Tumakuru Accident ಬಸ್ ಲಾರಿ ನಡುವೆ ಅಪಘಾತ, ಚಾಲಕ ಸ್ಥಳದಲ್ಲೇ ಸಾವು!

By Suvarna NewsFirst Published May 4, 2022, 12:07 AM IST
Highlights
  • ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ
  • ಬಸ್ ಚಾಲಕ ಸ್ಥಳದಲ್ಲೇ ಸಾವು,ಲಾರಿ ಚಾಲಕನಿಗೂ ಗಾಯ
  • ಐವರಿಗೆ ಗಾಯ, ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ

ತುಮಕೂರು(ಮೇ.03): ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದ ಬೆನ್ನಲ್ಲೇ ತುಮಕೂರಿನಲ್ಲಿ ಮತ್ತೊಂದು ಆ್ಯಕ್ಸಿಡೆಂಟ್ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ದೊಡ್ಡಾಲದ ಮರದ ಬಳಿಕ  ಲಾರಿ ಹಾಗೂ ಬಸ್ ನಡುವಿನ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರು ಯಿಂದ ಚಿತ್ರದುರ್ಗದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ದೊಡ್ಡಾಲದ ಮರದ ಬಳಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಿರಾದಿಂದ ಬರುತ್ತಿದ್ದ ಲಾರಿಗೂ ಬಸ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದೆ. 

ಭೀಕರ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಲಾರಿ ಚಾಲಕನಿಗೂ ಗಾಯಗಳಾಗಿದೆ. ಬಸ್‌ನಲ್ಲಿದ್ದ ಐವರಿಗೆ ಗಾಯಗಳಾಗಿದೆ. ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮೊದಲು ತುಮಕೂರಿನಲ್ಲಿ ಕಾರು ಹಾಗೂ ಲಾರಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಬಲಿಯಾದ ಘಟನೆ ನಡೆದಿತ್ತು. ರಂಜಾನ್ ಹಬ್ಬ ಮುಗಿಸಿ ಕುಟುಂಬ‌ ಸಮೇತ ತನ್ನ ಪತ್ನಿಯ ತವರೂರು ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಚನ್ನಪಟ್ಟಣದಿಂದ ರಂಜಾನ್‌ ಹಬ್ಬ ಮುಗಿಸಿಕೊಂಡು ಭದ್ರಾವತಿಯ ಕಡೆಗೆ ತೆರಳುತ್ತಿದ್ದ ವೇಳೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಮೂವರ ಸಾವನ್ನಪ್ಪಿದ್ದಾರೆ. ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕೃಷ್ಣಪ್ಪನ ಕೊಪ್ಪಲು ಬಳಿ ಕಲ್ಲು ತುಂಬಿಕೊಂಡು ಕೇರಳ ಕಡೆಗೆ ತೆರಳುತ್ತಿದ್ದ ಲಾರಿ, ಕಾರಿನಲ್ಲಿ ತೆರಳುತ್ತಿದ್ದ ಚನ್ನಪಟ್ಟಣದ ಜಾಮೀಯಾ ಮಸೀದಿಯ ಮೌಲ್ವಿ ಸೈಯದ್‌ ಮಹಮದ್‌ ನಜ್ಜಿ(42), ನಾಜೀಯಾ(30), ಸೈಯದ್‌ ಹಸ್ಸಿ(1) ಸ್ಥಳದಲ್ಲಿ ಸಾವನ್ನಪ್ಪಿದ್ದು, ಖಾಸಿಂ(6) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಮೃತೂರು ಸಿಪಿಐ ಅರುಣ್‌ ಹುಲಿಯೂರುದುರ್ಗ ಪಿಎಸ್‌ಐ ಚೇತನ್‌ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಪ್ರತ್ಯೇಕ ರಸ್ತೆ ಅಪಘಾತ- ಐವರ ದುರ್ಮರಣ
ಕಲಬುರಗಿ ನಗರದ ಹುಮನಾಬಾದ ರಸ್ತೆಯ ತಾವರಗೇರಾ ಕ್ರಾಸ್‌ ಬಳಿಯ ಸಲಾಮ್‌ ಟೇಕಡಿ ಮತ್ತು ಹುಮನಾಬಾದ ರಿಂಗ್‌ ರಸ್ತೆಯ ಮಣೂರ ಆಸ್ಪತ್ರೆ ಹತ್ತಿರ ಸಂಭವಿಸಿದ ಪ್ರತ್ಯೇಕ ಎರಡು ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.

ತಾವರಗೇರಾ ಕ್ರಾಸ್‌ ನ ಸಲಾಮ್‌ ಟೇಕಡಿ ಬಳಿ ಬಸ್‌ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಮೇಲೆ ಹೊರಟಿದ್ದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಶ್ರೀರಾಮಪಲ್ಲಿಯ ಸಾಯಿಕಿರಣ್‌ ರೆಡ್ಡಿ (25) ಮತ್ತು 25 ವರ್ಷ ವಯಸ್ಸಿನ ಇನ್ನೋರ್ವ ಯುವಕ ಮೃತಪಟ್ಟಿದ್ದು, ಆತನ ಹೆಸರು ತಿಳಿದುಬಂದಿಲ್ಲ.

ಇನ್ನು ನಗರದ ಹುಮನಾಬಾದ ರಿಂಗ್‌ ರಸ್ತೆಯ ಮಣೂರ ಆಸ್ಪತ್ರೆ ಹತ್ತಿರ ಲಾರಿಗೆ ಹಿಂದಿನಿಂದ ಬೈಕ್‌ ಡಿಕ್ಕಿ ಹೊಡೆದು ಸುಲ್ತಾನಪುರ ಕ್ರಾಸ್‌ ನ ವೆಂಕಟೇಶ ತಂದೆ ಅಂಬಾದಾಸ (21), ನಗರದ ಬಸವೇಶ್ವರ ಕಾಲೋನಿಯ ಶಿವಕುಮಾರ ತಂದೆ ಮಹೇಶ (20), ಆದರ್ಶ ನಗರದ ಲಿಂಗರಾಜ ತಂದೆ ಸಿದ್ದಣ್ಣ (17) ಮೃತಪಟ್ಟಿದ್ದಾರೆ. ಇದರಲ್ಲಿ ವೆಂಕಟೇಶ ಸ್ಥಳದಲ್ಲಿಯೇ ಮೃತಪಟ್ಟರೆ, ಶಿವಕುಮಾರ ಮತ್ತು ಲಿಂಗರಾಜ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಸಂಚಾರಿ ಪೊಲೀಸ್‌ ಠಾಣೆ-2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪಿಐ ಶಾಂತಿನಾಥ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೆಲ್ಮೆಟ್‌ ಧರಿಸಿದ್ದರೂ ಜೀವ ಉಳಿಯಲಿಲ್ಲ:

ನಗರದ ಹುಮನಾಬಾದ ರಸ್ತೆಯ ತಾವರಗೇರಾ ಹತ್ತಿರದ ಸಲಾಮ್‌ ಟೇಕಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಇಬ್ಬರು ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರರ ತಲೆಯ ಮೇಲೆ ಹಾದು ಹೋಗಿರುವುದರಿಂದ ಅವರ ಜೀವ ಉಳಿಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 

click me!