
ಉಡುಪಿ(ಅ.27): ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟುಗಳು ಅದರಲ್ಲಿದ್ದ 12 ಮಂದಿ ಮೀನುಗಾರರೊಂದಿಗೆ ಗೋವಾ ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗದೆ ಆತಂಕಕ್ಕೆ ಕಾಣವಾಗಿವೆ.
ಇಲ್ಲಿನ ಮಿಥುನ್ ಕುಮಾರ್ ಎಂಬವರಿಗೆ ಸೇರಿರುವ ಸ್ವರ್ಣಜ್ಯೋತಿ ಮತ್ತು ಗಂಗಾಗಣೇಶ್ ಬೋಟುಗಳು ಅ.19ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದವು. 24ರವರೆಗೆ ಅವುಗಳು ಮಾಲೀಕರೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದವು.
ಉಡುಪಿ ಜಿಲ್ಲೆಯಲ್ಲಿ ಇಂದೂ ರೆಡ್ ಅಲರ್ಟ್
ಅಂದು ಸಂಜೆ 4.30 ಗಂಟೆಗೆ ಕೊನೆಯ ಕರೆಯಲ್ಲಿ ಎರಡೂ ಬೋಟುಗಳು ಗೋವಾದ ವಾಸ್ಕೋ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿರುವುದಾಗಿ ಅದರಲ್ಲಿದ್ದ ಮೀನುಗಾರರು ತಿಳಿಸಿದ್ದರು. ಆದರೆ, ಅದರ ನಂತರ ಆ ಎರಡೂ ಬೋಟುಗಳೊಂದಿಗೆ ಮೊಬೈಲ್ ಅಥವಾ ವಯರ್ಲೆಸ್ ಸಂಪರ್ಕ ಸಾಧ್ಯವಾಗಿಲ್ಲ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ. ಎರಡೂ ಬೋಟುಗಳಲ್ಲಿ ತಲಾ 6 ಮಂದಿ ಮೀನುಗಾರರಿದ್ದಾರೆ. ಗಂಗಾಗಣೇಶ್ ಬೋಟಿನಲ್ಲಿ ಮುರುಡೇಶ್ವರದ ಪುರುಷೋತ್ತಮ ಮತ್ತು ಸ್ವರ್ಣಜ್ಯೋತಿ ಬೋಟಿನಲ್ಲಿ ಮಂಜುನಾಥ ತಾಂಡೇಲ ಕ್ಯಾಪ್ಟನ್ ಆಗಿದ್ದಾರೆ ಎಂದವರು ಶುಕ್ರವಾರ ಕರಾವಳಿ ರಕ್ಷಣಾ ಪೋಲಿಸ್ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕರಾವಳಿ ರಕ್ಷಣಾ ಪೋಲಿಸರು ಗೋವಾ ಪೋಲಿಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ: 5 ಸಾವಿರ ಹಣತೆಗಳ ಉಚಿತ ವಿತರಣೆ
ಶುಕ್ರವಾರ ಗೋವಾದ ವಾಸ್ಕೋದಲ್ಲಿ ಮುಳುಗುತ್ತಿದ್ದ ರಾಮರಕ್ಷಾ ಎಂಬ ಬೋಟಿನಿಂದ 6 ಮಂದಿ ಮೀನುಗಾರನ್ನು ಗೋವಾ ಕರಾವಳಿ ಪೋಲಿಸರು ರಕ್ಷಿಸಿದ್ದಾರೆ. ಶನಿವಾರ ಗೋವ ಗಡಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 2 ಬೋಟುಗಳಲ್ಲಿದ್ದ 28 ಮೀನುಗಾರನ್ನು ರಕ್ಷಿಸಲಾಗಿದೆ. ಈ ಮೂರು ಬೋಟುಗಳು ದಡದಲ್ಲಿದ್ದವರೊಂದಿಗೆ ಸಂಪರ್ಕದಲ್ಲಿದು ತಾವು ಅಪಾಯದಲ್ಲಿರುವುದಾಗಿ ತಿಳಿಸಿದ್ದರಿಂದ ಅವರನ್ನು ಸಕಾಲದಲ್ಲಿ ರಕ್ಷಿಸಲಾಗಿದೆ.
ಆದರೆ, ಸ್ವರ್ಣಜ್ಯೋತಿ ಮತ್ತು ಗಂಗಾಗಣೇಶ್ ಬೋಟುಗಳೊಂದಿಗೆ ಎರಡು ದಿನಗಳಿಂದ ಯಾವುದೇ ಸಂಪರ್ಕ ಇಲ್ಲದಿರುವುದರಿಂದ, ಮಲ್ಪೆಯ ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.