
ದರ್ಶನ್ ಪರ ವಕೀಲರು ದರ್ಶನ್ಗೆ ಮರಣ ದಂಡನೆ ಕೊಟ್ಟುಬಿಡಿ ಅನ್ನೋ ಆಕ್ರೋಶದ ಮಾತನಾಡಿದ್ದಾರೆ. ಈ ನಡುವೆ ಪರಪ್ಪನ ಅಗ್ರಹಾರದಲ್ಲಿದ್ದ ಚಿತ್ರರಂಗದ ವ್ಯಕ್ತಿಯೊಬ್ಬ ಜೈಲಿನಲ್ಲಿ ದಾಸನ ಸ್ಥಿತಿ ಹೇಗಿದೆ ಅನ್ನೋದನ್ನ ಬಿಚ್ಚಿಟ್ಟಿದ್ದಾನೆ.
ಜೈಲಲ್ಲಿ ದರ್ಶನ್ ಪರದಾಟದ ಎಪಿಸೋಡ್ ಮುಂದುವರೆದಿದೆ. ಶನಿವಾರ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ದರ್ಶನ್ಗೆ ಮರಣ ದಂಡನೆ ಕೊಟ್ಟುಬಿಡಿ ಅನ್ನೋ ಆಕ್ರೋಶದ ಮಾತನಾಡಿದ್ದಾರೆ. ಈ ನಡುವೆ ಪರಪ್ಪನ ಅಗ್ರಹಾರದಲ್ಲಿದ್ದ ಚಿತ್ರರಂಗದ ವ್ಯಕ್ತಿಯೊಬ್ಬ ಜೈಲಿನಲ್ಲಿ ದಾಸನ ಸ್ಥಿತಿ ಹೇಗಿದೆ ಅನ್ನೋದನ್ನ ಬಿಚ್ಚಿಟ್ಟಿದ್ದಾನೆ. ಶನಿವಾರ 57ನೇ ಸಿಸಿಎಚ್ ಕೋರ್ಟ್ನಲ್ಲಿ ಫುಲ್ ಹೈಡ್ರಾಮಾ ನಡೆದಿದೆ. ಕಳೆದ ಒಂದು ತಿಂಗಳಿಂದಲೂ ಜೈಲಿನಲ್ಲಿ ಕನಿಷ್ಟ ಸೌಲತ್ತು ಕೊಡಿ ಅಂತ ದರ್ಶನ್ ಪರ ವಕೀಲರು ಮನವಿ ಸಲ್ಲಿಸ್ತಾನೇ ಇದ್ದಾರೆ. ಆದ್ರೆ ಅದು ಈಡೇರಿಲ್ಲ. ಈ ನಡುವೆ ಉದ್ದೇಶಪೂರ್ವಕವಾಗಿ ಈ ಪ್ರಕರಣದ ವಿಚಾರಣೆ ವಿಳಂಬ ಮಾಡಲು ಪ್ರಯತ್ನಿಸ್ತಾ ಇದ್ದಾರೆ ಅಂತ ಪ್ರಾಸಿಕ್ಯೂಶನ್ ಆರೋಪ ಮಾಡಿದ್ದಕ್ಕೆ, ದರ್ಶನ್ ಪರ ವಕೀಲರು ಆಕ್ರೋಶದಿಂದ ಮಾತನಾಡಿದ್ದಾರೆ. ನಾಳೆಯೇ ವಿಚಾರಣೆ ನಿಗದಿಪಡಿಸಿ ನಾಡಿದ್ದೇ ಮರಣದಂಡನೆ ಶಿಕ್ಷೆ ಕೊಟ್ಟು ಬಿಡಿ ಅಂತ ಬೇಸರ ಹೊರಹಾಕಿದ್ದಾರೆ.
ಅದೇ ಜೈಲಿನಲ್ಲಿರುವ ರೌಡಿ ಗುಬ್ಬಚ್ಚಿ ಸೀನ, ಜೈಲಿನಲ್ಲಿ ಬರ್ತ್ ಡೇ ಮಾಡಿಕೊಳ್ಳುತ್ತಾನೆ. ಆದರೆ ದರ್ಶನ್ಗೆ ಸಾಮಾನ್ಯ ಸೌಲಭ್ಯಗಳನ್ನ ಕೂಡ ನಿರ್ಲಕ್ಷಿಸಲಾಗಿದೆ. ಹಾಸಿಗೆ ದಿಂಬಷ್ಟೇ ಅಲ್ಲ ದರ್ಶನ್ಗೆ ಭದ್ರತೆ ಕಾರಣ ನೀಡಿ ಕನ್ನಡಿ, ಬಾಚಣಿಕೆ ಕೂಡ ಕೊಡ್ತಾ ಇಲ್ಲ. ನನ್ನ ಕ್ಲೈಂಟ್ ಏನೂ ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತ ವಾದ ಮಾಡಿ ಮಾಡಿದ್ದಾರೆ ದರ್ಶನ್ ಪರ ವಕೀಲರು. ಅಂತಿಮವಾಗಿ ಈ ದಿಂಬು, ಹಾಸಿಗೆ ಕುರಿತ ಆದೇಶ ಅಕ್ಟೋಬರ್ 29ಕ್ಕೆ ಕಾಯ್ದಿರಿಸಲಾಗಿದೆ. ಇತ್ತೀಚಿಗೆ ಆರೋಪವೊಂದನ್ನ ಹೊತ್ತು ಪರಪ್ಪನ ಅಗ್ರಹಾರ ಪಾಲಾಗಿದ್ದ ಯುವ ನಿರ್ದೇಶಕ ಹೇಮಂತ್ ರಿಚ್ಚಿ , ದಾಸನ ಸ್ಥಿತಿಯನ್ನ ಕಣ್ಣಾರೆ ನೋಡಿಕೊಂಡು ಬಂದಿದ್ದಾರೆ. ಸಿಗದ ಸೌಲಭ್ಯಗಳು, ಕಾಡುತ್ತಿರೋ ಬೆನ್ನು ನೋವಿನ ನಡುವೆ ದರ್ಶನ್ ನರಕ ಅನುಭವಿಸ್ತಾ ಇರೋದನ್ನ ಇವರು ಕಣ್ಣಾರೆ ನೋಡಿ ಬಂದಿದ್ದಾರೆ.
ಹೌದು ಪರಪ್ಪನ ಅಗ್ರಹಾರದ ಮೂರನೇ ಬ್ಯಾರಕ್ ಗೋಡೆಯ ಮೇಲೆ ಚಾಮುಂಡೇಶ್ವರಿ ದೇವಿ ಫೋಟೋವೊಂದು ಇದ್ದು, ದರ್ಶನ್ ಹೋಗ್ತಾ ಬರ್ತಾ ಅದಕ್ಕೆ ನಮಿಸಿ ಮುಂದಡಿ ಇಡ್ತಾರಂತೆ. ಬೆನ್ನುನೋವಿನಿಂದ ದರ್ಶನ್ ಕುಂಟುತ್ತಲೇ ಓಡಾಡ್ತಾರಂತೆ. ಹಾಸಿಗೆ ದಿಂಬು ಸೇರಿದಂತೆ ದರ್ಶನ್ ಗೆ ಯಾವ ಹೆಚ್ಚಿನ ಸೌಲತ್ತೂ ಇಲ್ಲ. ಅದ್ರಲ್ಲೂ ದರ್ಶನ್ ಪ್ರತಿ ನಡೆಯನ್ನೂ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗುತ್ತಂತೆ. ಕಳೆದ ಸಾರಿ ಜೈಲಲ್ಲಿ ದಾಸ ರೌಡಿಗಳ ಜೊತೆ ಸೇರಿ ದರ್ಬಾರ್ ಮಾಡಿದ್ದು, ಅದು ಜಗಜ್ಜಾಹೀರಾದ ಮೇಲೆ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ದರ್ಶನ್ ಬೇಲ್ ರದ್ದು ಮಾಡುವ ಮುನ್ನ ಸುಪ್ರೀಂ ಕೋರ್ಟ್ ಈ ವಿಚಾರವನ್ನ ಪ್ರಸ್ತಾಪ ಮಾಡಿತ್ತು. ಈ ಬಗ್ಗೆ ಜೈಲ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿತ್ತು. ಆಗಿನಿಂದಲೂ ಜೈಲು ಅಧಿಕಾರಿಗಳು ದರ್ಶನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿದ್ದಾರೆ,
ದರ್ಶನ್ನ ಹೊರಗಡೆ ವಾಕ್ ಮಾಡೋದಕ್ಕೆ ಬಿಟ್ರೆ ಬೇರೆ ಕೈದಿಗಳು ಮುಗಿಬೀಳ್ತಾರೆ ಅಂತ ಜೈಲು ಅಧಿಕಾರಿಗಳು ಕೋರ್ಟ್ ಎದುರೇ ಹೇಳಿದ್ರು. ಅದು ಸತ್ಯವೂ ಕೂಡ. ದಾಸನನ್ನ ಬ್ಯಾರಕ್ ಹೊರಗಡೆ ಬಿಟ್ರೆ ಬೇರೆ ಕೈದಿಗಳೆಲ್ಲಾ ಅಲ್ಲಿ ಸೇರ್ತಾರೆ. ಅವರನ್ನ ನಿಯಂತ್ರಿಸೋದು ದೊಡ್ಡ ಸವಾಲಾಗುತ್ತೆ. ಸೋ ಅನಿವಾರ್ಯವಾಗಿ ದರ್ಶನ್ನ ಬ್ಯಾರಕ್ನಲ್ಲಿ ಕೂಡಿ ಹಾಕಲಾಗುತ್ತೆ. ಹೀಗೆ ಒಂದೇ ಕಡೆ ಏಕಾಂಗಿಯಾಗಿ ಕುಳಿತು ಕುಳಿತು ಎಂಥವರೂ ಖಿನ್ನೆತೆಗೆ ಜಾರಿಬಿಡ್ತಾರೆ. ದರ್ಶನ್ ವಿಚಾರದಲ್ಲೂ ಅದೇ ಆಗ್ತಾ ಇದೆ. ಹೌದು ಒಂದು ಕಡೆಗೆ ಒಗ್ಗದ ಜೈಲೂಟ ಜೊತೆಗೆ ಕಾಡ್ತಾ ಇರೋ ಮಾನಸಿಕ ಸಮಸ್ಯೆ ನಡುವೆ ದರ್ಶನ್ ಕೃಶವಾಗಿ ಹೋಗಿದ್ದಾರಂತೆ.
ಜೈಲು ಅಂದ್ರೆ ನರಕ ಅಂತ ಸುಮ್ಮನೆ ಹೇಳ್ತಾರಾ..? ಅದು ಮಾನಸಿಕವಾಗಿ ದೈಹಿಕವಾಗಿ ಎಂಥವರನ್ನೂ ಕುಗ್ಗಿಸಿಬಿಡುತ್ತೆ. ಕಳೆದ ಬಾರಿ ಪರಪ್ಪನ ಅಗ್ರಹಾರದಲ್ಲಿ ಹೇಗಿದ್ರೋ ಗೊತ್ತಿಲ್ಲ. ಈ ಸಾರಿ ಮಾತ್ರ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನರಕ ಅನುಭವಿಸ್ತಾ ಇರೋದು ನಿಜ ಅಂತಾರೆ ಪ್ರತ್ಯಕ್ಷ ದರ್ಶಿ ಹೇಮಂತ್. ಜೊತೆಗೆ ಚಾಮುಂಡಿದೇವಿ ಫೋಟೊವೊಂದನ್ನ ಇಟ್ಟುಕೊಂಡಿದ್ದು ದರ್ಶನ್ , ದೇವಿ ಎದುರು ಪ್ರಾರ್ಥನೆ ಮಾಡ್ತಾ ಇದ್ದಾರಂತೆ. ಈ ಹಿಂದೆ ನ್ಯಾಯಾದೀಶರ ಮುಂದೆ ದರ್ಶನ್ ನನಗೆ ಚೂರು ವಿಷ ಕೊಟ್ಟುಬಿಡಿ ಅಂದಿದ್ರು. ಈಗ ದರ್ಶನ್ ಪರ ವಕೀಲರು ಅವರಿಗೆ ಮರಣ ದಂಡನೆ ಕೊಟ್ಟುಬಿಡಿ ಅಂದಿದ್ದಾರೆ. ಅಲ್ಲಿಗೆ ಜೈಲು ದಾಸನಿಗೆ ಅದ್ಯಾವಪರಿ ಮರಣ ವೇದನೆ ಕೊಟ್ಟಿರಬಹುದು ನೀವೇ ಊಹೆ ಮಾಡಿ.