ಎಲ್ಲರನ್ನೂ ನಗುವಂತೆ ಮಾಡಿದೆ.
ಮುಂದೇನಾಯ್ತು?
ಬಾಲಕನ ತಂದೆಯ ಪ್ರಕಾರ, ಆತನ ತಾಯಿ ಗದರಿಸಿದ್ದಲ್ಲದೆ ಚಾಕೊಲೇಟ್ ಮತ್ತು ಕ್ಯಾಂಡಿ ತಿನ್ನುವುದಕ್ಕೂ ನಿರ್ಬಂಧ ಹೇರಿದ್ದರು. ಇದರಿಂದ ಬೇಸರಗೊಂಡ ಬಾಲಕ ಪೊಲೀಸರ ಬಳಿ ದೂರು ನೀಡಲು ಬಂದಿದ್ದ. ಈ ಮುದ್ದಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕ ನ್ಯಾಯ ಪಡೆಯಲು ತೋರಿದ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುರ್ಹಾನ್ಪುರದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮಾತನಾಡಿ, ಬಾಲಕನಿಗೆ ಪೊಲೀಸರ ಬಗ್ಗೆ ವಿಶೇಷ ಆಸಕ್ತಿ ಇತ್ತು ಎಂದು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಗುವನ್ನು ಆತ್ಮೀಯವಾಗಿ ನಡೆಸಿಕೊಂಡಿದ್ದನ್ನೂ ಅವರು ಶ್ಲಾಘಿಸಿದ್ದಾರೆ.
ಜನರು ಪೊಲೀಸರ ಬಳಿ ದೂರು ನೀಡಲು ಹೆದರಬಾರದು ಎಂಬ ಸಂದೇಶವನ್ನೂ ಈ ಘಟನೆಯ ಮೂಲಕ ನೀಡಲಾಗಿದೆ. ಈ ವಿಡಿಯೋ ಅಂದಿನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಗಮನಕ್ಕೂ ಬಂದಿತ್ತು. ಅವರು ವಿಡಿಯೋ ಕಾಲ್ ಮೂಲಕ ಬಾಲಕನೊಂದಿಗೆ ಮಾತನಾಡಿ, ದೀಪಾವಳಿಗೆ ಚಾಕೊಲೇಟ್ಗಳು ಮತ್ತು ಸೈಕಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು.