
'ಕೆಲವು ಯೂಟ್ಯೂಬರ್ಗಳ ಹಣದ ದಾಹಕ್ಕೆ ನನ್ನ ಜೀವನ ಬಲಿಯಾಗುತ್ತಿದೆ. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ನಮ್ಮನ್ನು ಕಾಪಾಡಿ...' ಎಂದು ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ನಟಿ ಮುಖ್ಯಮಂತ್ರಿಗಳಿಗೆ ಅತ್ಯಂತ ಭಾವುಕ ಹಾಗೂ ಕಣ್ಣೀರಿಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರ ವ್ಯಕ್ತಿತ್ವ ಹರಣ (Character Assassination) ಮಾಡುವುದು ಇಂದು ಕೆಲವು ಯೂಟ್ಯೂಬ್ ಚಾನೆಲ್ಗಳಿಗೆ ಹಣ ಮಾಡುವ ದಾರಿಯಾಗಿದೆ. ಇದರಿಂದ ನೊಂದಿರುವ ಮಲೆಯಾಳಂ ನಟಿ ರೇಖಾ ರತೀಶ್, ತಮಗೆ ಆಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಅದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ತನಗೆ ಯೂಟ್ಯೂಬರ್ಗಳ ಕಿರುಕುಳ ತಾಳಲಾಗುತ್ತಿಲ್ಲ, ದಯವಿಟ್ಟು ರಕ್ಷಣೆ ಕೊಡಿ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ (Chief Minister of Kerala Pinarayi Vijayan) ಅವರ ಬಳಿ ಮನವಿ ಮಾಡಿದ್ದಾರೆ.
ಕಳೆದ ಎರಡು-ಮೂರು ತಿಂಗಳಿಂದ ಕೆಲವು ಯೂಟ್ಯೂಬ್ ಚಾನೆಲ್ಗಳು ಸತತವಾಗಿ ರೇಖಾ ರತೀಶ್ ಅವರ ಬಗ್ಗೆ ಅಸಭ್ಯ ಕ್ಯಾಪ್ಶನ್ಗಳನ್ನು ನೀಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿವೆ. 'ನನ್ನನ್ನು ಅತ್ಯಂತ ಕೆಟ್ಟವಳಂತೆ ಬಿಂಬಿಸಲಾಗುತ್ತಿದೆ. ಯಾವುದೋ ಸುಳ್ಳು ಸುದ್ಧಿಗಳಿಗೆ ಮಸಾಲೆ ಬೆರೆಸಿ ನನ್ನ ಘನತೆಗೆ ಧಕ್ಕೆ ತರುತ್ತಿದ್ದಾರೆ. ವ್ಯಕ್ತಿಯೊಬ್ಬಳನ್ನು ಬದುಕಲು ಬಿಡದಂತೆ ಈ ಯೂಟ್ಯೂಬರ್ಗಳು ಒತ್ತಡ ಹೇರುತ್ತಿದ್ದಾರೆ' ಎಂದು ರೇಖಾ ಅಳಲು ತೋಡಿಕೊಂಡಿದ್ದಾರೆ.
ರೇಖಾ ರತೀಶ್ ಅವರು ಕಳೆದ ಏಳೆಂಟು ತಿಂಗಳಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಮಗನ ಜವಾಬ್ದಾರಿ ಅವರ ಮೇಲಿದೆ. 'ನಾನು ಒಬ್ಬ ಒಂಟಿ ಮಹಿಳೆ, ನನ್ನ ಮಗನಿಗಾಗಿ ಬದುಕಲು ಹೋರಾಡುತ್ತಿದ್ದೇನೆ. ಕೆಲಸವಿಲ್ಲದ ಕಾರಣ ಮಾನಸಿಕವಾಗಿ ಈಗಾಗಲೇ ಕುಗ್ಗಿದ್ದೇನೆ. ಇಂತಹ ಸಮಯದಲ್ಲಿ ಈ ಯೂಟ್ಯೂಬರ್ಗಳು ಸುಳ್ಳು ಸುದ್ಧಿಗಳನ್ನು ಹರಡಿ ನನ್ನನ್ನು ಬದುಕಲು ಬಿಡುತ್ತಿಲ್ಲ. ಈ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ ಸರ್' ಎಂದು ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ್ದಾರೆ.
ವಿಡಿಯೋದಲ್ಲಿ ಅತ್ಯಂತ ಗಂಭೀರವಾದ ಮಾತೊಂದನ್ನು ಹೇಳಿರುವ ರೇಖಾ'ನಾನೀಗ ಈ ವಿಡಿಯೋ ಮಾಡಲು ಕಾರಣವೇನೆಂದರೆ, ಒಂದು ವೇಳೆ ಈ ಮಾನಸಿಕ ಕಿರುಕುಳ ತಾಳಲಾರದೆ ನನಗೇನಾದರೂ ಆದರೆ, ಅದಕ್ಕೆ ಈ ಯೂಟ್ಯೂಬರ್ಗಳೇ ನೇರ ಕಾರಣ ಎಂದು ಇಡೀ ಜಗತ್ತಿಗೆ ತಿಳಿಯಲಿ. ಇದರಿಂದಾದರೂ ಈ ಕಿರುಕುಳ ನಿಲ್ಲಬೇಕು' ಎಂದು ಎಚ್ಚರಿಸಿದ್ದಾರೆ.
ಇದು ಕೇವಲ ರೇಖಾ ರತೀಶ್ ಅವರ ಸಮಸ್ಯೆಯಲ್ಲ. ಚಿತ್ರರಂಗದಲ್ಲಿರುವ ಅನೇಕ ಕಲಾವಿದರು, ವಿಶೇಷವಾಗಿ ಮಹಿಳಾ ಮಣಿಯರು ಈ ರೀತಿಯ 'ವ್ಯೂಸ್' (Views) ಹಪಾಹಪಿಯ ಯೂಟ್ಯೂಬ್ ಚಾನೆಲ್ಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. 'ನನ್ನ ಕ್ಷೇತ್ರದ ಅನೇಕರನ್ನು ಬಳಸಿಕೊಂಡು ಕೆಲವು ಯೂಟ್ಯೂಬರ್ಗಳು ಹಣ ಮಾಡುತ್ತಿದ್ದಾರೆ. ಇಂತಹ ಸೈಬರ್ ಕ್ರೈಂಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನನಗಾದ ಅನುಭವ ಇನ್ಯಾವ ಸಹೋದರ-ಸಹೋದರಿಯರಿಗೂ ಆಗಬಾರದು' ಎಂದು ಅವರು ವಿನಂತಿಸಿದ್ದಾರೆ.
ಸದ್ಯ ರೇಖಾ ರತೀಶ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ವಲಯದಲ್ಲಿ ಯೂಟ್ಯೂಬ್ ಚಾನೆಲ್ಗಳ ನೈತಿಕತೆಯ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಸರ್ಕಾರ ಈ ಬಗ್ಗೆ ಎಂತಹ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.